ಸಂವಿಧಾನದ ಮೂಲರಚನಾ ಸಿದ್ಧಾಂತದ ಸೂಕ್ತತೆಯ ಬಗ್ಗೆ ಪ್ರಶ್ನೆ ಎತ್ತಿದ ನಿವೃತ್ತ ಸಿಜೆಐ ಗೊಗೊಯ್‌

ಮಸೂದೆಯಿಂದ ಸಂವಿಧಾನದ ಮೂಲ ರಚನಾ ಸಿದ್ಧಾಂತ ಉಲ್ಲಂಘನೆಯಾಗುತ್ತದೆ ಎಂಬ ಕಳವಳಕ್ಕೆ ಉತ್ತರಿಸಿದ ರಾಜ್ಯಸಭಾ ಸದಸ್ಯ ನ್ಯಾ. ಗೊಗೊಯ್ ಮೂಲ ರಚನಾ ಸಿದ್ಧಾಂತ ಚರ್ಚಾಸ್ಪದ ನ್ಯಾಯತತ್ವದ ಆಧಾರದ ಮೇಲೆ ನಿಂತಿದೆ ಎಂದು ಪ್ರತಿಪಾದಿಸಿದರು.
Ranjan Gogai
Ranjan Gogai

ರಾಷ್ಟ್ರಪತಿಯವರು ಮೇ 19 ರಂದು ಪ್ರಕಟಿಸಿದ್ದ ದೆಹಲಿ ಸೇವೆಗಳ ಸುಗ್ರೀವಾಜ್ಞೆ ಬದಲಿಗೆ ದೆಹಲಿ ಎನ್‌ಸಿಟಿ (ತಿದ್ದುಪಡಿ) ಸರ್ಕಾರ ಮಸೂದೆ- 2023ನ್ನು ರಾಜ್ಯಸಭೆಯಲ್ಲಿ ಸೋಮವಾರ ಅಂಗೀಕಾರವಾಯಿತು.

ಸ್ವಯಂಚಾಲಿತ ಮತ ದಾಖಲು ಯಂತ್ರದ ತಾಂತ್ರಿಕ ಸಮಸ್ಯೆಗಳ ಪರಿಣಾಮವಾಗಿ, ರಾಜ್ಯಸಭೆಯ ಸದಸ್ಯರು ಮತಪತ್ರಗಳನ್ನು ಬಳಸಿ ಮತ ಮಸೂದೆಯ ಪರ ಹಾಗೂ ವಿರುದ್ಧ ಮತ ಚಲಾಯಿಸಿದರು. ಮಸೂದೆ ಅಂಗೀಕಾರದ ಪರವಾಗಿ 131 ಸಂಸದರು ಮತ ಚಲಾಯಿಸಿದರೆ, 102 ಸಂಸದರು  ಅದನ್ನು ವಿರೋಧಿಸಿ ಮತ ಚಲಾವಣೆ ಮಾಡಿದರು. ಲೋಕಸಭೆ ಆಗಸ್ಟ್ 3ರಂದು ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಿತ್ತು.

Also Read
ದೆಹಲಿ ಸೇವೆಗಳ ಸುಗ್ರೀವಾಜ್ಞೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ದೆಹಲಿ ಸರ್ಕಾರ

ಗಮನಾರ್ಹವಾಗಿ, ರಾಜ್ಯಸಭೆಯಲ್ಲಿ ಮಸೂದೆಯ ಮೇಲಿನ ಚರ್ಚೆ ವೇಳೆ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯ ರಂಜನ್ ಗೊಗೊಯ್ ಅವರು ಮಸೂದೆಯು ಅಧಿಕಾರಿಗಳ ಸೇವೆ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪನ್ನು ಮೀರುವುದಿಲ್ಲ ಎಂದು ಹೇಳಿದರು. ಈ ವಿಧಿ ಸಂವಿಧಾನ ಮೂರು ವಿಷಯಗಳನ್ನು ಹೊರತುಪಡಿಸಿ ದೆಹಲಿ ಸರ್ಕಾರದ ವಿಷಯಗಳ ಮೇಲೆ ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ಸಂಸತ್ತಿಗೆ ನೀಡುತ್ತದೆ.

ಇದಲ್ಲದೆ, ನ್ಯಾ. ಗೊಗೊಯ್ ಅವರು ಕಾನೂನು ಬಹುಶಃ ನಿರಂಕುಶತೆಯ ಆಧಾರದ ಮೇಲೆ 14ನೇ ವಿಧಿ ಮೂಲಭೂತ ಹಕ್ಕನ್ನು ಉಲ್ಲಂಘಿಸಬಹುದಾದರೂ ಅದು ನಿರಂಕುಶವಾಗಿ ಕಂಡುಬರುವುದಿಲ್ಲ ಎಂದರು.

