₹105 ಕೋಟಿ ತೆರಿಗೆ ವಸೂಲಿ: ಐಟಿಎಟಿ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ನೋಟಿಸ್‌ಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಮನವಿಯನ್ನು ಮಾರ್ಚ್ 8ರಂದು ಐಟಿಎಟಿ ತಿರಸ್ಕರಿಸಿತ್ತು.
ದೆಹಲಿ ಹೈಕೋರ್ಟ್, ಕಾಂಗ್ರೆಸ್ ಪಕ್ಷ
ದೆಹಲಿ ಹೈಕೋರ್ಟ್, ಕಾಂಗ್ರೆಸ್ ಪಕ್ಷ

ಆದಾಯ ತೆರಿಗೆ (ಐಟಿ) ಇಲಾಖೆಯು ₹105 ಕೋಟಿಗಿಂತಲೂ ಹೆಚ್ಚಿನ ತೆರಿಗೆ ಪಾವತಿಸುವಂತೆ ತನಗೆ ನೀಡಿದ್ದ ನೋಟಿಸ್‌ಗೆ ತಡೆ ನೀಡಲು ನಿರಾಕರಿಸಿದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಆದೇಶ ಪ್ರಶ್ನಿಸಿ ಕಾಂಗ್ರೆಸ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೇಲಾ ಅವರಿದ್ದ ಪೀಠದೆದುರು ಹಿರಿಯ ವಕೀಲ ವಿವೇಕ್ ತಂಖಾ ಪ್ರಕರಣ ಪ್ರಸ್ತಾಪಿಸಿದ್ದರು. ಪ್ರಕರಣ ಆಲಿಸಲು ನ್ಯಾಯಾಲಯ ಇಂದು ಸಮ್ಮತಿ ಸೂಚಿಸಿದೆ.

"ಚುನಾವಣೆ ಉತ್ತುಂಗದಲ್ಲಿರುವ ಸಮಯ ಇದಾಗಿದ್ದು ಕಾಂಗ್ರೆಸ್‌ ಬಳಿ ಹಣ ಇಲ್ಲದೆ ಅದು ಹೇಗೆ ಹೋರಾಡಲು ಸಾಧ್ಯವಾಗುತ್ತದೆ? ಪಕ್ಷವನ್ನು ಈ ಹಿಂದೆ ರಕ್ಷಿಸಿದ್ದ ಐಟಿಎಟಿ ಈಗ ರಕ್ಷಣೆಗೆ ಬಂದಿಲ್ಲ" ಎಂದು ತಂಖಾ ವಾದಿಸಿದರು. ಈ ಹಂತದಲ್ಲಿ ನ್ಯಾಯಾಲಯ, ಪ್ರಕರಣವನ್ನು ಇಂದು ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು.

2018-19ರ ತೆರಿಗೆ ನಿರ್ಧರಣಾ ಸಾಲಿನಲ್ಲಿ ಬಾಕಿ ಇರುವ ₹105 ಕೋಟಿ ರೂಪಾಯಿಗೂ ಹೆಚ್ಚಿನ ತೆರಿಗೆ ಪಾವತಿಸುವಂತೆ ಐಟಿ ಇಲಾಖೆ ಈ ಹಿಂದೆ ಕಾಂಗ್ರೆಸ್‌ಗೆ ನೋಟಿಸ್ ನೀಡಿತ್ತು.

ಕಾಂಗ್ರೆಸ್‌ಗೆ ಆದಾಯ ತೆರಿಗೆ ವಿನಾಯಿತಿ ನಿರಾಕರಿಸುವ ವಿಚಾರದಲ್ಲಿ ಐ ಟಿ ಅಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ ಎಂದು ಮಾರ್ಚ್ 8, 2024 ರಂದು ಹೊರಡಿಸಿದ ಆದೇಶದಲ್ಲಿ ಐಟಿಎಟಿ ತೀರ್ಪು ನೀಡಿತು. ಅಧಿಕಾರಿಗಳ ವಿನಾಯಿತಿ ನಿರಾಕರಣೆ ವಿರುದ್ಧ ಬಲವಾದ ಪ್ರಾಥಮಿಕ ವಾದ ಮಂಡಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಆಗ ಅದು ಹೇಳಿತ್ತು.

