ವಂಚನೆ ಪ್ರಕರಣ: ಕ್ರಿಕೆಟಿಗ ಶ್ರೀಶಾಂತ್ ಬಂಧಿಸದಂತೆ ಕೇರಳ ಹೈಕೋರ್ಟ್ ಮಧ್ಯಂತರ ಆದೇಶ

ಕಕ್ಷಿದಾರರ ನಡುವೆ ಪ್ರಕರಣವನ್ನು ಬಗೆಹರಿಸಿಕೊಳ್ಳಲಾಗಿದೆ ಎಂಬ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಗಮನಿಸಿದ ನ್ಯಾಯಮೂರ್ತಿ ಮೊಹಮ್ಮದ್ ನಿಯಾಸ್ ಸಿ ಪಿ ಅವರು ಮಧ್ಯಂತರ ಆದೇಶ ಹೊರಡಿಸಿದರು.
ಕ್ರಿಕೆಟಿಗ ಶ್ರೀಶಾಂತ್ ಮತ್ತು ಕೇರಳ ಹೈಕೋರ್ಟ್
ಕ್ರಿಕೆಟಿಗ ಶ್ರೀಶಾಂತ್ ಮತ್ತು ಕೇರಳ ಹೈಕೋರ್ಟ್ಕ್ರಿಕೆಟಿಗ ಶ್ರೀಶಾಂತ್ (ಫೇಸ್‌ಬುಕ್‌)

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಎಸ್ ಶ್ರೀಶಾಂತ್ ಅವರನ್ನು ಬಂಧಿಸದಂತೆ ಕೇರಳ ಹೈಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದೆ [ಎಸ್‌ ಶ್ರೀಶಾಂತ್‌ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಕಕ್ಷಿದಾರರ ನಡುವೆ ಪ್ರಕರಣವನ್ನು ಬಗೆಹರಿಸಿಕೊಳ್ಳಲಾಗಿದೆ ಎಂಬ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಗಮನಿಸಿದ ನ್ಯಾಯಮೂರ್ತಿ ಮೊಹಮ್ಮದ್ ನಿಯಾಸ್ ಸಿ ಪಿ ಅವರು ಮಧ್ಯಂತರ ಆದೇಶ ನೀಡಿದರು.

ವಾಸ್ತವಿಕ ದೂರುದಾರರನ್ನು ಒಳಗೊಳ್ಳುವಂತೆ ಶ್ರೀಶಾಂತ್ ಅವರ ವಕೀಲರಿಗೆ ನಿರ್ದೇಶನ ನೀಡಿದ ನ್ಯಾಯಮೂರ್ತಿಗಳು ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿದರು.

ಕಣ್ಣೂರು ಟೌನ್ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆರೋಪಿಸಿ ಶ್ರೀಶಾಂತ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ದೂರುದಾರ ಮತ್ತು ಇಬ್ಬರು ವ್ಯಕ್ತಿಗಳ (ಸಹ-ಆರೋಪಿ) ನಡುವೆ ಘಟನೆಯು 2019ರಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ವಿಲ್ಲಾ ಯೋಜನೆಯಲ್ಲಿ ಹೂಡಿಕೆ ಮಾಡಲು ಆರೋಪಿಗಳು 2019ರಲ್ಲಿ ದೂರುದಾರರನ್ನು ಮನವೊಲಿಸಿದ್ದರು. ನಂತರ ಸಹ-ಆರೋಪಿಗಳು ಶ್ರೀಶಾಂತ್ ಮಾರ್ಗದರ್ಶನದಲ್ಲಿ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಬಳಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲಿದ್ದಾರೆ. ಈ ಅಕಾಡೆಮಿಯಲ್ಲಿ ತಮಗೆ ಪಾಲುದಾರಿಕೆ ನೀಡಲಾಗುತ್ತದೆ ಎಂದು ದೂರುದಾರರಿಗೆ ಭರವಸೆ ನೀಡಿದ್ದರು.

ಅದರಂತೆ ದೂರುದಾರರು 2019ರಲ್ಲಿ ಮೊದಲ ಮತ್ತು ಎರಡನೇ ಆರೋಪಿಗಳಿಗೆ ಹಣವನ್ನು ವರ್ಗಾಯಿಸಿದ್ದರು. ಆದರೆ, ಯೋಜನೆ ವಿಫಲವಾದಾಗ, ದೂರುದಾರರು ಮೊದಲ ಮತ್ತು ಎರಡನೇ ಆರೋಪಿಯ ಜೊತೆಗೆ ಶ್ರೀಶಾಂತ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದರು. ಈ ಹಿನ್ನೆಲೆಯಲ್ಲಿ ಶ್ರೀಶಾಂತ್‌ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ವಂಚನೆ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಬದಲಿಗೆ ಕ್ರಿಕೆಟ್‌ ಅಕಾಡೆಮಿ ಆರಂಭಿಸಲು ಸಲಹೆ ಕೇಳಿದಾಗ ತಾನು ಉಚಿತವಾಗಿ ಕೆಲವು ಸಲಹೆಗಳನ್ನು ನೀಡಿದ್ದೆ. ಸಹ ಆರೋಪಿಗಳೊಂದಿಗೆ ತಾನು ಹಣಕಾಸಿನ ವ್ಯವಹಾರ ನಡೆಸಿಲ್ಲ. ದೂರುದಾರರಿಗೆ ಪತ್ರಗಳನ್ನು ನೀಡುವಾಗ ಸಹ ಆರೋಪಿಗಳು ತನ್ನ ಹೆಸರು ಬಳಸಿಕೊಳ್ಳುತ್ತಾರೆ ಎಂದು ತನಗೆ ಗೊತ್ತಿರಲಿಲ್ಲ. ತನ್ನ ಒಪ್ಪಿಗೆ ಇಲ್ಲದೆ ಹೀಗೆ ಮಾಡಲಾಗಿದೆ ಎಂದು ಶ್ರೀಶಾಂತ್‌ ವಾದಿಸಿದ್ದರು

Related Stories

No stories found.
Kannada Bar & Bench
kannada.barandbench.com