
ನ್ಯಾಯಾಲಯದ ಅನುಮತಿ ಇಲ್ಲದೇ ಹೊಸ ಸಂಘ ನೋಂದಣಿ ಅಥವಾ ಸಂಯೋಜನೆ ಕೋರಿ ಸಲ್ಲಿಕೆಯಾಗಿರುವ ಅಥವಾ ಸಲ್ಲಿಕೆಯಾಗುವ ಅರ್ಜಿಗಳನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್ಬಿಸಿ) ಪರಿಗಣಿಸಕೂಡದು ಎಂದು ಕರ್ನಾಟಕ ಹೈಕೋರ್ಟ್ ಶನಿವಾರ ನಿರ್ದೇಶಿಸಿದೆ.
ʼಹೈಕೋರ್ಟ್ ಬಾರ್ ಅಸೋಸಿಯೇಷನ್ʼ ಎಂಬ ಹೆಸರಿನಡಿ ಎಎಬಿಯ ಮಾಜಿ ಪದಾಧಿಕಾರಿಗಳು ಹೊಸ ಸಂಘ ನೋಂದಣಿ ಕೋರಿ ಕೆಎಸ್ಬಿಸಿಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘವು ಹೊಸದಾಗಿ ಯಾವುದೇ ಸಂಘ ನೋಂದಣಿಗೆ ಅನುಮತಿಸದಂತೆ ಕೆಎಸ್ಬಿಸಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಕೀಲರ ಕಲ್ಯಾಣ ನಿಧಿ ಕಾಯಿದೆ ಸೆಕ್ಷನ್ 13ರ ಅಡಿ ಹೊಸ ಸಂಘದ ನೋಂದಣಿಗೆ ಸಂಬಂಧಿಸಿ ಕೆಎಸ್ಬಿಸಿಗೆ ಯಾವುದೇ ಅರ್ಜಿ ಸಲ್ಲಿಕೆಯಾದರೂ ನ್ಯಾಯಾಲಯದ ಅನುಮತಿ ಇಲ್ಲದೇ ನೋಂದಣಿ ಅಥವಾ ಅಂಗಸಂಸ್ಥೆಯಾಗಿ ಸಂಯೋಜನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವಂತಿಲ್ಲ. ಕೆಎಸ್ಬಿಸಿ ಹಾಲಿ ಅಧ್ಯಕ್ಷರು ನಾಮನಿರ್ದೇಶಿತರಾಗಿದ್ದು, ನೀತಿಯ ವಿಚಾರದಲ್ಲಿ ಯಾವುದೇ ಕ್ರಮಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಅಲ್ಲದೇ, ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ, ಎಎಬಿಪರವಾಗಿ ವಾದಿಸಿದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ವಕೀಲರ ಕಲ್ಯಾಣ ನಿಧಿ ಕಾಯಿದೆ-1983 ಸೆಕ್ಷನ್ 13ರ ಅಡಿ ಬೆಂಗಳೂರು ವಕೀಲ ಸಂಘ ನೋಂದಣಿಯಾಗಿದೆ. ಕೇಂದ್ರದ ಕಾಯಿದೆ 1987ರ ಅಡಿಯೂ ಮಾನ್ಯತೆ ದೊರೆತಿದೆ. ಈಗ ಹೊಸದಾಗಿ ಸಂಘ ರಚನೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದರೆ ಅದು ಮತ್ತೆ ಸಮಸ್ಯೆಯಾಗಲಿದೆ. ಕೆಎಸ್ಬಿಸಿಗೆ ಚುನಾವಣೆ ನಡೆಯದಿರುವುದರಿಂದ ಈ ಸಮಸ್ಯೆಗಳು ಬರುತ್ತಿವೆ. ಎಎಬಿಯು 21 ಸಾವಿರ ಸದಸ್ಯರನ್ನು ಹೊಂದಿದೆ. ಹೊಸ ಸಂಘಕ್ಕೆ ಅನುಮತಿಸದಂತೆ ಕೆಎಸ್ಬಿಸಿಗೆ ನಿರ್ದೇಶಿಸಬೇಕು” ಎಂದು ಕೋರಿದರು.
ಆಗ ಪೀಠವು “ಕೆಎಸ್ಬಿಸಿಯು ಹೊಸ ಸಂಘಗಳ ನೋಂದಣಿಗೆ ಯುದ್ಧೋಪಾದಿಯಲ್ಲಿ ಕ್ರಮಕೈಗೊಳ್ಳುತ್ತಿದೆಯೇ?” ಎಂದಿತು.
