ಇದ್ರಿಷ್ ಪಾಷಾ ಸಾವು ಪ್ರಕರಣ: ಪುನೀತ್ ಕೆರೆಹಳ್ಳಿ, ಸಹ ಆರೋಪಿಗಳನ್ನು 7 ದಿನ ಪೊಲೀಸ್ ವಶಕ್ಕೆ ನೀಡಿದ ಕನಕಪುರ ನ್ಯಾಯಾಲಯ

ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಧೀಶ ಸುರೇಶ ಅಪ್ಪಣ್ಣ ಸವದಿ ಅವರು ಪುನೀತ್ ಮತ್ತು ಸಹಚರರನ್ನು ಒಟ್ಟು ಏಳು ದಿನಗಳ ಕಾಲ ಸಾತನೂರು ಪೊಲೀಸರ ವಶಕ್ಕೆ ನೀಡಿ ಆದೇಶಿಸಿದರು.
Punith Kerehalli
Punith Kerehalli

ಜಾನುವಾರು ಸಾಗಾಟದ ಸಂದರ್ಭದಲ್ಲಿ ಇದ್ರೀಶ್ ಪಾಷಾ ಎಂಬುವವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ  ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಆರೋಪಿಗಳನ್ನು ಕನಕಪುರದ ನ್ಯಾಯಾಲಯ ಏಳು ದಿನಗಳ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ ಮತ್ತು ಆತನ ಸಹಚರರನ್ನು ಅವರು ಪತ್ತೆಯಾಗಿದ್ದ ರಾಜಸ್ಥಾನದಿಂದ ಕರೆತಂದ ರಾಮನಗರ ಪೊಲೀಸರು ಇಂದು ಕನಕಪುರದ ಸಿವಿಲ್‌ ಪ್ರಧಾನ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಪ್ರಕರಣದ ಬಗ್ಗೆ ಇನ್ನಷ್ಟು ವಿಚಾರಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯಕ್ಕೆ ಪೊಲೀಸರು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ಸುರೇಶ ಅಪ್ಪಣ್ಣ ಸವದಿ ಅವರು ಪುನೀತ್‌ ಮತ್ತು ಸಹಚರರನ್ನು ಒಟ್ಟು ಏಳು ದಿನಗಳ ಕಾಲ ಸಾತನೂರು ಪೊಲೀಸರ ವಶಕ್ಕೆ ನೀಡಿ ಆದೇಶಿಸಿದರು. ಪುನೀತ್ ಕೆರಹಳ್ಳಿ ಪರವಾಗಿ ಬೆಂಗಳೂರು ಮೂಲದ ಇಬ್ಬರು ವಕೀಲರು ವಕಾಲತ್ತು ವಹಿಸಿದ್ದರು.

ಮಾರ್ಚ್‌ 31ರಂದು ಮಂಡ್ಯದ ಕಡೆಯಿಂದ ಬರುತ್ತಿದ್ದ ದನಸಾಗಣೆ ವಾಹನವೊಂದನ್ನು ಅಡ್ಡಗಟ್ಟಿದ್ದ ಪುನೀತ್‌ ಕೆರೆಹಳ್ಳಿ ಹಾಗೂ ಆತನ ಸಹಚರರು ವಾಹನದಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಏಪ್ರಿಲ್‌ 1ರಂದು ಬೆಳಗ್ಗೆ ಘಟನಾ ಸ್ಥಳದ ಸಮೀಲದಲ್ಲಿ ಇದ್ರಿಷ್‌ ಪಾಷಾ ಅವರ ಶವ ಪತ್ತೆಯಾಗಿತ್ತು. ಪುನೀತ್‌ ಮತ್ತು ಸಹಚರರಿಂದ ಹಲ್ಲೆ ನಡೆದಿದೆ ಎಂದು ಯೂನುಸ್‌ ಪಾಷಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್‌ 341, 504, 506, 324, 302, 304 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಏಪ್ರಿಲ್‌ ಐದರಂದು ಆರೋಪಿಗಳನ್ನು ರಾಜಸ್ಥಾನದ ಬನಸ್ವಾರ ಬಳಿ ರಾಮನಗರ ಪೊಲೀಸರು ಬಂಧಿಸಿದ್ದರು. ಗುಜರಾತ್‌, ರಾಜಸ್ಥಾನ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಬನಸ್ವಾರ ನ್ಯಾಯಾಧೀಶರೆದುರು ಹಾಜರುಪಡಿಸಿ ಟ್ರಾನ್ಸಿಟ್‌ ಕಸ್ಟಡಿ ಪಡೆಯುತ್ತಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com