ವಿಧಾನಸಭೆಯಲ್ಲಿ ಬಂಧಿಗಳ ಗುರುತಿಸುವಿಕೆ, ದಂಡ ಪ್ರಕ್ರಿಯಾ ತಿದ್ದುಪಡಿ, ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ ಅಂಗೀಕಾರ

ಸಾಕಷ್ಟು ವಾದ-ಸಂವಾದದ ಬಳಿಕ ನಾಲ್ಕು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಶುಕ್ರವಾರ ಅಂಗೀಕರಿಸಲಾಯಿತು. ಪಕ್ಷಾತೀತವಾಗಿ ಹಲವು ಶಾಸಕರು ಚರ್ಚೆಯಲ್ಲಿ ಭಾಗವಹಿಸಿದ್ದರು.
Karnataka Assembly
Karnataka Assembly

ಬಂಧಿಗಳ ಗುರುತಿಸುವಿಕೆ ತಿದ್ದುಪಡಿ ವಿಧೇಯಕ – 2021, ದಂಡ ಪ್ರಕ್ರಿಯಾ ತಿದ್ದುಪಡಿ ಸಂಹಿತೆ ವಿಧೇಯಕ – 2021, ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ – 2021, ಕರ್ನಾಟಕ ಪೊಲೀಸ್‌ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು. ಪಕ್ಷಾತೀತವಾಗಿ ಸಾಕಷ್ಟು ವಾದ-ಸಂವಾದದ ಬಳಿಕ ನಾಲ್ಕು ವಿಧೇಯಕಗಳನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಬಂಧಿತರ ಗುರುತಿಸುವಿಕೆ ತಿದ್ದುಪಡಿ ವಿಧೇಯಕದ ಉದ್ದೇಶಗಳು

  • ಕೈದಿಗಳನ್ನು ಬಂಧಿಸಿದಾಗ ಅವರ ಪಾದದ ಬೆರಳನ್ನು ಗುರುತಿಸುವ ಪದ್ದತಿ ಇದೆ. ಇದಕ್ಕೆ ಬದಲಾಗಿ ತಿದ್ದುಪಡಿ ವಿಧೇಯಕದಲ್ಲಿ ಕೈದಿಯ ರಕ್ತದ ಮಾದರಿ, ಡಿಎನ್‌ಎ, ಕಣ್ಣಿನ ಪಾಪೆ, ಧ್ವನಿ ಮಾದರಿಯನ್ನು ಸಂಗ್ರಹಿಸಲು ಅವಕಾಶ ಮಾಡಿಕೊಡಲಾಗಿದೆ.

  • ಒಂದು ವರ್ಷದ ಶಿಕ್ಷೆಗೆ ಒಳಗಾಗುವ ಕೈದಿಗೆ ಹೀಗೆ ಮಾಡಲಾಗುತ್ತಿತ್ತು. ತಿದ್ದುಪಡಿ ವಿಧೇಯಕದಲ್ಲಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಶಿಕ್ಷೆಗೆ ಗುರಿಯಾಗುವವರಿಗೆ ಇದನ್ನು ಮಾಡಲಾಗುತ್ತದೆ.

  • ಮಾದರಿ ಸಂಗ್ರಹ ಮಾಡಲು ಮ್ಯಾಜಿಸ್ಟ್ರೇಟ್‌ ಅನುಮತಿ ಪಡೆಯುವ ಅವಶ್ಯಕತೆ ಇತ್ತು. ತಿದ್ದುಪಡಿ ವಿಧೇಯಕದಲ್ಲಿ ಈ ಅಧಿಕಾರವನ್ನು ಜಿಲ್ಲಾಮಟ್ಟದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಗೆ ನಗರದ ವ್ಯಾಪ್ತಿಯಲ್ಲಿ ಉಪ ಪೊಲೀಸ್‌ ಆಯುಕ್ತರಿಗೆ (ಡಿಸಿಪಿ) ನೀಡಲಾಗುತ್ತದೆ. ಇದರಿಂದ ಸಮಯ ಉಳಿತಾಯವಾಗಲಿದೆ ಎಂದು ಹೇಳಲಾಗಿದೆ.

  • ಕೈದಿಗಳಿಂದ ಸಂಗ್ರಹಿಸಲ್ಪಟ್ಟ ಮಾದರಿಯನ್ನು 10 ವರ್ಷಗಳ ನಂತರ, ಕೈದಿಗಳ ಶಿಕ್ಷೆ ಅವಧಿ ಮುಗಿದ ಬಳಿಕ ದಾಖಲೆಯಿಂದ ತೆಗೆದು ಹಾಕಲು ತಿದ್ದುಪಡಿ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.

ದಂಡ ಪ್ರಕ್ರಿಯಾ ತಿದ್ದುಪಡಿ ಸಂಹಿತೆ ವಿಧೇಯಕ ಉದ್ದೇಶಗಳು

  • ಕೋವಿಡ್‌ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗುತ್ತಿದೆ. ಈ ವ್ಯವಸ್ಥೆಯನ್ನು ಸೆಷನ್ಸ್‌ ನ್ಯಾಯಾಲಯಕ್ಕೂ ವಿಸ್ತರಿಸಲು ತಿದ್ದುಪಡಿ ವಿಧೇಯಕ ತರಲಾಗಿದೆ. ಉಭಯ ಪಕ್ಷಕಾರರ ವಕೀಲರ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ಸಾಕ್ಷ್ಯ ಸಂಗ್ರಹ ಮಾಡಿ, ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಅವಕಾಶ ಕಲ್ಪಿಸಲಾಗುತ್ತದೆ.

