
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬುಧವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ ಅವರು ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಗವಾಯಿ ಅವರಿಗೆ ಗೌಪ್ಯತಾ ವಿಧಿ ಬೋಧಿಸಿದರು. ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೇರುತ್ತಿರುವ ಮೊದಲ ಬೌದ್ಧ ಧರ್ಮೀಯ ಹಾಗೂ ದಲಿತ ಸಮುದಾಯದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದ್ದು.
ನ್ಯಾಯಮೂರ್ತಿ ಗವಾಯಿ ಅವರು ನವೆಂಬರ್ 23, 2025ರಂದು ನಿವೃತ್ತರಾಗಲಿದ್ದಾರೆ. ನಿಕಟಪೂರ್ವ ಸಿಜೆಐ ಸಂಜೀವ್ ಖನ್ನಾ ಅವರ ನಿವೃತ್ತಿಯಿಂದ ತೆರವಾದ ಹುದ್ದೆಯನ್ನು ನ್ಯಾ. ಗವಾಯಿ ಆಲಂಕರಿಸಿದ್ದಾರೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ ನವೆಂಬರ್ 24, 1960ರಂದು ಜನಿಸಿದ ನ್ಯಾಯಮೂರ್ತಿ ಗವಾಯಿ, ಅಂಬೇಡ್ಕರ್ ತತ್ವಗಳಲ್ಲಿ ಆಳವಾಗಿ ಬೇರೂರಿರುವ ಕುಟುಂಬದಿಂದ ಬಂದವರು. ಅವರ ತಂದೆ ಆರ್ ಎಸ್ ಗವಾಯಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಪ್ರಮುಖ ನಾಯಕರಾಗಿದ್ದರು. ಜೊತೆಗೆ ಬಿಹಾರ, ಸಿಕ್ಕಿಂ ಮತ್ತು ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.