
ರಾಜ್ಯದಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ವಕೀಲರ ಸಂಘಗಳ ನಿರ್ವಹಣೆಗೆ ನೀಡಲಾಗುತ್ತಿದ್ದ ಅನುದಾನವನ್ನು ಕೋವಿಡ್ ಕಾಲದಲ್ಲಿ ನಿಲ್ಲಿಸಲಾಗಿದ್ದು, ಅದನ್ನು ತಕ್ಷಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮನವಿ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರಿಗೆ ಪತ್ರ ಬರೆದಿರುವ ಕೆಎಸ್ಬಿಸಿ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ಅವರು “ರಾಜ್ಯದಲ್ಲಿ 196 ವಕೀಲರ ಸಂಘಗಳಿದ್ದು, ವಾರ್ಷಿಕವಾಗಿ ಜಿಲ್ಲಾ ಸಂಘಗಳಿಗೆ 70 ಸಾವಿರ ಮತ್ತು ತಾಲ್ಲೂಕು ಸಂಘಗಳಿಗೆ 40 ಸಾವಿರವನ್ನು ಸರ್ಕಾರ ಬಿಡುಗಡೆ ಮಾಡುತ್ತಿತ್ತು” ಎಂದು ವಿವರಿಸಿದ್ದಾರೆ.
“ಕೋವಿಡ್ ಎರಗಿದ 2019-2020ರಿಂದ ಇದುವರೆಗೆ ಯಾವುದೇ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದ ಸಂಘಗಳನ್ನು ನಡೆಸುವುದು ಕಷ್ಟಕರವಾಗಿದೆ. ಕಾನೂನು ಕ್ಷೇತ್ರದಿಂದ ಬಂದಿರುವ ತಾವುಗಳು ಇದನ್ನು ಅರ್ಥ ಮಾಡಿಕೊಂಡು ಅನುದಾನ ಬಿಡುಗಡೆ ಮಾಡಬೇಕು” ಎಂದು ಮುಖ್ಯಮಂತ್ರಿ ಮತ್ತು ಕಾನೂನು ಸಚಿವರಿಗೆ ಕೆಎಸ್ಬಿಸಿ ಮನವಿ ಮಾಡಿದೆ.