

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಚುನಾವಣೆ ಘೋಷಿಸುವುದಕ್ಕೂ ಮುನ್ನ ಬೈಲಾದ ಪ್ರಕಾರ ಮತದಾರರ ಪಟ್ಟಿ ಪ್ರಕಟಿಸಿರುವ ಕುರಿತು ದಾಖಲೆ ಸಲ್ಲಿಸುವಂತೆ ಕೆಎಫ್ಸಿಸಿ ಹಾಗೂ ಚುನಾವಣಾಧಿಕಾರಿಗೆ ಬುಧವಾರ ಹೈಕೋರ್ಟ್ ನಿರ್ದೇಶಿಸಿದ್ದು, ಅನುಮಾನಗಳು ಬಂದರೆ ಚುನಾವಣೆಗೆ ತಡೆ ನೀಡುವುದರ ಜೊತೆಗೆ ಗಂಭೀರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಅಭ್ಯರ್ಥಿಯಾಗಿರುವ ಬೆಂಗಳೂರಿನ ಎನ್ ಆರ್ ಕೆ ವಿಶ್ವನಾಥ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ಪ್ರಸಾದ್ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು “ಕೆಎಫ್ಸಿಸಿಗೆ ಜನವರಿ 31ರಂದು ಚುನಾವಣೆ ಘೋಷಿಸಲಾಗಿದೆ. ಜನವರಿ 14ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅದರ ಹಿಂದಿನ ದಿನ ಬೈಲಾಗೆ ವಿರುದ್ಧವಾಗಿ ಮತದಾರರ ಪಟ್ಟಿ ಪ್ರಕಟಿಸಲಾಗಿದೆ” ಎಂದರು.
ಆಗ ಪೀಠವು “ನ್ಯಾಯಾಲಯಕ್ಕೆ ಯಾವುದಾದರೂ ಅನುಮಾನ ಬಂದರೆ ಚುನಾವಣೆಗೆ ತಡೆ ನೀಡಲಾಗುವುದು. ದಾಖಲೆಯಲ್ಲಿ ಯಾವೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿದು ಸಲ್ಲಿಸಿ. ಸಲ್ಲಿಕೆ ಮಾಡುವ ದಾಖಲೆಗಳು ಸರಿಯಾಗಿದ್ದರೆ ಸರಿ. ಇಲ್ಲವಾದರೆ ಅದು ಗಂಭೀರ ಸಮಸ್ಯೆಯಾಗಲಿದೆ. ನೀವು ಅಗತ್ಯವಾದ ಎಲ್ಲಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡದಿದ್ದರೆ ನಿರ್ಣಯ ಕೈಗೊಳ್ಳಲು ನ್ಯಾಯಾಲಯ ಹೆದರುವುದಿಲ್ಲ” ಎಂದು ಕೆಎಫ್ಸಿಸಿ ಮತ್ತು ಚುನಾವಣಾಧಿಕಾರಿಯನ್ನು ಕುರಿತು ಹೇಳಿತು.
ಚುನಾವಣಾಧಿಕಾರಿ ಸುರೇಶ್ ಬಫ್ನಾ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಡಿಸೆಂಬರ್ನಲ್ಲಿ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ನೋಟಿಸ್ ಬೋರ್ಡ್ನಲ್ಲಿ ಹಾಕಲಾಗಿತ್ತು. ಜನರು ಅದರ ಪ್ರತಿ ತೆಗೆದುಕೊಂಡಿದ್ದಾರೆ” ಎಂದರು.
ಅದಕ್ಕೆ ಪೀಠವು “ಅದಕ್ಕೆ ದಾಖಲೆ ಏನಿದೆ? ಚುನಾವಣಾಧಿಕಾರಿಯಾಗಿ ನೀವು ಏನು ಹೇಳುತ್ತೀರಿ? ಮತದಾರರ ಪಟ್ಟಿ ಪ್ರಕಟಿಸಿದ್ದರೆ ಅದಕ್ಕೆ ದಾಖಲೆ ಎಲ್ಲಿ? ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರನ್ನು ಪ್ರಶ್ನಿಸಲು ದಾಖಲೆ ಏನಿದೆ?” ಎಂದರು.
ಅದಕ್ಕೆ ಹೊಳ್ಳ ಅವರು “ಕೆಎಫ್ಸಿಸಿ ಮತದಾರರ ಪಟ್ಟಿ ಪ್ರಕಟಿಸಿದ್ದು, ನಮಗೆ ಡಿಸೆಂಬರ್ನಲ್ಲಿ ಪ್ರತಿ ನೀಡಲಾಗಿದೆ. ಸಿವಿಲ್ ದಾವೆ ಹೂಡಿರುವ ಅರ್ಜಿದಾರರು ಅದನ್ನು ಮುಚ್ಚಿಟ್ಟು, ಈಗ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇದೇ ಆಧಾರದಲ್ಲಿ ಅರ್ಜಿ ವಜಾಗೊಳಿಸಬೇಕು. ಎರಡನೆಯದಾಗಿ ಎನ್ ಆರ್ ಕೆ ವಿಶ್ವನಾಥ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಹೆಚ್ಚೆಂದರೆ 14 ದಿನ ಚುನಾವಣೆ ಮುಂದೂಡಬಹುದು” ಎಂದರು.
ಅದಕೆ ಪೀಠವು “ಚುನಾವಣಾಧಿಕಾರಿ ಮತ್ತು ಮಂಡಳಿಯು ಅರ್ಜಿದಾರರ ಮನವಿಯನ್ನು ಚುನಾವಣೆಗೂ ಮುನ್ನ ಪರಿಹರಿಸಲು ಮುಂದಾಗಬಹುದು” ಎಂದಿತು.
ಕೆಎಫ್ಸಿಸಿ ಪ್ರತಿನಿಧಿಸಿದ್ದ ವಕೀಲ ಧನರಾಜ್ ಅವರನ್ನು ಕುರಿತು “ಏನಾದರೂ ಮುಚ್ಚುಮರೆ ಮಾಡಿರುವುದು ಕಂಡು ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಇದು ನ್ಯಾಯಾಂಗ ಪ್ರಕ್ರಿಯೆಯಾಗಿದ್ದು, ಕಣ್ಣಾಮುಚ್ಚಾಲೆ ಆಡಿದರೆ ಅದರ ವಿರುದ್ಧ ಕ್ರಮ ಖಂಡಿತಾ” ಎಂದು ಪೀಠ ಎಚ್ಚರಿಸಿ, ವಿಚಾರಣೆಯನ್ನು ನಾಳೆಗೆ ಮುಂದೂಡಿತು.