ಸುಪ್ರೀಂ ಕೋರ್ಟ್ನಲ್ಲಿ ಕ್ಯಾಬ್ ಅಗ್ರಿಗೇಟರ್ಸ್ ಪ್ರಕರಣದ ವಿಚಾರಣೆಯು ಪೀಠ ಮತ್ತು ವಕೀಲರ ನಡುವಿನ ಸ್ನೇಹವನ್ನು ಅನಾವರಣಗೊಳಿಸಿತು (ಮೇರು ಟ್ರಾವೆಲ್ಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ವರ್ಸಸ್ ಭಾರತೀಯ ಸ್ಪರ್ಧಾ ಆಯೋಗ).
ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಹಿರಿಯ ವಕೀಲ ಪಿ ಚಿದಂಬರಂ ಅವರು ಈ ಹಿಂದೆ ಹಿರಿಯ ವಕೀಲರಾಗಿದ್ದಾಗ ಪದೋನ್ನತಿಗೂ ಮುಂಚೆ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರು ಉಬರ್ ಪರವಾಗಿ ವಾದಿಸಿದ್ದರು ಎಂದರು. “ನ್ಯಾಯಮೂರ್ತಿ ನರಸಿಂಹ ಅವರು ಪ್ರಕರಣವೊಂದರಲ್ಲಿ ಉಬರ್ ಪ್ರತಿನಿಧಿಸಿದ್ದರು” ಎಂದು ಚಿದಂಬರಂ ಹೇಳಿದರು.
ಆಗ ನ್ಯಾಯಮೂರ್ತಿ ನರಸಿಂಹ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು. ನ್ಯಾ. ನರಸಿಂಹ ಅವರು “ಹೌದು. ಮೇ 9ರಂದು ಮುಂದಿನ ಸೋಮವಾರ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಲಾಗುವುದು” ಎಂದರು.
ಹಿತಾಸಕ್ತಿ ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದಾದ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಕ್ಕಾಗಿ “ನ್ಯಾಯಾಲಯದ ಮುಂದೆ ಈ ವಿಚಾರ ಪ್ರಸ್ತಾಪಿಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ” ಎಂದು ಚಿದಂಬರಂ ಹೇಳಿದರು.
ಇದಕ್ಕೆ ನ್ಯಾ. ನರಸಿಂಹ ಅವರು “ಇದಕ್ಕೆ ನೀವು ಕ್ಷಮೆ ಕೇಳಬೇಕಾಗಿಲ್ಲ. ಇದನ್ನು ನನಗೆ ನೆನಪಿಸಿದ್ದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸಬೇಕು” ಎಂದರು.
ಆಗ ಪೀಠದ ನೇತೃತ್ವ ವಹಿಸಿದ್ದ ನ್ಯಾ. ಎಲ್ ನಾಗೇಶ್ವರ ರಾವ್ ಅವರು ಈ ಸಂಬಂಧ ಅಡ್ವೊಕೇಟ್ ಆನ್ ರೆಕಾರ್ಡ್ ಅವರು ಮುಂಚಿತವಾಗಿ ನ್ಯಾಯಾಲಯಕ್ಕೆ ತಿಳಿಸಬೇಕಿತ್ತು. “ನಿಮ್ಮ ವಕೀಲರಿಗೆ ಇದನ್ನು ನ್ಯಾಯಾಲಯಕ್ಕೆ ತಿಳಿಸಿ ಎಂದು ಹೇಳಬೇಕಿತ್ತು ಮಿಸ್ಟರ್ ಚಿದಂಬರಂ” ಎಂದರು. ಅಂತಿಮವಾಗಿ ಪೀಠವು ವಿಚಾರಣೆ ಮುಂದೂಡಿತು.