ಲವಾಸಾ ಗಿರಿಧಾಮ ಯೋಜನೆಯ ಭೂಮಿ ಖರೀದಿಗಾಗಿ ಲೇಕ್ ಸಿಟಿ ಕಾರ್ಪೊರೇಷನ್ ಲಿಮಿಟೆಡ್ಗೆ ನೀಡಲಾಗಿದ್ದ ಅನುಮತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಬಾಂಬೆ ಹೈಕೋರ್ಟ್ ಶನಿವಾರ ತಿರಸ್ಕರಿಸಿದೆ [ನಾನಾಸಾಹೇಬ್ ವಸಂತರಾವ್ ಜಾಧವ್ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆದರೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್, ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಮಾಡಲಾದ ಆರೋಪಗಳನ್ನು ಅವರು ತಳ್ಳಿಹಾಕಿಲ್ಲ. ಆದ್ದರಿಂದ ಅದನ್ನು ಸರಿ ಎಂದು ಭಾವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು. ಪವಾರ್ ಮತ್ತು ಸುಳೆ ಅವರು ಗಿರಿಧಾಮದ ಯೋಜನೆಯಲ್ಲಿ ವೈಯಕ್ತಿಕ ಆಸಕ್ತಿ ಹೊಂದಿದ್ದಾರೆ, ಇದು ಬಹುತೇಕ ಸಾಬೀತಾಗಿದೆ. ಆರೋಪಗಳು ನಿಜವಾಗಿರುವ ಸಾಧ್ಯತೆ ಇದೆ ಎಂದು ಅದು ವಿವರಿಸಿತು.
ಅರ್ಜಿ ಸಲ್ಲಿಸುವಲ್ಲಿ ವಿಳಂಬವಾಗಿರುವುದರಿಂದ ಪ್ರಕರಣ ಕೈಬಿಡುವುದು ಸೂಕ್ತ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ಪೀಠ ತಿಳಿಸಿತು. ಇಷ್ಟೊತ್ತಿಗಾಗಲೇ ರೈತರು ತಮ್ಮ ಆಸ್ತಿ ಮೇಲಿನ ಹಕ್ಕುಗಳನ್ನು ಕಳೆದುಕೊಂಡಿರುತ್ತಾರೆ. ರೈತರು ಪರಿಹಾರ ಪಡೆಯದ ಯಾವುದೇ ಅಹವಾಲನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಹೀಗಾಗಿ ಅವರು ಸಂತೋಷವಾಗಿದ್ದಾರೆ ಎಂದು ಭಾವಿಸುವುದು ಸುರಕ್ಷಿತ ಎಂದು ಅದು ಅಭಿಪ್ರಾಯಪಟ್ಟಿತು.
"ಆಸ್ತಿ ಹಕ್ಕುಈಗ ಮೂಲಭೂತ ಹಕ್ಕಲ್ಲದಿದ್ದರೂ, ಸಾಂವಿಧಾನಿಕ ಹಕ್ಕಾಗಿದೆ ಮತ್ತು ಯಾವುದೇ ಅತೃಪ್ತ ರೈತ ಇದನ್ನು ಚಲಾಯಿಸಬಹುದಾಗಿತ್ತು" ಎಂದ ನ್ಯಾಯಾಲಯ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿತು. ಇದೇ ವೇಳೆ ಶರದ್ ಪವಾರ್ ಅವರು ಮಹಾರಾಷ್ಟ್ರದಲ್ಲಿ ಹೊಂದಿರುವ ಪ್ರಭಾವವನ್ನು ಒಪ್ಪಿಕೊಂಡ ಲವಾಸಾ ಯೋಜನೆ ಪವಾರ್ ಅವರ ಕನಸಿನ ಕೂಸು ಎಂದಿತು.
ಸಮಾಜದಲ್ಲಿ ಆಳವಾಗಿ ಬೇರೂರಿರುವ ಭಾರತ ಮತ್ತು ಅದರ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುವ ಅಸ್ವಸ್ಥತೆಯ ಬಗ್ಗೆಯೂ 68 ಪುಟಗಳ ತೀರ್ಪಿನಲ್ಲಿ ಚರ್ಚಿಸಲಾಗಿದೆ. ಈ ಅಸ್ವಸ್ಥತೆ ಕಿತ್ತುಹಾಕಲು ಜನರ ಮನಸ್ಥಿತಿ ಬದಲಾಯಿಸುವುದು ಅವಶ್ಯಕ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಏನಿದು ಲವಾಸಾ ಯೋಜನೆ?
ಲವಾಸಾ ಎಂಬುದು ಪುಣೆ ಬಳಿಯ ನದಿಯೊಂದರ ದಂಡೆ ಮೇಲೆ ನಿರ್ಮಿಸಲಾಗುತ್ತಿರುವ ಖಾಸಗಿ ಯೋಜಿತ ನಗರ.ಇಟಲಿಯ ಪೊರ್ಟೊಫಿನೊ ಮಾದರಿಯಲ್ಲಿ ನಿರ್ಮಾಣವಾಗಬೇಕಿದ್ದ ಭೂಸ್ವಾಧೀನ, ಪರಿಸರ ಹಾನಿ ಹಾಗೂ ರಾಜಕೀಯ ಭ್ರಷ್ಟಾಚಾರದ ಮೂಲಕ ಸಾಲಪಡೆದ ವಿವಾದಗಳನ್ನು ಎದುರಿಸುತ್ತಿದೆ.
ಆದೇಶದ ಪ್ರತಿಯನ್ನು ಇಲ್ಲಿ ಓದಿ: