ನ್ಯಾಯಾಧೀಶರು ತಮ್ಮ ತತ್ವಗಳಿಗೆ ಕಟಿಬದ್ಧರಾಗಿರಬೇಕು, ತೀರ್ಪು ನೀಡುವಲ್ಲಿ ನಿರ್ಭೀತರಾಗಿರಬೇಕು: ನ್ಯಾ. ಎನ್‌ ವಿ ರಮಣ

ತಮ್ಮ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ ಆರೋಪ ಮಾಡಿರುವ ಬೆನ್ನಲ್ಲೇ ನ್ಯಾ. ರಮಣ ʼನಿರ್ಭೀತʼ ಎಂಬ ಪದ ಬಳಸಿ ಮಾತನಾಡಿದ್ದಾರೆ.
Justice NV Ramana
Justice NV Ramana

ನ್ಯಾಯಾಧೀಶರು ತೀರ್ಪು ನೀಡುವಾಗ ನಿರ್ಭೀತರಾಗಿರಬೇಕು ಮತ್ತು ಎಲ್ಲಾ ಅಡೆತಡೆಗಳ ವಿರುದ್ಧ ಧೈರ್ಯವಾಗಿ ನಿಲ್ಲಬೇಕು ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎನ್‌ ವಿ ರಮಣ ಕರೆ ನೀಡಿದ್ದಾರೆ.

ಆಗಸ್ಟ್ 27 ರಂದು ನಿಧನರಾದ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಆರ್‌ ಲಕ್ಷ್ಮಣನ್‌ ಅವರ ಗೌರವಾರ್ಥ ಶನಿವಾರ ಮದ್ರಾಸ್ ವಕೀಲರ ಸಂಘ ​​ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ನ್ಯಾಯಮೂರ್ತಿ ರಮಣ ಮಾತನಾಡಿದರು. ತಮ್ಮ ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಭ್ರಷ್ಟಾಚಾರದ ಆರೋಪ ಮಾಡಿದ ಬಳಿಕ ರಮಣ ಅವರು ಪಾಲ್ಗೊಂಡ ಮೊದಲ ಸಾರ್ವಜನಿಕ ಸಭೆ ಇದು. ಅವರ ಭಾಷಣದ ವಿವರ ಹೀಗಿದೆ:

Also Read
ಜಗನ್‌ ನಡೆ ಖಂಡಿಸಿದ ಸುಪ್ರೀಂಕೋರ್ಟ್‌ ವಕೀಲರ ಪರಿಷತ್‌: ಆದರೆ ನಿರ್ಣಯದಿಂದ ದೂರ ಉಳಿದರೇಕೆ ಪರಿಷತ್ತಿನ ಅಧ್ಯಕ್ಷರು?

“ಸುಪ್ರೀಂಕೋರ್ಟಿನ ಭಾವಿ ಮುಖ್ಯ ನ್ಯಾಯಮೂರ್ತಿಯಾಗಿರುವ ರಮಣ ಅವರ ಮಾತುಗಳು ಹೀಗಿವೆ: ಒಬ್ಬ ವ್ಯಕ್ತಿ ಉತ್ತಮ ರೀತಿಯಲ್ಲಿ ಜೀವಿಸಲು ಅವನೊಳಗೆ ಅನೇಕ ಗುಣಗಳಿರಬೇಕು. : ನಮ್ರತೆ, ತಾಳ್ಮೆ, ದಯೆ, ಅದಮ್ಯ ಕರ್ತವ್ಯ ನೈತಿಕತೆ ಮತ್ತು ಸತತ ಕಲಿಕೆಯ ಉತ್ಸಾಹ ಹಾಗೂ ತಮ್ಮನ್ನು ತಾವು ಸುಧಾರಿಸಿಕೊಳ್ಳುವ ಗುಣ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವಿಶೇಷವಾಗಿ, ನ್ಯಾಯಾಧೀಶರಾದವರು ತಮ್ಮ ತತ್ವಗಳಿಗೆ ಕಟಿಬದ್ಧರಾಗಿರಬೇಕು ಹಾಗೂ ತೀರ್ಪು ನೀಡುವಾಗ ನಿರ್ಭೀತರಾಗಿರಬೇಕು. ಜೊತೆಗೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಲ್ಲಬೇಕು”.

