ಆದಿವಾಸಿ ಮಧು ಹತ್ಯೆ ಪ್ರಕರಣ: 13 ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

ಕಿರಾಣಿ ಅಂಗಡಿಯಿಂದ ಅಕ್ಕಿ ಕದ್ದಿದ್ದಾನೆ ಎಂದು ಆರೋಪಿಸಿ ಬುಡಕಟ್ಟು ಜನಾಂಗದ ಮಾನಸಿಕ ಅಸ್ವಸ್ಥ ಯುವಕ ಮಧು ಎಂಬಾತನನ್ನು ಕಟ್ಟಿಹಾಕಿ ಬರ್ಬರವಾಗಿ ಥಳಿಸಿ ಹತ್ಯೆಗೈಯಲಾಗಿದೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.
Madhu
Madhunewindianexpress

ಆದಿವಾಸಿ ಯುವಕ ಮಧು ಎಂಬಾತನನ್ನು 2018ರಲ್ಲಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಾಗಿರುವ ಹದಿಮೂರು ಮಂದಿಗೆ ಕೇರಳದ ನ್ಯಾಯಾಲಯ ಬುಧವಾರ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಫ್ರಕರಣದಲ್ಲಿ ಆರೋಪಿಗಳಾಗಿದ್ದ ಹದಿನಾರು ಮಂದಿಯಲ್ಲಿ ಹದಿನಾಲ್ಕು ಮಂದಿಯನ್ನು ದೋಷಿಗಳೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯ ನಿನ್ನೆ (ಮಂಗಳವಾರ) ಘೋಷಿಸಿತ್ತು.

ವರದಿಗಳ ಪ್ರಕಾರ ನ್ಯಾಯಾಲಯ ಮೊದಲ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಇತರ ಹನ್ನೆರಡು ಅಪರಾಧಿಗಳಿಗೆ 7 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ.

ಪ್ರಕರಣದ 16ನೇ ಆರೋಪಿಯು ಗರಿಷ್ಠ 3 ವರ್ಷಗಳ ಶಿಕ್ಷೆ ವಿಧಿಸಬಹುದಾದ ಐಪಿಸಿ ಸೆಕ್ಷನ್ 352 ರ ಅಡಿಯಲ್ಲಿ ಮಾತ್ರ ತಪ್ಪಿತಸ್ಥನೆಂದು ಘೋಷಿಸಲಾಗಿದೆ.  

Also Read
ಆದಿವಾಸಿ ಯುವಕ ಮಧುವನ್ನು ಕೊಂದ 14 ಮಂದಿ ಅಪರಾಧಿಗಳು: ಕೇರಳ ನ್ಯಾಯಾಲಯದ ತೀರ್ಪು

ಪಾಲಕ್ಕಾಡ್‌ನ ಅಟ್ಟಪ್ಪಾಡಿಯಲ್ಲಿ ಬುಡಕಟ್ಟು ಜನಾಂಗದ ಮಾನಸಿಕ ಅಸ್ವಸ್ಥ ಯುವಕ ಮಧು ಎಂಬಾತನನ್ನು ಆರೋಪಿಗಳು ಕಟ್ಟಿಹಾಕಿ ಬರ್ಬರವಾಗಿ ಹೊಡೆದು ಕೊಂದಿದ್ದರು ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು.

ಕಿರಾಣಿ ಅಂಗಡಿಯಿಂದ ಅಕ್ಕಿ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಗಳು ಮಧುವನ್ನು ಸಮೀಪದ ಕಾಡಿನಿಂದ ಹಿಡಿದು ಕರೆತಂದು ಆತನ ಮೇಲೆ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿತ್ತು.

ಐಪಿಸಿ ಸೆಕ್ಷನ್‌ 143, 147, 148, 323, 324, 326, 294 (ಬಿ), 342, 352, 364, 367, 368, ಹಾಗೂ 302 ಸಹವಾಚನ 149  ಮತ್ತು ಎಸ್‌ಸಿ-ಎಸ್‌ಟಿ ಕಾಯಿದೆಯ (1) (ಡಿ), (ಆರ್‌) (ಎಸ್‌) ಮತ್ತು 3(2) (ವಿ) ಅಡಿ ವಿಶೇಷ ನ್ಯಾಯಾಲಯ ಅವರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ.

ಈ ಹಿಂದೆ ಹಲವು ಷರತ್ತುಗಳನ್ನು ವಿಧಿಸಿ ಹೈಕೋರ್ಟ್‌ ಅವರಿಗೆ ಜಾಮೀನು ನೀಡಿತ್ತು. ಆದರೆ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗುತ್ತಿದ್ದುದನ್ನು ಗಮನಿಸಿದ್ದ ವಿಶೇಷ ನ್ಯಾಯಾಲಯ ಜಾಮೀನನ್ನು ರದ್ದುಗೊಳಿಸಿತ್ತು

Related Stories

No stories found.
Kannada Bar & Bench
kannada.barandbench.com