ಕೇಂದ್ರ ಸರ್ಕಾರದ ನೂತನ ಕಾನೂನು ಸಚಿವರಾಗಿ ಅರುಣಾಚಲ ಪ್ರದೇಶದ ಸಂಸದ ಕಿರಣ್ ರಿಜಿಜು ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.
ಕಿರಣ್ ರಿಜಿಜು ಅವರಿಗೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆ ವೇಳೆ ಸಂಪುಟ ದರ್ಜೆ ಸಚಿವರಾಗಿ ಬಡ್ತಿ ನೀಡಿ ಕೇಂದ್ರ ಕಾನೂನು ಸಚಿವರಾಗಿ ನೇಮಕ ಮಾಡಲಾಗಿತ್ತು.
ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಕಾನೂನು ಕೇಂದ್ರದ ಕಾನೂನು ಪದವೀಧರರಾದ ರಿಜಿಜು ಅವರು ಸಂಪುಟ ಪುನಾರಚನೆ ವೇಳೆ ಬಿಜೆಪಿಯ ಹಿರಿಯ ಮುಖಂಡ ರವಿ ಶಂಕರ್ ಪ್ರಸಾದ್ ಅವರಿಂದ ತೆರವಾದ ಕಾನೂನು ಸಚಿವ ಸ್ಥಾನವನ್ನು ತುಂಬಲಿದ್ದಾರೆ. ರವಿ ಶಂಕರ್ ಪ್ರಸಾದ್ ಅವರು ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕಾನೂನು ಸಚಿವರಾಗುವುದಕ್ಕೂ ಮುನ್ನ ರಿಜಿಜು ಅವರು ಆಯುಷ್, ಯುವಜನ ಮತ್ತು ಕ್ರೀಡೆ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.