ತನಗೆ ಯಾವುದೇ ಆದಾಯ ಬರುತ್ತಿಲ್ಲ ಎಂದು ಕಾಂಗ್ರೆಸ್‌ ಘೋಷಿಸಿದ್ದನ್ನು ಜುಲೈ 2021ರಲ್ಲಿ ನಿರಾಕರಿಸಿದ್ದ ಐಟಿ ಅಧಿಕಾರಿಗಳು ₹105 ಕೋಟಿಗಿಂತಲೂ ಅಧಿಕ ತೆರಿಗೆ ಸಂದಾಯ ಮಾಡುವಂತೆ ಸೂಚಿಸಿದ್ದರು.

ನಿಗದಿತ ಅವಧಿ ಮೀರಿ ತೆರಿಗೆ ರಿಟರ್ನ್ ಸಲ್ಲಿಸಲಾಗಿದ್ದು ವಿವಿಧ ವ್ಯಕ್ತಿಗಳಿಂದ ಪಕ್ಷ 14,49,000 ರೂಪಾಯಿ ʼದೇಣಿಗೆʼ ಸ್ವೀಕರಿಸಿದೆ. ಪ್ರತಿಯೊಂದು ದೇಣಿಗೆ ಸ್ವೀಕಾರವೂ ₹2,000ಕ್ಕಿಂತ ಹೆಚ್ಚಿನ ಮೊತ್ತದ್ದಾಗಿದೆ ಎಂಬ ಆಧಾರದ ಮೇಲೆ ತೆರಿಗೆ ಸಂದಾಯ ಮಾಡುವಂತೆ ನೋಟಿಸ್‌ ನೀಡಲಾಗಿತ್ತು.

ರಾಜಕೀಯ ಪಕ್ಷಗಳಿಗೆ ತೆರಿಗೆಯಿಂದ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸುವ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 13ಎಯನ್ನು ಈ ನೋಟಿಸ್‌ ಉಲ್ಲಂಘಿಸುತ್ತದೆ ಎನ್ನಲಾಗಿತ್ತು.

ಐಟಿ ಇಲಾಖೆ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಕಾಂಗ್ರೆಸ್ ಹೇಳಿದ ಹಿನ್ನೆಲೆಯಲ್ಲಿ 2024 ರ ಫೆಬ್ರವರಿಯಲ್ಲಿ ವಿವಾದ ತಲೆದೋರಿತ್ತು.

2024ರ ಫೆಬ್ರವರಿಯಲ್ಲಿ ಕಾಂಗ್ರೆಸ್ ತನ್ನ ಬ್ಯಾಂಕ್ ಖಾತೆಗಳನ್ನು ಐಟಿ ಇಲಾಖೆ ಸ್ಥಗಿತಗೊಳಿಸಿದೆ ಎಂದು ಹೇಳಿಕೊಂಡ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿತು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಂಕಷ್ಟ ತಂದೊಡ್ಡುವ ಉದ್ದೇಶ ತೆರಿಗೆ ಇಲಾಖೆಯು ಆರಂಭಿಸಿರುವ ವಸೂಲಾತಿ ಪ್ರಕ್ರಿಯೆಯ ಹಿಂದೆ ಇದೆ ಎಂದು ಐಟಿಎಟಿ ಎದುರು ಕಾಂಗ್ರೆಸ್‌ ಅಳಲು ತೋಡಿಕೊಂಡಿತ್ತು.

ಆದರೆ ತಾನು ಕಾಂಗ್ರೆಸ್ ಖಾತೆಗಳಿಗೆ ಸಂಬಂಧಿಸಿದ ವಹಿವಾಟು ಸ್ಥಗಿತಗೊಳಿಸಲು ಬ್ಯಾಂಕುಗಳಿಗೆ ಯಾವುದೇ ಆದೇಶ ಅಥವಾ ನಿರ್ದೇಶನ ನೀಡಿಲ್ಲ. ಬದಲಿಗೆ ತೆರಿಗೆ ಬಾಕಿ ಪಾವತಿಸುವಂತೆ ಮಾತ್ರ ಸೂಚಿಸಿದ್ದಾಗಿ ಐಟಿಎಟಿಗೆ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ತಿಳಿಸಿತ್ತು.

ಕಾಂಗ್ರೆಸ್‌ ನಿಗದಿತ ಗಡುವಿನೊಳಗೆ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಬೇಕಿತ್ತು ಎಂದು ಮೂರು ದಿನಗಳ ಹಿಂದೆ ಐಟಿಎಟಿಯ ವಿಸ್ತೃತ ತೀರ್ಪಿನಲ್ಲಿ ವಿವರಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com