ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |29-4-2021
ಸಿಎಂ ಪರಿಹಾರ ನಿಧಿಗೆ ಹಣ ಸಂಗ್ರಹ ಹಾಗೂ ಅದರ ಬಳಕೆಯ ಬಗ್ಗೆ ಮಾಹಿತಿ ಕೋರಿ ದೆಹಲಿ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆ
ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ಸಂಗ್ರಹಿಸಲಾಗಿರುವ ಹಣ ಹಾಗೂ ಅದನ್ನು ಕೋವಿಡ್ ಪರಿಹಾರ ಕಾರ್ಯಕ್ಕೆ ಬಳಸಿರುವುದರ ಕುರಿತು ಮಾಹಿತಿ ನೀಡುವಂತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರಕ್ಕೆ ಸೂಚಿಸುವಂತೆ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ.
ಕೋವಿಡ್ ಪರಿಹಾರಕ್ಕಾಗಿ ಲೆಫ್ಟಿನೆಂಟ್ ಗವರ್ನರ್/ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಕೆಯಾಗಿರುವ ನಿಧಿಯ ದುರ್ಬಳಕೆ ಕುರಿತು ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಸುವಂತೆ ಕೋರಿ ವಕೀಲರಾದ ಪ್ರತ್ಯುಷ್ ಪ್ರಸನ್ನ ಮತ್ತು ಸಮೀತ್ ಠಕ್ಕರ್ ಅವರು ಕೋರಿದ್ದಾರೆ. ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಜಾಹೀರಾತು ನೀಡುವುದನ್ನು ತಕ್ಷಣ ನಿಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸುವಂತೆಯೂ ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ಕಾನೂನು ಗುಮಾಸ್ತರು ಮತ್ತು ಸಂಶೋಧನಾ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಕೆಗೆ ಮೇ 29 ಕೊನೆಯ ದಿನ
ಹತ್ತೊಂಭತ್ತು ಕಾನೂನು ಗುಮಾಸ್ತ ಮತ್ತು ಸಂಶೋಧನಾ ಸಹಾಯಕ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. ಕಾನೂನು ಪದವೀಧರರಿಗೆ, ಕಾನೂನು ವೃತ್ತಿಗೆ ಸೇರ್ಪಡೆಗೊಳ್ಳ ಬಯಸುವವರಿಗೆ, ಕಾನೂನು ತಕರಾರು ಅರ್ಜಿಗಳ ವಿವಿಧ ರೂಪಗಳು, ಕಾನೂನಿನ ವಿವಿಧ ಶಾಖೆಗಳು ಮತ್ತು ನ್ಯಾಯಾಲಯದ ಕಾರ್ಯ ವಿಧಾನಗಳ ಪರಿಚಯ ಮಾಡಿಕೊಡುವ ಸಲುವಾಗಿ ಹಾಗೂ ನವ ಕಾನೂನು ಪದವೀಧರರಿಗೆ ಉತ್ತೇಜನ ನೀಡುವ ಸಲುವಾಗಿ, ಕಾನೂನು ಪದವಿಯಲ್ಲಿ ಶೇ. 50ರಷ್ಟು ಅಂಕಗಳನ್ನು ಪಡೆದಿರುವ ಹಾಗೂ ಗಣಕ ಯಂತ್ರದ ತರಬೇತಿ ಹೊಂದಿರುವಂತಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ರಾಜ್ಯ ವಕೀಲರ ಪರಿಷತ್ನಲ್ಲಿ ನೋಂದಾಯಿಸಿರಬೇಕು. ಅರ್ಜಿದಾರರ ವಯಸ್ಸು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು 30 ವರ್ಷಗಳನ್ನು ಮೀರಿರಬಾರದು. ಭರ್ತಿ ಮಾಡಿರುವ ಅರ್ಜಿಗಳನ್ನು ಸ್ವೀಕರಿಸಲು ಮೇ 29 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ www.karnatakajudiciary.kar.nic.in ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.