ನ್ಯಾ. ಎನ್‌ ವಿ ರಮಣ

ಅಲ್ಲದೆ ʼನ್ಯಾಯಾಂಗದ ಬಹುದೊಡ್ಡ ಶಕ್ತಿ ಎಂದರೆ ಅದರ ಮೇಲೆ ಜನರು ಇರಿಸಿರುವ ನಂಬಿಕೆ ಎಂದು ಕೂಡ ರಮಣ ಹೇಳಿದ್ದಾರೆ.

"ನ್ಯಾಯಾಂಗದ ಬಹುದೊಡ್ಡ ಶಕ್ತಿ ಎಂದರೆ ಅದರ ಮೇಲಿರುವ ಜನರ ನಂಬಿಕೆ. ಈ ನಂಬಿಕೆ, ವಿಶ್ವಾಸ ಮತ್ತು ಸ್ವೀಕಾರಾರ್ಹತೆಯನ್ನು ಆಜ್ಞಾಪಿಸಲಾಗದು, ಬದಲಿಗೆ ಅವುಗಳನ್ನು ಗಳಿಸಿಕೊಳ್ಳಬೇಕು. ಇತ್ತೀಚೆಗೆ ಇಹಲೋಕ ತ್ಯಜಿಸಿದ ನ್ಯಾಯಮೂರ್ತಿ ಲಕ್ಷ್ಮಣನ್ ಈ ರೀತಿಯ ಗುಣಗಳನ್ನು ಬೆಳೆಸಿಕೊಂಡು ದೇಶ ಕಂಡ ಉತ್ತಮ ನ್ಯಾಯಮೂರ್ತಿ ಎಂದು ಸಾಬೀತುಪಡಿಸಿದ್ದಾರೆ” ಎಂದರು.

Also Read
‘ಸುಪ್ರೀಂ’ಗೆ ಪತ್ರ ಬರೆದ ಆಂಧ್ರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ: ಸಿಎಂ ಜಗನ್‌ ವಿರುದ್ಧ ಆರೋಪಗಳ ಸುರಿಮಳೆ

ನ್ಯಾಯಮೂರ್ತಿ ಲಕ್ಷ್ಮಣನ್ " ಹೃದಯಕ್ಕೆ ತುಂಬಾ ಹತ್ತಿರವಾಗಿದ್ದರು" ಎಂದು ಅವರು ಹೇಳಿದರು. ಅಲ್ಲದೆ ಲಕ್ಷ್ಮಣನ್‌ ʼತಮ್ಮ ಸ್ನೇಹಿತರು ಮತ್ತು ಸಂಗಾತಿಗಳನ್ನು ಎಂದಿಗೂ ಮರೆಯಲಿಲ್ಲ. ನಿಜ ನಾಯಕನಂತೆ ಅವರು ಸದಾ ಎಲ್ಲರ ಕಾಳಜಿ ಮಾಡಿದರು” ಎಂದು ಸ್ಮರಿಸಿದರು.

ನ್ಯಾಯಮೂರ್ತಿ ಲಕ್ಷ್ಮಣನ್ ಮೊದಲ ತಲೆಮಾರಿನ ವಕೀಲರಾಗಿದ್ದರು. 23 ವರ್ಷಗಳ ಕಾಲ ವಕೀಲರಾಗಿ ಅಭ್ಯಾಸ ಮಾಡಿದ ನಂತರ 1990 ರಲ್ಲಿ ಮದ್ರಾಸ್ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು ಮೂರು ಬಾರಿ ಕೇರಳ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರಾಜಸ್ತಾನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಅಲ್ಲದೆ ಅವರು ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು. 2002ರಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದರು. ನಂತರ ಅವರನ್ನು ದೇಶದ ಕಾನೂನು ಆಯೋಗದ 18ನೇ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

Related Stories

No stories found.
Kannada Bar & Bench
kannada.barandbench.com