ಪ್ರಕರಣಗಳ ಬಾಕಿ ಉಳಿಯುವಿಕೆಯಿಂದ ಸಣ್ಣ, ಮಧ್ಯಮ ಕೈಗಾರಿಕೆಗಳು ಮುಚ್ಚುತ್ತಿವೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೌಲ್

ಇಂತಹ ಉದ್ದಿಮೆಗಳು ಉದ್ಯೋಗ ಸೃಷ್ಟಿಗೆ ಕಾರಣವಾಗುವುದಲ್ಲದೆ, ದೇಶದ ಶ್ರೀಮಂತ ಮತ್ತು ಬಡ ವಲಯದ ನಡುವಿನ ಅಂತರ ಕಡಿಮೆ ಮಾಡುತ್ತವೆ ಎಂದು ಅವರು ತಿಳಿಸಿದರು.
MSME Book Launch
MSME Book Launch

ಅಭಿವೃದ್ಧಿಯನ್ನೇ ಕುರುಡಾಗಿ ಧ್ಯಾನಿಸಿದರೆ ಉದ್ಯೋಗ ಸೃಷ್ಟಿಯ ತನ್ನ ಪ್ರಯತ್ನದಲ್ಲಿ ಭಾರತ ಸಾಫಲ್ಯ ಕಾಣಲು ಸಾಧ್ಯವಿಲ್ಲ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (ಎಂಎಸ್‌ಎಂಇ) ಉತ್ತೇಜಿಸುವ ಮೂಲಕ ಸರ್ವತೋಮುಖ ಬೆಳವಣಿಗೆಗೆ ಮುಂದಾಗುವುದು ಈಗಿನ ಅಗತ್ಯ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಇತ್ತೀಚೆಗೆ ತಿಳಿಸಿದರು.

ವಕೀಲರಾದ ಅಮಿತ್ ಜಾರ್ಜ್ ಮತ್ತು ತಾರಿಕ್ ಖಾನ್ ಅವರು ರಚಿಸಿರುವ ʼಲಾ ರಿಲೇಟಿಂಗ್‌ ಟು ಮೈಕ್ರೊ, ಸ್ಮಾಲ್‌ ಅಂಡ್‌ ಮೀಡಿಯಂ ಎಂಟರ್‌ಪ್ರೈಸ್‌ʼ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

Also Read
ಹಾಥ್‌ರಸ್‌ ಅತ್ಯಾಚಾರ ಸಂತ್ರಸ್ತೆಯ ಸಂಬಂಧಿಗಳಿಗೆ ಉದ್ಯೋಗ, ಕುಟುಂಬ ಸ್ಥಳಾಂತರ ಪರಿಗಣಿಸಲು ಅಲಾಹಾಬಾದ್ ಹೈಕೋರ್ಟ್ ಸೂಚನೆ

ಇಂತಹ ಉದ್ದಿಮೆಗಳು ಉದ್ಯೋಗ ಸೃಷ್ಟಿಗೆ ಕಾರಣವಾಗುವುದಲ್ಲದೆ, ದೇಶದ ಶ್ರೀಮಂತ ಮತ್ತು ಬಡ ಪ್ರದೇಶಗಳ ನಡುವಿನ ಅಂತರ ಕಡಿಮೆ ಮಾಡುತ್ತವೆ ಎಂದು ಅವರು ತಿಳಸಿದರು. ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೀವ್ ಶಕ್ಧೆರ್ ಮತ್ತು ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯಾ. ಕೌಲ್‌ ಅವರ ಭಾಷಣದ ಪ್ರಮುಖಾಂಶಗಳು

  • ಕೇಂದ್ರೀಕೃತ ಕೈಗಾರಿಕೀಕರಣದಲ್ಲಿ ಕುರುಡು ನಂಬಿಕೆ ಇರಿಸುವುದು ಏಕಸ್ವಾಮ್ಯವನ್ನು ಹೆಚ್ಚಿಸುತ್ತದೆ. ಬಹುಶಃ ಅದು ಪ್ರಗತಿಯ ಹಾದಿಯಲ್ಲ.

  • ತೊಂಬತ್ತರ ದಶಕದ ಸುಧಾರಣೆಗಳು ಅಭಿವೃದ್ಧಿ ಕಾರ್ಯಸೂಚಿಯನ್ನು ಪ್ರೋತ್ಸಾಹಿಸಿದರೂ ನೀತಿ ನಿರೂಪಕರಿಗೆ ಉದ್ಯೋಗ ಸೃಷ್ಟಿ ಪ್ರಮುಖ ಸವಾಲಾಗಿ ಉಳಿದಿದೆ. ಅತಿಸಣ್ಣ ಆರ್ಥಿಕತೆಯಲ್ಲಿ ಒಂದೇ ಗಾತ್ರ ಸರ್ವಾನ್ವಯ ಎಂಬ ಸೂತ್ರ ಎಷ್ಟು ಅಸಮರ್ಥವಾಗಿದೆ ಎಂಬುದನ್ನು ಚೀನಾ ಆರ್ಥಿಕತೆಯಿಂದ ನಾವು ಅರಿಯಬೇಕು.

  • ಭಾರತ ಒಂದು ಅನನ್ಯ ದೇಶವಾಗಿದ್ದು, ಭೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಇಲ್ಲಿನ ನೆಲಕ್ಕೆ ಅನುಗಣವಾಗಿ ಪರಿಹಾರ ವಿಶಿಷ್ಟ ರೀತಿಯಲ್ಲಿ ದೊರೆಯಬೇಕು.

