Deepika singh Rajawat
Deepika singh Rajawat

ಟ್ವೀಟ್ ಪ್ರಕರಣ: ವಕೀಲೆ ದೀಪಿಕಾ ರಜಾವತ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ ಜಮ್ಮು ನ್ಯಾಯಾಲಯ

ನವರಾತ್ರಿಯ ಸಂದರ್ಭದಲ್ಲಿ ಮಾಡಲಾದ ಟ್ವೀಟ್‌ಗೆ ಬಿಜೆಪಿ ಐಟಿ ಸೆಲ್‌ ಕೋಮುಬಣ್ಣ ಬಳಿದಿದೆ ಎಂದು ದೀಪಿಕಾ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.
Published on

ನವರಾತ್ರಿಯ ಸಂದರ್ಭದಲ್ಲಿ ಮಾಡಲಾದ ಟ್ವೀಟ್‌ಗೆ ಸಂಬಂಧಿಸಿದಂತೆ ಜಮ್ಮು ಪ್ರಧಾನ ಸೆಷನ್ಸ್‌ ನ್ಯಾಯಾಲಯವು ವಕೀಲೆ ದೀಪಿಕಾ ರಜಾವತ್‌ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನಿರೀಕ್ಷಣಾ ಜಾಮೀನು ಅರ್ಜಿಯ ಸಂಬಂಧ ವಾದಗಳನ್ನು ಆಲಿಸಿದ ನ್ಯಾಯಾದೀಶ ಸಂಜೀವ್‌ ಗುಪ್ತಾ, ಪ್ರಕರಣದಲ್ಲಿ ಬಂಧನದಿಂದ ಮಧ್ಯಂತರ ರಕ್ಷಣೆ ಪಡೆಯಲು ದೀಪಿಕಾ ಅರ್ಹರು ಎಂದು ಅಭಿಪ್ರಾಯಪಟ್ಟರು. ಒಂದು ವೇಳೆ ದೀಪಿಕಾ ಅವರನ್ನು ಬಂಧಿಸಿದರೆ ಮುಂದಿನ ವಿಚಾರಣೆವರೆಗೆ ಆಕೆಯನ್ನು ರೂ. 50,000 ಮೊತ್ತದ ಬಾಂಡ್‌ ಆಧಾರದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರ್ಟ್‌ ತಿಳಿಸಿದೆ. ಅಲ್ಲದೆ ತನಿಖೆಗೆ ಸಹಕರಿಸುವಂತೆ ದೀಪಿಕಾ ಅವರಿಗೆ ಸೂಚಿಸಿದೆ. ದೀಪಿಕಾ ಪರವಾಗಿ ಹಿರಿಯ ವಕೀಲ ಪಿ ಎನ್‌ ರೈನಾ ವಾದ ಮಂಡಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾದ ದೀಪಿಕಾ ಅವರ ಟ್ವೀಟ್‌ ಹೀಗಿದೆ:

ಟ್ವೀಟ್‌ಗೆ ಸಂಬಂಧಿಸಿದಂತೆ, 294 (ಅಶ್ಲೀಲ ಕೃತ್ಯಗಳು), 295-ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (ಬಿ) (2) (ಕಿಡಿಗೇಡಿತನ) ಅಡಿಯಲ್ಲಿ ದೀಪಿಕಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಆದರೆ ಟ್ವೀಟ್‌ ಮಾಡಲಾದ ಚಿತ್ರದಲ್ಲಿ ಹಿಂದೂ ಧರ್ಮವನ್ನು ದುರುಪಯೋಗಪಡಿಸಿಕೊಂಡಿಲ್ಲ ಅಥವಾ ಹಿಂದೂಗಳ ಭಾವನೆಯನ್ನೂ ನೋಯಿಸುತ್ತಿಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರವನ್ನು ಇದು ಎತ್ತಿ ತೋರಿಸುತ್ತದೆ. ಬಿಜೆಪಿ ಐಟಿ ಸೆಲ್ ತನ್ನ ಟ್ವೀಟ್‌ಗೆ "ಕೋಮು ಬಣ್ಣ" ನೀಡಿದೆ ಎಂದು ದೀಪಿಕಾ ಪ್ರತಿಪಾದಿಸಿದರು. ದೀಪಿಕಾ ಅವರಿಗೆ ಈ ಹಿಂದೆ ಜೀವಬೆದರಿಕೆಯೊಡ್ಡಿದ್ದ ರಾಕೇಶ್‌ ಭಜರಂಗಿ ಎಂಬಾತನೇ ಸುಳ್ಳು ಮತ್ತು ಕ್ಷುಲ್ಲಕ ದೂರು ಸಲ್ಲಿಸಿದ್ದಾರೆ ಎಂದು ದೀಪಿಕಾ ಪರ ವಕೀಲರು ಪೀಠಕ್ಕೆ ತಿಳಿಸಿದರು.

Kannada Bar & Bench
kannada.barandbench.com