ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ. ಚಂದ್ರಚೂಡ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮಂಗಳವಾರ ನಿವೃತ್ತರಾದ ನಿಕಟಪೂರ್ವ ಸಿಜೆಐ ಯು ಯು ಲಲಿತ್ ಅವರಿಂದ ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ನವೆಂಬರ್ 11, 1959 ರಂದು ಜನಿಸಿದ ನ್ಯಾ. ಚಂದ್ರಚೂಡ್ 1979ರಲ್ಲಿ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ 1982ರಲ್ಲಿ ಪದವಿ ಪೂರ್ಣಗೊಳಿಸಿದ ಅವರು ಎಲ್ಎಲ್ಎಂ ಪದವಿ ಪಡೆದದ್ದು ಇಂಗ್ಲೆಂಡ್ನ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ. ಬಳಿಕ ಅದೇ ವಿವಿಯಿಂದ ಡಾಕ್ಟರ್ ಆಫ್ ಜುರಿಡಿಶಿಯಲ್ ಸೈನ್ಸಸ್ (ಎಸ್ಜೆಡಿ) ಪದವಿ ಸ್ವೀಕಾರ.
1998ರಿಂದ 2000 ರವರೆಗೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ. 1998 ರಲ್ಲಿ ಬಾಂಬೆ ಹೈಕೋರ್ಟ್ನ ಹಿರಿಯ ನ್ಯಾಯವಾದಿಯಾಗಿ ನೇಮಕ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು, ಮಹಿಳಾ ಜೀತ ಕಾರ್ಮಿಕರ ಹಕ್ಕುಗಳು, ಕೆಲಸದ ಸ್ಥಳದಲ್ಲಿ ಎಚ್ಐವಿ ಪೀಡಿತರ ಹಕ್ಕುಗಳು, ಗುತ್ತಿಗೆ ಕಾರ್ಮಿಕರ ಹಕ್ಕುಗಳು. ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದಂತೆ ತೀವ್ರ ಕಾನೂನು ಹೋರಾಟದಲ್ಲಿ ಭಾಗಿ.
ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ಮಾರ್ಚ್ 29, 2000 ರಂದು ನೇಮಕ. ಅಕ್ಟೋಬರ್ 31, 2013 ರಂದು ಅಲಹಾಬಾದ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ. ಮೇ 13, 2016 ರಂದು ಸುಪ್ರೀಂ ಕೋರ್ಟ್ಗೆ ಪದೋನ್ನತಿ.
ಆಳುವವರ ವಿರುದ್ಧ ಭಿನ್ನ ತೀರ್ಪುಗಳು ಸೇರಿದಂತೆ ಹಲವು ಗಮನಾರ್ಹ ತೀರ್ಪುಗಳನ್ನು ಅವರು ನೀಡಿದ್ದಾರೆ. ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠದಲ್ಲಿ, ʼಆಧಾರ್ ಕಾಯಿದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ್ದು ಅಸಾಂವಿಧಾನಿಕʼ ಎಂದು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ ಏಕೈಕ ನ್ಯಾಯಮೂರ್ತಿ ಅವರಾಗಿದ್ದರು.
ನ್ಯಾ. ಚಂದ್ರಚೂಡ್ ಅಧ್ಯಕ್ಷತೆಯ ಸುಪ್ರೀಂ ಕೋರ್ಟ್ ಇ ಸಮಿತಿ ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಮೂಲ ಸೌಕರ್ಯ ಒದಗಿಸುವಲ್ಲಿ, ಅದರಲ್ಲಿಯೂ ಕೋವಿಡ್ ದಾಳಿ ಮಾಡಿದ್ದ ವೇಳೆ ಅದರ ಪ್ರಮುಖ ಪಾತ್ರ ವಹಿಸಿತ್ತು.