  • ಹೀಗೆ ಮಾಡುವುದರಿಂದ ನ್ಯಾಯಾಲಯ, ಅಧಿಕಾರಿಗಳ ಸಮಯ, ಪ್ರಯಾಣ ಮತ್ತು ಅದಕ್ಕೆ ತಗುಲುವ ವೆಚ್ಚ ಉಳಿತಾಯವಾಗಲಿದೆ ಎಂಬ ಉದ್ದೇಶಕ್ಕಾಗಿ ವಿಧೇಯಕ ತರಲಾಗಿದೆ.

ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕದ ಉದ್ದೇಶಗಳು

  • ಜೈಲುಗಳಲ್ಲಿರುವ ಕೈದಿಗಳ ರೂಪದಲ್ಲಿನ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳುವುದು ಮತ್ತು ಜೈಲುಗಳಲ್ಲಿ ಆಧುನಿಕ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

  • ಬಂಧೀಖಾನೆ ಸಚಿವರು ಮಂಡಳಿಯ ಅಧ್ಯಕ್ಷರಾಗಿರಲಿದ್ದು, ಸಮಾಜ ಕಲ್ಯಾಣ, ಕಾರ್ಮಿಕ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಮಂಡಳಿಯ ಸದಸ್ಯರಾಗಿರುತ್ತಾರೆ.

  • ಹರಿಯಾಣದಲ್ಲಿ ಬಂಧೀಖಾನೆ ಅಭಿವೃದ್ಧಿ ಮಂಡಳಿ ಆರಂಭಿಸಲಾಗಿದ್ದು, ಇದರಿಂದ ಪ್ರತಿವರ್ಷ ರಾಜ್ಯದ ಬೊಕ್ಕಸಕ್ಕೆ 600 ಕೋಟಿ ರೂಪಾಯಿ ಸಂದಾಯವಾಗುತ್ತಿದೆ ಎಂಬ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಇಲ್ಲಿಯೂ ಜೈಲಿನಲ್ಲಿರುವ ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಲು ಮಂಡಳಿ ಹುಟ್ಟುಹಾಕಲಾಗುತ್ತಿದೆ.

  • ಜೈಲಿನಲ್ಲಿರುವ ಕೈದಿಗಳ ಶ್ರಮ ವ್ಯರ್ಥವಾಗಬಾರದು, ಮನಃಪರಿವರ್ತನೆಯ ಕಾರಣಕ್ಕಾಗಿ ಅವರಿಂದ ಸುಮ್ಮನೆ ವ್ಯರ್ಥವಾಗಿ ಕಾಲಹರಣವಾಗಬಾರದು. ಜೈಲಿನಿಂದ ಹೊರಬಂದಾಗ ಗೌರವಯುತವಾಗಿ ಬದುಕಲು ಒಂದಷ್ಟು ಹಣ ಅಗತ್ಯ. ಕೈದಿಯಾಗಿದ್ದಾಗ ಅವರನ್ನು ದುಡಿಸಿ, ಒಂದಷ್ಟು ಹಣವನ್ನು ಅವರಿಗೆ ನೀಡಿದರೆ ಮುಂದೆ ಬದುಕಿಗೆ ಅನುಕೂಲವಾಗುತ್ತದೆ. ಕೈದಿಯಾಗಿ ಸಜೆಯನ್ನೂ ಅನುಭವಿಸಬೇಕು, ಈ ಮಧ್ಯೆದಲ್ಲಿ ದುಡಿಮೆಯನ್ನೂ ಮಾಡಬೇಕು. ಇದಕ್ಕಾಗಿ ಮಂಡಳಿ ಅವಶ್ಯವಾಗಿದೆ.

  • ರಾಜ್ಯದಲ್ಲಿ ಸಾಕಷ್ಟು ಬೀಳು ಬಿದ್ದಿರುವ ಜಮೀನು ಇದೆ. ಸರ್ಕಾರದ ಅನುಮತಿ ಪಡೆದು ಕೈದಿಗಳನ್ನು ಅದರ ಉಳುಮೆ ಹಾಗೂ ಸದ್ಬಳಕೆಯಲ್ಲಿ ತೊಡಗುವಂತೆ ಮಾಡಬೇಕು. ಇದಕ್ಕಾಗಿ ಅಗತ್ಯವಾದ ಯಂತ್ರೋಪಕರಣಗಳನ್ನು ಪೂರೈಸಬೇಕಾಗುತ್ತದೆ. ಈ ಎಲ್ಲಾ ದೃಷ್ಟಿಯಿಂದ ಮಂಡಳಿ ಸೃಷ್ಟಿಸಲಾಗುತ್ತಿದೆ.

Related Stories

No stories found.
Kannada Bar & Bench
kannada.barandbench.com