  • ತಮ್ಮ ಪ್ರದೇಶಗಳಲ್ಲಿ ಉದ್ಯೋಗದ ಕೊರತೆಯಿಂದಾಗಿ ಹಳ್ಳಿಗಳಿಂದ ನಗರಗಳಿಗೆ ದೊಡ್ಡ ಪ್ರಮಾಣದಲ್ಲಿ ಜನ ವಲಸೆ ಹೋಗುತ್ತಿದ್ದಾರೆ. ಅವರು ಹಳ್ಳಿಗಳಲ್ಲೇ ಉಳಿದು ತಾವು ಮಾಡುವ ಕೆಲಸದಿಂದ ಹಣ ಗಳಿಸಲು ಅತಿಸಣ್ಣ, ಸಣ್ಣ, ಮಧ್ಯಮ ಉದ್ದಿಮೆಗಳು ಅನುಕೂಲ ಮಾಡಿಕೊಡಬೇಕು. ಅವಕಾಶಗಳು ಇದ್ದಲ್ಲಿ ಯಾರೂ ತಮ್ಮ ಊರುಗಳಿಂದ ದೂರ ಹೋಗುವುದಿಲ್ಲ

  • ಅಸಮರ್ಥ ವ್ಯಾಜ್ಯ ಪರಿಹಾರ ವಿಧಾನಗಳಿಂದಾಗಿ ಇಂತಹ ಉದ್ದಿಮೆಗಳ ಪ್ರವರ್ಧಮಾನಕ್ಕೆ ಅಡ್ಡಿಯಾಗಿದೆ. ನ್ಯಾಯಾಂಗ ಪರಿಹಾರಕ್ಕೆ ಕೆಲಸ ಮಾಡುವುದು ಶಾಸಕಾಂಗ ಪರಿಹಾರಕ್ಕೆ ಕೆಲಸ ಮಾಡುವಷ್ಟೇ ಮುಖ್ಯ.

  • ನಿರಂತರವಾಗಿ ಪ್ರಕರಣಗಳು ಬಾಕಿ ಉಳಿಯುತ್ತಿರುವುದು ಎಂಎಸ್‌ಎಂಇ ಬೆಳವಣಿಗೆಗೆ ಅಡ್ಡಿಯಾಗಿದೆ. ವ್ಯಾಜ್ಯ ಇತ್ಯರ್ಥ ವಿಳಂಬವಾಗುತ್ತಿರುವುದರಿಂದ ಸಣ್ಣ ಕಂಪೆನಿಗಳು ಸ್ಥಗಿತವಾಗಿ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.

  • ಎಂಎಸ್‌ಎಂಇ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬಹುದೇ ಅಥವಾ ತಾತ್ಕಾಲಿಕ ಆಧಾರದ ಮೇಲೆ ಪರಿಣಿತ ಸದಸ್ಯರೊಂದಿಗೆ ವಿಶೇಷ ನ್ಯಾಯಮಂಡಳಿಗಳನ್ನು ರಚಿಸಬಹುದೇ ಎಂಬ ಕುರಿತು ಚಿಂತಿಸಬೇಕಿದೆ. ಈ ಕುರಿತು ಎಂಎಸ್‌ಎಂಇ ವಲಯದ ಪಾಲುದಾರರೇ ಪರಿಹಾರ ಕಂಡುಕೊಳ್ಳಬೇಕು.

ನ್ಯಾಯಮೂರ್ತಿ ರಾಜೀವ್ ಶಕ್ದೆರ್‌ ಅವರು ಮಾತನಾಡಿ ಎಂಎಸ್‌ಎಂಇಗಳು ಹೊಸ ಪರಿಕಲ್ಪನೆಯಲ್ಲ. ಸ್ವಾತಂತ್ರ್ಯ ದೊರೆತ ಸಮಯದಿಂದಲೇ ಸಣ್ಣ ಕೈಗಾರಿಕೆಗಳ ಚಿಂತನೆ ಬೇರೂರಿದೆ. ಆರ್ಥಿಕತೆಯ ಉದಾರೀಕರಣದವರೆಗೆ ಸಣ್ಣ ಕೈಗಾರಿಕೆಗಳು ರಕ್ಷಾಕವಚಗಳಾಗಿ ಕೆಲಸ ಮಾಡುತ್ತಿದ್ದವು ಎಂದು ಹೇಳಿದರು. ಪುಸ್ತಕದ ಕುರಿತು ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಎಂಎಸ್‌ಎಂಇಗಳ ಅನುಕೂಲಗಳ ಕುರಿತು ಮಾತನಾಡಿದ ಸಿದ್ಧಾರ್ಥ್‌ ಲೂತ್ರಾ 6.33 ಕೋಟಿ ಎಂಎಸ್‌ಎಂಇಗಳು 11 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿವೆ. ನಮ್ಮ ಆರ್ಥಿಕತೆ ಬೆಳೆಯುತ್ತಿದ್ದರೂ, ಉದ್ಯೋಗದ ಪ್ರಮಾಣ ಕಡಿಮೆಯಾಗುತ್ತಿದೆ. ಈ ಸವಾಲಿಗೆ ಪರಿಹಾರವೆಂದರೆ ಎಂಎಸ್‌ಎಂಇಗಳು ಉದ್ಯೋಗಗಳನ್ನು ಜನರ ಬಳಿಗೆ ಒಯ್ಯುವುದಾಗಿದೆ.

Related Stories

No stories found.
Kannada Bar & Bench
kannada.barandbench.com