Lakhimpur Kheri violence

Lakhimpur Kheri violence

[ಲಖಿಂಪುರ್ ಖೇರಿ] ಚಾಲಕ ತನ್ನನ್ನು ರಕ್ಷಿಸಿಕೊಳ್ಳಲು ವೇಗ ಹೆಚ್ಚಿಸಿರುವ ಸಾಧ್ಯತೆ ಇದೆ ಎಂದ ಅಲಾಹಾಬಾದ್ ಹೈಕೋರ್ಟ್

ಕೇಂದ್ರ ಸಚಿವ ಅಜಯ್ ಮಿಶ್ರಾ ಟೇನಿ ಅವರ ಪುತ್ರ ಮಿಶ್ರಾ ಒಡೆತನದ ಥಾರ್ ವಾಹನದಲ್ಲಿ ಕುಳಿತಿದ್ದ ಮೂವರ ಹತ್ಯೆಯ ಬಗ್ಗೆ ಕಣ್ಣು ಮುಚ್ಚಿಕೊಂಡಿರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
Published on

ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಇಂದು ಆಶಿಶ್ ಮಿಶ್ರಾ ಅವರಿಗೆ ಜಾಮೀನು ನೀಡುವಾಗ, ಅಲಾಹಾಬಾದ್ ಹೈಕೋರ್ಟ್ ಚಾಲಕ ತನ್ನನ್ನು ರಕ್ಷಿಸಿಕೊಳ್ಳಲು ವಾಹನದ ವೇಗ ಹೆಚ್ಚಿಸಿರುವ ಸಾಧ್ಯತೆ ಇದೆ ಎಂದು ಹೇಳಿದೆ.

ನ್ಯಾ. ರಾಜೀವ್ ಸಿಂಗ್ ಅವರು ಇಂದು ನೀಡಿದ ಆದೇಶದಲ್ಲಿ "ನಿಸ್ಸಂದೇಹವಾಗಿ, ಥಾರ್‌ ವಾಹನ ಡಿಕ್ಕಿ ಹೊಡೆದ ಗಾಯ ಹೊರತುಪಡಿಸಿ, ಮೃತರ ದೇಹದ ಮೇಲೆ ಅಥವಾ ಇತರ ಯಾವುದೇ ವ್ಯಕ್ತಿಯ ಮೇಲೆ ಬಂದೂಕಿನ ಗಾಯ ಕಂಡುಬಂದಿಲ್ಲ. ಇದಲ್ಲದೆ, ಪ್ರಾಸಿಕ್ಯೂಷನ್ ಹೇಳುವುದನ್ನು ಒಪ್ಪಿಕೊಂಡರೆ, ಸಾವಿರಾರು ಪ್ರತಿಭಟನಾಕಾರರು ಸ್ಥಳದಲ್ಲಿ ಜಮಾಯಿಸಿದ್ದರು. ಘಟನೆಯ ಬಗ್ಗೆ ಮತ್ತು ಚಾಲಕ ತನ್ನನ್ನು ರಕ್ಷಿಸಿಕೊಳ್ಳಲು ವಾಹನವನ್ನು ವೇಗಗೊಳಿಸಲು ಪ್ರಯತ್ನಿಸಿರುವ ಸಾಧ್ಯತೆಯಿದೆ, ಈ ಕಾರಣದಿಂದಾಗಿ ಈ ಘಟನೆ ಸಂಭವಿಸಿರಬಹುದು” ಎಂದು ದಾಖಲಿಸಿದ್ದಾರೆ.

ಜಾಮೀನು ನೀಡಲು ಕಾರಣವಾದ ಅಂಶಗಳು ಹೀಗಿವೆ:

  • ವಾಹನ ಡಿಕ್ಕಿ ಹೊಡೆದ ಗಾಯ ಹೊರತುಪಡಿಸಿ, ಮೃತರ ದೇಹದ ಮೇಲೆ ಅಥವಾ ಇತರ ಯಾವುದೇ ವ್ಯಕ್ತಿಯ ಮೇಲೆ ಬಂದೂಕಿನ ಗಾಯ ಕಂಡುಬಂದಿಲ್ಲ.

  • ಪ್ರತಿಭಟನಾಕಾರರಿಂದ ಸಾವನ್ನಪ್ಪಿದ ಚಾಲಕ ಸೇರಿದಂತೆ ವಾಹನದಲ್ಲಿ ಕುಳಿತಿದ್ದ ಮೂವರ ಹತ್ಯೆ ಬಗ್ಗೆ ಕಣ್ಣು ಮುಚ್ಚಿಕೊಂಡಿರಲು ಸಾಧ್ಯವಿಲ್ಲ.

  • ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮಿಶ್ರಾ ವಾಹನದ ಚಾಲಕನನ್ನು ಪ್ರಚೋದಿಸಿದರು ಎಂಬುದು ಪ್ರಾಸಿಕ್ಯೂಷನ್ ಆರೋಪ. ಆದರೆ, ವಾಹನದಲ್ಲಿದ್ದ ಇತರ ಇಬ್ಬರನ್ನು ಪ್ರತಿಭಟನಾಕಾರರು ಕೊಂದರು.

  • ತನಿಖೆಯ ಸಂದರ್ಭದಲ್ಲಿ, ಆಶಿಶ್‌ ಅವರಿಗೆ ನೋಟಿಸ್ ನೀಡಲಾಯಿತು ಮತ್ತು ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿದ್ದರು;

  • ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ.

ನ್ಯಾಯಾಲಯದ ಇತರೆ ಅವಲೋಕನಗಳು:

  • ಪ್ರತಿಭಟನಾಕಾರರ ದೇಹದ ಮೇಲೆ ಗುಂಡೇಟಿನ ಗುರುತುಗಳು ಕಂಡುಬರದಿದ್ದರೂ ಎಫ್‌ಐಆರ್‌ನಲ್ಲಿ ಆಶಿಶ್‌ ಅವರ ಪಾತ್ರದ ಬಗ್ಗೆ ತಪ್ಪಾಗಿ ಆರೋಪಿಸಲಾಗಿದೆ.

  • ಬೇರೆ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದ ಕೂಡ 17 ಸಾವಿರ ಮಂದಿ ಜಮಾಯಿಸಿದ್ದರೂ ಹಿಂಸಾಚಾರವನ್ನು ನಿಭಾಯಿಸುವಲ್ಲಿ ಜಿಲ್ಲಾಡಳಿತ ಗಂಭೀರವಾಗಿರಲಿಲ್ಲ.

  • ಹೀಗಾಗಿ ನಾಗರಿಕರಿಗೆ ಉಂಟಾಗುವ ಅನನುಕೂಲ ತಪ್ಪಿಸಲು ಸಭೆ ಮತ್ತು ಮೆರವಣಿಗೆ ನಿಯಂತ್ರಿಸಲು ಅಗತ್ಯ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ನು ನೀಡುವಂತೆ ಉತ್ತರ ಪ್ರದೇಶ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಲಾಗುತ್ತಿದೆ.

Kannada Bar & Bench
kannada.barandbench.com