
“ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಬಳಸಿರುವ ನುಡಿಗಳು ಅವರ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಸ್ವಾಮೀಜಿ ಸಾಮಾನ್ಯರಿಗಿಂತಲೂ ಕೆಳ ಹಂತದ ಭಾಷೆ ಬಳಕೆ ಮಾಡಿದ್ದಾರೆ” ಎಂದು ಕರ್ನಾಟಕ ಹೈಕೋರ್ಟ್ನ ಕಲಬುರ್ಗಿ ಪೀಠವು ಗುರುವಾರ ತೀವ್ರ ಬೇಸರ ವ್ಯಕ್ತಪಡಿಸಿದೆ.
ವಿಜಯಪುರ ಜಿಲ್ಲೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಿ ವಿಜಯಪುರ ಜಿಲ್ಲಾಧಿಕಾರಿ ಗುರುವಾರವಷ್ಟೇ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಸ್ವಾಮೀಜಿಯ ಹಿತದೃಷ್ಟಿಯಿಂದಲೇ ಅವರ ವಿಜಯಪುರ ಭೇಟಿಯನ್ನು ಪ್ರತಿಬಂಧಿಸಲಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಸಿಪಿ ಅವರ ವರದಿಗಳನ್ನು ಆಧರಿಸಿಯೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ” ಎಂದರು.
“ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ. ಕನೇರಿ ಸ್ವಾಮೀಜಿಗಳ ಭಕ್ತರೇ, ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಬೇಡ ಎಂದು ಹೇಳುತ್ತಿದ್ದಾರೆ. ಸ್ವಾಮೀಜಿ ಬಸವನಬಾಗೇವಾಡಿಗೆ ತೆರಳುವುದರಿಂದ ಅಲ್ಲಿ ಪ್ರತಿಭಟನೆಗಳು ನಡೆಯುವ ಸಾಧ್ಯತೆಗಳಿವೆ” ಎಂದು ಶಶಿಕಿರಣ್ ಶೆಟ್ಟಿ ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಅರ್ಜಿದಾರ ಸ್ವಾಮೀಜಿ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರು “ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಸ್ವಾಮೀಜಿ ಅವರಿಗೆ ನಿರ್ಬಂಧ ಹೇರಿರುವುದು ಒಪ್ಪುವಂತಹುದಲ್ಲ” ಎಂದು ಆಕ್ಷೇಪಿಸಿದರು.
ಇದಕ್ಕೆ ಪೀಠವು “ಸ್ವಾಮೀಜಿ 17ಕ್ಕೇ ಏಕೆ ಅಲ್ಲಿಗೆ ತೆರಳಬೇಕು. ಬೇರೊಂದು ದಿನ ಹೋಗಬಹುದಲ್ಲವೇ? ಈಗಾಗಲೇ ಸಮಾಜದಲ್ಲಿ ಅಶಾಂತಿಯ ವಾತಾವರಣ ತಾಂಡವವಾಡುತ್ತಿದೆ. ಆದಾಗ್ಯೂ, ಸ್ವಾಮೀಜಿಯವರ ವಿಜಯಪುರ ಜಿಲ್ಲೆ ಭೇಟಿಗೆ ವಿಧಿಸಿರುವ ನಿರ್ಬಂಧ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಲಿದೆ. ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ ಎಂಬುದು ತಿಳಿದು ಬಂದರೆ ಸ್ವಾಮೀಜಿ ಆದಂಥವರು ಅಂತಹ ಕಡೆ ನಾನು ಬರುವುದೇ ಇಲ್ಲ ಎಂದು ಹೇಳುವಲ್ಲಿ ಮೊದಲಿಗರಾಗಬೇಕು” ಎಂದು ನುಡಿಯಿತು.
ಇದಕ್ಕೆ ಪ್ರಸನ್ನ ಕುಮಾರ್ “ಸ್ವಾಮೀಜಿಯವರ ಬಸವನ ಬಾಗೇವಾಡಿ ಭೇಟಿ ಪೂರ್ವನಿರ್ಧರಿತ. ನಾಳೆ (ಅ.17) ಬಸವನ ಬಾಗೇವಾಡಿಯಲ್ಲಿ ಸಮರ್ಥ ಸದ್ಗುರು ಶ್ರೀ ಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮವಿದೆ. ಅಲ್ಲಿ ಅವರ ಪ್ರವಚನವಿದೆ. ಮದುವೆ ದಿನ, ಗಂಡಿಗೇ ಮದುವೆಗೆ ಹೋಗಬೇಡ ಎಂದರೆ ಹೇಗೆ” ಎಂದು ಕೇಳಿದರು.
ವಾದ–ಪ್ರತಿವಾದ ಆಲಿಸಿದ ಪೀಠವು ನಾಳೆ (ಅ.17) ಮಧ್ಯಂತರ ಆದೇಶ ಪ್ರಕಟಿಸುವುದಾಗಿ ತಿಳಿಸಿತು. ಸ್ವಾಮೀಜಿ ಪರ ವಕೀಲ ಸಚಿನ್ ಎಂ ಮಹಾಜನ್ ವಕಾಲತ್ತು ವಹಿಸಿದ್ದಾರೆ.
ಹಿನ್ನೆಲೆ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪ್ರಸಿದ್ಧ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿ ಇದೇ 7ರಂದು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರು ಗ್ರಾಮದ ಸಮಾರಂಭವೊಂದರಲ್ಲಿ, “ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು, ಕಲಾವಿದರಿಂದ ಕೂಡಿದ ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕ ಮಂಡಳಿ. ಇವರು ಬಸವ ಸಂಸ್ಕೃತಿ ಅಭಿಯಾನ ಎಂಬ ನಾಟಕವನ್ನು ತೆಗೆದುಕೊಂಡು ಕರ್ನಾಟಕದಾದ್ಯಂತ ತಿರುಗಾಡಿ; ದೇವರು ಗುಡ್ಯಾಗ ಇಲ್ಲ. ಗುಡೀಗೆ ಹೋಗಬ್ಯಾಡ್ರಿ, ಮನ್ಯಾಗಿನ ದೇವರುಗಳನ್ನು ತಗೊಂಡು ಹೊಳ್ಯಾಗ ಹಾಕ್ರಿ. ಹೋಟೆಲ್ದಾಗ ಹೋಗಿ ದಾರು ಕುಡೀರಿ. ಆರಾಮಾಗಿರಿ, ಮಾಂಸ ತಿನ್ರಿ... ಎಂದೆಲ್ಲಾ ಜನರಿಗೆ ಹೇಳುತ್ತಿದ್ದಾರೆ ಎಂದು ಆಕ್ಷೇಪಿಸುವ ಭರದಲ್ಲಿ ಲಿಂಗಾಯತ ಮಠಾಧಿಪತಿಗಳ ವಿರುದ್ಧ ಆಕ್ಷೇಪಾರ್ಹ ನುಡಿಗಳನ್ನು ಆಡಿದ್ದಾರೆ” ಎಂಬ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಅವರು ಸ್ವಾಮೀಜಿ ಇಂದಿನಿಂದ 16ರಿಂದ ಡಿಸೆಂಬರ್ 14ರವರೆಗೆ ವಿಜಯಪುರ ಜಿಲ್ಲೆ ಪ್ರವೇಶಿಸಬಾರದು ಎಂದು ಆದೇಶಿಸಿದ್ದರು.