ಎಸ್‌ಸಿ/ಎಸ್‌ಟಿ ಕಾಯಿದೆ ಪ್ರಕರಣ: ನೃತ್ಯಗಾರ್ತಿ ಕಲಾಮಂಡಲಂ ಸತ್ಯಭಾಮಾಗೆ ಕೇರಳ ಹೈಕೋರ್ಟ್ ಮಧ್ಯಂತರ ರಕ್ಷಣೆ

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಸಹ ಕಲಾವಿದ ಆ ರಾಮಕೃಷ್ಣನ್ ಅವರ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪವನ್ನು ನೃತ್ಯ ಕಲಾವಿದೆ ಎದುರಿಸುತ್ತಿದ್ದಾರೆ.
Kalamandalam Sathyabhama, Kerala high court
Kalamandalam Sathyabhama, Kerala high court Kalamandalam Sathyabhama (Youtube)
Published on

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿ ದಾಖಲಾದ ಪ್ರಕರಣ ಕುರಿತಂತೆ ಮೋಹಿನಿಯಾಟ್ಟಂ ಕಲಾವಿದೆ ಕಲಾಮಂಡಲಂ ಸತ್ಯಭಾಮಾ ಅವರನ್ನು ಮೇ 27ರವರೆಗೆ ಬಂಧಿಸದಂತೆ ಕೇರಳ ಹೈಕೋರ್ಟ್ ಸೋಮವಾರ ಮಧ್ಯಂತರ ರಕ್ಷಣೆ ನೀಡಿದೆ [ಸತ್ಯಭಾಮಾ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಸಹ ಕಲಾವಿದ ಆರ್‌ ಎಲ್‌ ವಿ ರಾಮಕೃಷ್ಣನ್ ಅವರ  ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪ ನೃತ್ಯ ಕಲಾವಿದೆ ಅವರ ಮೇಲಿದೆ. ಯೂಟ್ಯೂಬ್‌ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ನಿಂದನೆ ಮಾಡಲಾಗಿತ್ತು.

ಸತ್ಯಭಾಮಾ ಅವರಿಗೆ ರಕ್ಷಣೆ ನೀಡಿರುವ ನ್ಯಾ. ಕೆ ಬಾಬು ಅವರು ಪ್ರಕರಣದ ಸಂಬಂಧ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ತಿಳಿಸಿದರು.

ಎಸ್‌ಸಿ- ಎಸ್‌ಟಿ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ತನಗೆ ನಿರೀಕ್ಷಣಾ ಜಾಮೀನು ನೀಡದಿರುವುದನ್ನು ಪ್ರಶ್ನಿಸಿ ಸತ್ಯಭಾಮಾ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಮೇಲ್ನೋಟಕ್ಕೆ ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದಿದ್ದ ನ್ಯಾಯಾಲಯ ಏಪ್ರಿಲ್‌  22ರಂದು ಆಕೆಯ ಅರ್ಜಿ ತಿರಸ್ಕರಿಸಿತ್ತು.

ರಾಮಕೃಷ್ಣ ಅವರ ಕಣ್ಣೋಟ ಮತ್ತು ಚರ್ಮದ ಬಣ್ಣದ ಬಗ್ಗೆ ಸತ್ಯಭಾಮಾ ಅವಹೇಳನ ಮಾಡಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದ ರಾಮಕೃಷ್ಣನ್‌ ಎಸ್‌ಸಿ/ಎಸ್‌ಟಿ ಕಾಯಿದೆ ಪ್ರಕಾರ ನೃತ್ಯಗಾರ್ತಿ ತಪ್ಪೆಸಗಿದ್ದಾರೆ ಎಂದಿದ್ದರು. ಆದರೆ ತನಗೆ ರಾಮಕೃಷ್ಣ ಅವರ ಜಾತಿ ಬಗ್ಗೆ ತಿಳಿದಿರಲಿಲ್ಲ. ತಾನು ಯಾವುದೇ ತಪ್ಪೆಸಗಿಲ್ಲ ಎಂದು ನೃತ್ಯ ಕಲಾವಿದೆ ವಾದಿಸಿದ್ದರು.

Kannada Bar & Bench
kannada.barandbench.com