ವಕೀಲ ಈರಣ್ಣಗೌಡ ಪಾಟೀಲ ಕೊಲೆ ವ್ಯವಸ್ಥೆಗೆ ಬೆದರಿಕೆ: ನ್ಯಾ. ಶ್ರೀಷಾನಂದ

ಇಂಥ ಘಟನೆಗಳನ್ನು ಮಟ್ಟಹಾಕದಿದ್ದರೆ 20 ವರ್ಷಗಳ ನಂತರ ಸಿವಿಲ್ ವ್ಯಾಜ್ಯಗಳು ಕೋರ್ಟ್‌ಗೆ ದಾಖಲಾಗುವುದು ಅನುಮಾನ, ಕೊಲೆಗಡುಕರು ಮುಂದೊಂದು ದಿನ ಸಾಮಾನ್ಯರನ್ನು ಬೆದರಿಸಿ ಸಿವಿಲ್‌ ವ್ಯಾಜ್ಯ ತಾವೇ ಇತ್ಯರ್ಥ ಮಾಡಿಕೊಳ್ಳುತ್ತಾರೆ ಎಂದಿರುವ ಪೀಠ.
Karnataka HC and Justice V Srishananda
Karnataka HC and Justice V Srishananda

ಕಲಬುರ್ಗಿಯಲ್ಲಿ ಇತ್ತೀಚೆಗೆ ನಡೆದ ವಕೀಲ ಈರಣ್ಣಗೌಡ ಪೊಲೀಸ್‌ ಪಾಟೀಲ ಅವರ ಹತ್ಯೆ ಘಟನೆ ನಿಜಕ್ಕೂ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ಸಿವಿಲ್‌ ವ್ಯಾಜ್ಯವೊಂದರ ಸಂಬಂಧ ವಿಚಾರಣೆ ವೇಳೆ ಈರಗಣ್ಣ ಗೌಡರ ಹತ್ಯೆ ಘಟನೆಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ವಿ ಶ್ರೀಷಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು 20 ಎಕರೆ ಜಾಗದ ಮೇಲಿನ ಹಕ್ಕಿನ ವಿಚಾರ ಸಂಬಂಧ ಈ ಕೊಲೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೇ, ಇಂತಹ ಘಟನೆಗಳನ್ನು ಮಟ್ಟಹಾಕದೆ ಹೋದರೆ ಮುಂದಿನ 20 ವರ್ಷಗಳ ನಂತರ ಸಿವಿಲ್ ವ್ಯಾಜ್ಯಗಳು ಕೋರ್ಟ್‌ಗೆ ದಾಖಲಾಗುವುದು ಅನುಮಾನ, ಕೊಲೆಗಡುಕರು ಮುಂದೊಂದು ದಿನ ಶ್ರೀಸಾಮಾನ್ಯರನ್ನು ಬೆದರಿಸಿ ಸಿವಿಲ್‌ ವ್ಯಾಜ್ಯಗಳನ್ನು ತಾವೇ ಇತ್ಯರ್ಥ ಮಾಡಿಕೊಳ್ಳುತ್ತಾರೆ. ಈ ಹೇಯ ಕೃತ್ಯಗಳು ನಿಜಕ್ಕೂ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದ್ದಾರೆ.

ಡಿಸೆಂಬರ್‌ 7ರಂದು ಕಲಬುರ್ಗಿಯ ಸಾಯಿ ಮಂದಿರ ಅಪಾರ್ಟ್‌ಮೆಂಟ್‌ ಬಳಿ ವಕೀಲ ಈರಣ್ಣಗೌಡ ಪಾಟೀಲ್‌ ಅವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಅವರ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Kannada Bar & Bench
kannada.barandbench.com