ಆಫ್‌ಲೈನ್‌ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆ ನಡೆಸುವ ಬಿಸಿಐ, ಕೆಎಸ್‌ಎಲ್‌ಯು ನಿರ್ಧಾರ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್‌

ಒಂದರಿಂದ ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ಮಧ್ಯಂತರ (ಇಂಟರ್‌ಮೀಡಿಯಟ್‌) ಸೆಮಿಸ್ಟರ್‌ ಪರೀಕ್ಷೆ ನಡೆಸಲು ಹೊರಡಿಸಿದ್ದ ಪರೀಕ್ಷಾ ವೇಳಾಪಟ್ಟಿಯನ್ನೂ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ‌.
BCI and Karnataka High Court
BCI and Karnataka High Court

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ಮಧ್ಯಂತರ (ಇಂಟರ್‌ಮೀಡಿಯಟ್‌) ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಪರೀಕ್ಷೆ ನಡೆಸುವ ಸಂಬಂಧ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಹೊರಡಿಸಿದ್ದ ಸುತ್ತೋಲೆಯನ್ನು ಸೋಮವಾರ ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದೆ.

ಒಂದರಿಂದ ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆ ನಡೆಸುವ ಸಂಬಂಧ ವಿಶ್ವವಿದ್ಯಾಲಯ ಹೊರಡಿಸಿರುವ ವೇಳಾಪಟ್ಟಿಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.

ಪ್ರಸಕ್ತ ವರ್ಷದಲ್ಲಿ ಮಧ್ಯಂತರ ಸೆಮಿಸ್ಟರ್‌ನ ಕಾನೂನು ವಿದ್ಯಾರ್ಥಿಗಳಿಗೆ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಕಳೆದ ವಾರ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.

ಸಾಂಕ್ರಾಮಿಕತೆಯ ನಡುವೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಹಿಂದಿನ ಸೆಮಿಸ್ಟರ್‌ನಲ್ಲಿ ಪಡೆದ ಅಂಕಗಳು ಹಾಗೂ ಆಂತರಿಕ ಮೌಲ್ಯಮಾಪವವನ್ನು ಆಧರಿಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್‌ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.

“ವಿದ್ಯಾರ್ಥಿಗಳನ್ನು ಇಂಥ ಕಠಿಣ ಸಂದರ್ಭಕ್ಕೆ ಸಿಲುಕಿಸಬಾರದು ಎಂದು ಯುಜಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ” ಎಂದು ಪೀಠವು ವಿಚಾರಣೆ ವೇಳೆ ಹೇಳಿತ್ತು. ಎರಡು ಸೆಮಿಸ್ಟರ್‌ಗಳ ಅಂತಿಮ ಪರೀಕ್ಷೆಯನ್ನು ಒಟ್ಟಿಗೆ ನಡೆಸದಂತೆ ತಡೆಯಲು ಯಾವುದೇ ನಿಬಂಧನೆಯಲ್ಲಿ ಉಲ್ಲೇಖಿಸಲಾಗಿಲ್ಲ. ಅಲ್ಲದೇ ಭೌತಿಕವಾಗಿ ಪರೀಕ್ಷೆ ನಡೆಸುವುದಕ್ಕೆ ಯಾವುದೇ ತೆರನಾದ ಕಾನೂನಿನ ತೊಡಕುಗಳಿಲ್ಲ ಎಂದು ಬಿಸಿಐ ಪರ ವಕೀಲ ಶ್ರೀಧರ್‌ ಪ್ರಭು ಮಂಗಳವಾರ ಸಮರ್ಥಿಸಿಕೊಂಡಿದ್ದರು.

ಇಂಟರ್‌ಮೀಡಿಯಟ್‌ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಕಾನೂನು ವಿದ್ಯಾರ್ಥಿಗಳಿಗೆ ನಡೆಸುವ ಅಗತ್ಯವೇನು ಎಂದು ನ್ಯಾಯಾಲಯ ಪ್ರಶ್ನಿಸಿತು. “ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ವಿಚಾರದಲ್ಲೂ ಹಿಂದಿನ ಸೆಮಿಸ್ಟರ್‌ನಲ್ಲಿ ಪಡೆದ ಅಂಕಗಳು ಮತ್ತು ಆಂತರಿಕ ಅಂಕಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ,” ಎಂದು ನ್ಯಾಯಾಲಯ ಹೇಳಿತು.

Also Read
ವಿದ್ಯಾರ್ಥಿಗಳ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, 12 ಪರೀಕ್ಷೆ ಬರೆವಂತೆ ಅವರನ್ನು ಒತ್ತಾಯಿಸಲಾಗದು: ಕರ್ನಾಟಕ ಹೈಕೋರ್ಟ್‌

ವಕೀಲರ ಪರಿಷತ್ತಿನ ನಿಯಮಗಳ ಅನುಸಾರ ಕಡ್ಡಾಯವಾಗಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗದೇ ಇದ್ದರೆ ಅವರಿಗೆ ಪದವಿ ನೀಡಲಾಗದು. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವುದು ಕಡ್ಡಾಯ ಎಂದು ಪ್ರಭು ವಾದಿಸಿದರು. ವಾರ್ಷಿಕ ಪರೀಕ್ಷೆಗೆ ಬದಲಾಗಿ ವಿಶ್ವವಿದ್ಯಾಲಯಗಳು ಸೆಮಿಸ್ಟೆರ್‌ ನೀತಿ ಅಳವಡಿಸಿಕೊಂಡಿವೆ. ಹೀಗಾಗಿ ಸೆಮಿಸ್ಟರ್‌ ಪರೀಕ್ಷೆ ನಡೆಸಬೇಕಿದ್ದು, ನಿರ್ದಿಷ್ಟ ವಿಷಯಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣವಾಗಬೇಕಿದೆ ಎಂದು ಪ್ರಭು ಹೇಳಿದರು.

ಇಂಟರ್‌ಮೀಡಿಯಟ್‌ ಪರೀಕ್ಷೆಗಳನ್ನು ನಡೆಸುವ ಕೆಎಸ್‌ಎಲ್‌ಯು ನಿರ್ಧಾರವು ಯುಜಿಸಿ ಮಾರ್ಗಸೂಚಿ ಮತ್ತು ರಾಜ್ಯ ಸರ್ಕಾರದ ಆದೇಶದ ಉಲ್ಲಂಘನೆಯಾಗಿದೆ ಎಂದು ನಿನ್ನೆ ಅರ್ಜಿದಾರರ ಪರ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಮತ್ತು ವಕೀಲ ಅಭಿಷೇಕ್‌ ಜನಾರ್ದನ್‌ ವಾದಿಸಿದರು. ಸಾರ್ವಜನಿಕ ಆರೋಗ್ಯ ವಿಚಾರವು ಬಿಸಿಐ ಮತ್ತು ಕೆಎಸ್‌ಎಲ್‌ಯು ವ್ಯಾಪ್ತಿಗೆ ಬಾರದೇ ಇರುವುದರಿಂದ ಅವುಗಳು ಈ ಕುರಿತು ಸುತ್ತೋಲೆ/ನಿರ್ದೇಶನಗಳನ್ನು ನೀಡಲಾಗದು ಎಂದು ಹೇಳಿದರು.

Related Stories

No stories found.
Kannada Bar & Bench
kannada.barandbench.com