ಕುತೂಹಲಕಾರಿ ಅಂಶವೆಂದರೆ, ಮಸೂದೆಯಿಂದ ಸಂವಿಧಾನದ ಮೂಲ ರಚನೆ ಉಲ್ಲಂಘನೆಯಾಗುತ್ತದೆ ಎಂಬ ಕಳವಳಕ್ಕೆ ಉತ್ತರಿಸಿದ ಗೊಗೊಯ್, ಕೇಶವಾನಂದ ಭಾರತಿ ಪ್ರಕರಣದ ಕುರಿತು ಭಾರತದ ಮಾಜಿ ಸಾಲಿಸಿಟರ್ ಜನರಲ್ (ಎಸ್‌ಜಿಐ) ಟಿ ಆರ್ ಆಂಧ್ಯಾರುಜಿನಾ ಅವರ ಪುಸ್ತಕವನ್ನು ಉಲ್ಲೇಖಿಸಿ ಸಂವಿಧಾನದ ಮೂಲ ರಚನೆಯ ಸಿದ್ಧಾಂತವು ಬಹಳ ಚರ್ಚಾಸ್ಪದ ನ್ಯಾಯತತ್ವದ ಆಧಾರದ ಮೇಲೆ ನಿಂತಿದೆ ಎಂದು ಪ್ರತಿಪಾದಿಸಿದರು.

ವಿಧಿ 239ಎಎಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿಲ್ಲ. ಹೀಗಾಗಿ ಮಸೂದೆ ಸಂಪೂರ್ಣ ನ್ಯಾಯಸಮ್ಮತವಾದುದಾಗಿದೆ ಎಂದು ಪ್ರತಿಪಾದಿಸಿದ ಅವರು ಸಂಸತ್ತಿನಲ್ಲಿ ತಮ್ಮ ಚೊಚ್ಚಲ ಭಾಷಣವನ್ನು ಮುಕ್ತಾಯಗೊಳಿಸಿದರು. ಇದನ್ನು ಸಮರ್ಥಿಸುತ್ತಾ ಅವರು, "ಅನುಮತಿಸಬಹುದಾದುದೆಲ್ಲವೂ ಸರಿಯಾಗಿರಬೇಕಿಲ್ಲ. ವೈಯಕ್ತಿಕವಾಗಿ ನನ್ನ ಪಾಲಿಗೆ ಮಸೂದೆ ಸರಿಯಾಗಿದೆ ಆದರೆ ಯಾರಾದರೂ ಒಪ್ಪದಿದ್ದರೆ, ಅವರ ಆತ್ಮಸಾಕ್ಷಿಯನ್ನು ಮುಕ್ತವಾಗಿ ಬಿಡಬೇಕು" ಎಂದು ಅವರು ಮಾರ್ಮಿಕವಾಗಿ ಹೇಳಿದರು.

ದೆಹಲಿ ಅಧಿಕಾರಿಗಳ ವರ್ಗಾವಣೆ, ನಿಯುಕ್ತಿ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾರ ನೀಡುವುದಕ್ಕಾಗಿ 1991ರ ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರದ ಕಾಯಿದೆಗೆ ತಿದ್ದುಪಡಿ ಮಾಡಲು ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಗಿತ್ತು.

ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಕೇಂದ್ರ ಸರ್ಕಾರದ ಮೂಲಕ ರಾಷ್ಟ್ರ ರಾಜಧಾನಿಯ ಆಡಳಿತದಲ್ಲಿ ಇಡೀ ದೇಶದ ಜನರು ಕೆಲ ಪಾತ್ರ ನಿರ್ವಹಿಸುವುದು ರಾಷ್ಟ್ರೀಯ ಹಿತಾಸಕ್ತಿಯ ವ್ಯಾಪಕ ದೃಷ್ಟಿಯಿಂದ ಉತ್ತಮ ಎಂದು ಸುಗ್ರೀವಾಜ್ಞೆ ಹೇಳಿತ್ತು.

ದೆಹಲಿ ಸೇವೆಗಳಿಗೆ ಸಂಬಂಧಿಸಿದ ಅಧಿಕಾರವನ್ನು ದೆಹಲಿ ಸರ್ಕಾರಕ್ಕೇ ಮರಳಿಸಿ ಸುಪ್ರೀಂ ಕೋರ್ಟ್‌ ಮೇ 11ರಂದು ತೀರ್ಪು ನೀಡಿದ ಬಳಿಕ ಕೇಂದ್ರ ಸರ್ಕಾರ ಈ ಸುಗ್ರೀವಾಜ್ಞೆ ಹೊರಡಿಸಿತ್ತು.

Related Stories

No stories found.
Kannada Bar & Bench
kannada.barandbench.com