ಅಸಾಧಾರಣ ಸಂದರ್ಭಗಳ ಹೊರತಾಗಿ, ಕಕ್ಷಿದಾರರಿಗೆ ಸಲಹೆ ನೀಡುವ ವಕೀಲರಿಗೆ ಸಮನ್ಸ್ ಜಾರಿ ಮಾಡುವಂತಿಲ್ಲ: ಸುಪ್ರೀಂ

ಭಾರತೀಯ ಸಾಕ್ಷಿ‌ ಅಧಿನಿಯಮದ ಸೆಕ್ಷನ್ 132ರ ಅಡಿಯಲ್ಲಿ ಉಲ್ಲೇಖಿಸಲಾದ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವಕೀಲರನ್ನು ಸಮನ್ಸ್ ಮಾಡಬಹುದು ಎಂದು ನ್ಯಾಯಾಲಯ ಎಚ್ಚರಿಸಿದೆ.
Supreme Court Lawyers
Supreme Court Lawyers
Published on

ಕಕ್ಷಿದಾರರಿಗೆ ಸಲಹೆ ನೀಡಿದ ಕಾರಣಕ್ಕೆ ವಕೀಲರಿಗೆ ಜಾರಿ ನಿರ್ದೇಶನಾಲಯ (ಇ ಡಿ) ರೀತಿಯ ತನಿಖಾ ಸಂಸ್ಥೆಗಳು ಸಮನ್ಸ್‌ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

ಭಾರತೀಯ ಸಾಕ್ಷ್ಯ ಅಧಿನಿಯಮ, 2023 (ಬಿಎಸ್‌ಎ) ಸೆಕ್ಷನ್ 132ರ ಅಡಿಯಲ್ಲಿ ಉಲ್ಲೇಖಿಸಲಾದ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ವಕೀಲರಿಗೆ ಸಮನ್ಸ್ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಹಾಗೂ ಎನ್‌ ವಿ ಅಂಜಾರಿಯಾ ಅವರಿದ್ದ ಪೀಠ ತಿಳಿಸಿದೆ.

Also Read
ಹಿರಿಯ ನ್ಯಾಯವಾದಿ ದಾತಾರ್ ಅವರಿಗೆ ಇ ಡಿ ಸಮನ್ಸ್: ಎಸ್‌ಸಿಎಒಆರ್‌ಎ ತೀವ್ರ ಖಂಡನೆ

ವಕೀಲರು ತಮ್ಮ ಕಕ್ಷಿದಾರರೊಂದಿಗೆ ಗೌಪ್ಯ ಸಂವಹನಗಳನ್ನು ಬಹಿರಂಗಪಡಿಸದಂತೆ ಬಿಎಸ್‌ಎ ಸೆಕ್ಷನ್‌ 132 ನಿಷೇಧಿಸುತ್ತದೆ. ಆದರೆ ಕಾನೂನುಬಾಹಿರ ವಿಚಾರವಾಗಿ ಮಾಹಿತಿ ವಿನಿಮಯಗೊಂಡಿದ್ದರೆ ಇಲ್ಲವೇ ವಕೀಲರೇ ಅಪರಾಧ ಅಥವಾ ವಂಚನೆಯಲ್ಲಿ ತೊಡಗಿದ್ದಾಗ ಮಾತ್ರ ಅಂತಹ ಮಾಹಿತಿ ಬಹಿರಂಗಕ್ಕೆ ವಿನಾಯಿತಿ ಇರುತ್ತದೆ.

ಆರೋಪಿತರ ಪರ ವಾದಿಸುವ ವಕೀಲರಿಗೆ ಯಾವುದೇ ಸಂದರ್ಭದಲ್ಲಿ ತನಿಖಾಧಿಕಾರಿಗಳು ಸಮನ್ಸ್‌ ನೀಡಬಾರದು. ವಕೀಲರಿಗೆ ಸಮನ್ಸ್ ನೀಡಬೇಕೆಂದಿದ್ದರೆ ಯಾವ ಕಾರಣಕ್ಕೆ ಸಮನ್ಸ್‌ ನೀಡಲಾಗಿದೆ ಎಂದು ಸಮನ್ಸ್‌ ನೋಟಿಸ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Also Read
ಇ ಡಿ ಯಾವುದೇ ವ್ಯಕ್ತಿಗೆ ಸಮನ್ಸ್‌ ನೀಡಬಹುದು; ಪಡೆದವರು ಅದನ್ನು ಗೌರವಿಸಿ ಪ್ರತಿಕ್ರಿಯೆ ನೀಡಬೇಕು: ಸುಪ್ರೀಂ ಕೋರ್ಟ್

ಅಲ್ಲದೆ ವಕೀಲರಿಂದ ಡಿಜಿಟಲ್‌ ಸಾಧನಗಳನ್ನು ವಶಪಡಿಸಿಕೊಂಡಿದ್ದರೆ ಸಂಬಂಧಪಟ್ಟ ಕ್ರಿಮಿನಲ್ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಜೊತೆಗೆ ವಕೀಲರು ಮತ್ತು ಸಂಬಂಧಪಟ್ಟ ಇತರ ಪಕ್ಷಕಾರರ ಸಮ್ಮುಖದಲ್ಲಿ ಮಾತ್ರವೇ ತೆರೆಯಬೇಕು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣವೊಂದರಲ್ಲಿ ತಮ್ಮ ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ್ದ ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಪ್ರತಾಪ್ ವೇಣುಗೋಪಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಮಾಧ್ಯಮ ವರದಿಗಳು ಪ್ರಕಟವಾದ ನಂತರ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿತ್ತು. ಇದೀಗ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ದಾತಾರ್‌ ಹಾಗೂ ಇನ್ನಿತರರಿಗೆ ನೀಡಿದ್ದ ಸಮನ್ಸ್‌ಅನ್ನು ಕೂಡ ರದ್ದುಗೊಳಿಸಿದೆ.

Kannada Bar & Bench
kannada.barandbench.com