ಎಎಬಿ ಪರವಾಗಿ ಫಣೀಂದ್ರ ಅವರ ವಾದ ವಿಸ್ತರಿಸಿದ ಇನ್ನೊಬ್ಬ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “ವಕೀಲರ ಕಲ್ಯಾಣ ನಿಧಿ ಕಾಯಿದೆ-1983 ನೋಂದಯಿತ ವಕೀಲರ ಸಂಘಗಳಿಗೆ ಅನ್ವಯಿಸುತ್ತದೆ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೋ ಕೆಎಸ್ಬಿಸಿ ನೋಂದಣಿಗೆ ಮುಂದಾಗುತ್ತಿದೆ. ಹೊಸ ಸಂಘಕ್ಕೆ ಅನುಮತಿಸುವ ವಿಚಾರವನ್ನು ಕೆಎಸ್ಬಿಸಿಯು ಮುಂದೆ ಬಂದು ಹೇಳಬೇಕು. ಆಗ ಹೊಸ ಸಂಘಕ್ಕೆ ಕೋರುತ್ತಿರುವವರನ್ನು ಪಕ್ಷಕಾರರನ್ನಾಗಿ ಮಾಡಲಾಗುವುದು. ಕೆಎಸ್ಬಿಸಿಯು ಒಡೆದು ಆಳುವ ಕೆಲಸ ಮಾಡುತ್ತಿದೆ. ನಮ್ಮದೇ ಒಂದಷ್ಟು ವಕೀಲರು ನಮ್ಮ ಎದುರು ನಿಂತಾಗ ನಮಗೆ ನೋವಾಗುತ್ತದೆ. ಎಎಬಿಯಲ್ಲಿ ಅಧ್ಯಕ್ಷರಾಗಿದ್ದವರು ಮತ್ತು ಚುನಾವಣೆಯಲ್ಲಿ ಸೋತವರು ಸೇರಿಕೊಂಡು ಹೊಸ ಸಂಘ ರಚನೆಗೆ ಮುಂದಾಗಿದ್ದಾರೆ” ಎಂದರು
ಇನೊಬ್ಬ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು “ಕೆಎಸ್ಬಿಸಿಯಲ್ಲಿ ಚುನಾಯಿತರು ಇಲ್ಲ. ನಾಮ ನಿರ್ದೇಶಿತ ಅಧ್ಯಕ್ಷರು ನಿರ್ಧಾರ ಕೈಗೊಳ್ಳಲಾಗದು” ಎಂದರು.
ಬೆಂಗಳೂರು ವಕೀಲರ ಸಂಘವು ಹೈಕೋರ್ಟ್ ಬಾರ್ ಅಸೋಸಿಯೇಷನ್ ವಿರುದ್ಧ ದೂರು ಸಲ್ಲಿಸಿದೆ. ಹೀಗಾಗಿ, ಹೈಕೋರ್ಟ್ ಬಾರ್ ಅಸೋಸಿಯೇಷನ್ ವಿರುದ್ಧ ದೂರು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960ರ ಸೆಕ್ಷನ್ 25ರಡಿ ಮತ್ತು ಸೆಕ್ಷನ್ 27ರ ಅನ್ವಯ ಸಂಘದ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಹೈಕೋರ್ಟ್ ಬಾರ್ ಅಸೋಸಿಯೇಷನ್ ಆಗಸ್ಟ್ 22ರಿಂದ ಯಥಾಸ್ಥಿತಿ ಕಾಪಾಡಬೇಕು, ದೂರು ಪರಿಶೀಲನೆಗೆ ಸೆಪ್ಟೆಂಬರ್ 9ರಂದು ವಿಚಾರಣೆ ನಿಗದಿಪಡಿಸಲಾಗಿದ್ದು, ಅಂದು ಹೈಕೋರ್ಟ್ ಬಾರ್ ಅಸೋಸಿಯೇಷನ್ ಮತ್ತು ಬೆಂಗಳೂರು ವಕೀಲರ ಸಂಘವು ತಮ್ಮ ಲಿಖಿತ ಹೇಳಿಕೆ ಮತ್ತು ಪೂರಕ ದಾಖಲೆಗಳೊಂದಿಗೆ ಖುದ್ದು ಹಾಜರಾಗಬೇಕು ಎಂದು ಬೆಂಗಳೂರಿನ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಯು ಆಗಸ್ಟ್ 21ರಂದು ಆದೇಶಿಸಿದ್ದಾರೆ.