ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 23-09-2021

>> ಸಾರ್ವಜನಿಕ ನೈತಿಕತೆಯ ಜೋಡಿಯನ್ನು ರಕ್ಷಿಸಲು ಅಡ್ಡಿಯಾಗಬಾರದು ಎಂದ ರಾಜಸ್ಥಾನ ಹೈಕೋರ್ಟ್‌ >> 2021ರ ಜಾತಿ ಗಣತಿಯಲ್ಲಿ ಒಬಿಸಿಗಳನ್ನು ಸೇರಿಸದಂತೆ ಸುಪ್ರೀಂಗೆ ಕೇಂದ್ರದ ಮನವಿ
Court collage
Court collage

ವಿವಾಹಿತ ಮಹಿಳೆಯ ಲಿವ್‌ ಇನ್‌ ಸಂಬಂಧ: ಸಾರ್ವಜನಿಕ ನೈತಿಕತೆಯು ಸಾಂವಿಧಾನಿಕ ನೈತಿಕತೆಯನ್ನು ಮರೆಮಾಡಬಾರದು ಎಂದ ರಾಜಸ್ಥಾನ ಹೈಕೋರ್ಟ್‌

ಲಿವ್‌- ಇನ್‌ ಸಂಬಂಧದಲ್ಲಿರುವ ಸಂಗಾತಿಗಳಲ್ಲಿ ಒಬ್ಬರು ಮದುವೆಯಾಗಿದ್ದರೂ ಕೂಡ ಸಾಮಾಜಿಕ ಅಥವಾ ಸಾರ್ವಜನಿಕ ನೈತಿಕತೆಯ ಗ್ರಹಿಕೆಗಳು ಜೋಡಿಯನ್ನು ರಕ್ಷಿಸಲು ಅಡ್ಡಿಯಾಗಬಾರದು ಎಂದು ರಾಜಸ್ಥಾನ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ. ಸರ್ಕಾರದ ಕ್ರಮಗಳು ಹೇಗಿರಬೇಕು ಎಂದು ನಿರ್ದೇಶಿಸುವ ನೈತಿಕ ಪೊಲೀಸ್‌ಗಿರಿಗೆ ಅನುಮತಿ ನೀಡಲಾಗದು ಅಥವಾ ಸಾರ್ವಜನಿಕರ ನೈತಿಕ ಪೊಲೀಸ್‌ಗಿರಿಯನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿದೆ.

Live-in Relationship
Live-in Relationshipindianewsnet.com/

ಕಾನೂನಿನ ಸೂಕ್ತ ಪ್ರಕ್ರಿಯೆ ಹೊರತಾಗಿ ಎಲ್ಲಾ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಕರ್ತವ್ಯ ರಾಜ್ಯದ್ದಾಗಿದೆ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಯಾವುದೇ ಅಕ್ರಮ ಅಥವಾ ತಪ್ಪು ನಡೆದಾಗ ಅದಕ್ಕೆ ಶಿಕ್ಷೆ ನೀಡುವ ಹಕ್ಕು ರಾಜ್ಯದ್ದಾಗಿದೆ. ಅದು ಕೂಡ ಕಾನೂನಿನ ಸರಿಯಾದ ಪ್ರಕ್ರಿಯೆಗೆ ಅನುಗುಣವಾಗಿ ನಡೆಯಬೇಕು. ಯಾವುದೇ ಸಂದರ್ಭದಲ್ಲಿ ನೈತಿಕ ಪೊಲೀಸ್ ಅಥವಾ ಜನಸಮೂಹದ ಮನಸ್ಥಿತಿಗೆ ತಕ್ಕಂತೆ ರಾಜ್ಯವು ಯಾವುದೇ ಕಾನೂನು ಪ್ರಕ್ರಿಯೆಯನ್ನು ಮೀರುವಂತಿಲ್ಲ ಎಂದು ಪೀಠ ತಿಳಿಸಿದೆ. ಸಂವಿಧಾನದ ನೈತಿಕತೆಯನ್ನು ಎತ್ತಿಹಿಡಿಯುವ ಹೊಣೆಯ ಜೊತೆಗೆ ನ್ಯಾಯಾಲಯಗಳಿಗೆ ಇಬ್ಬರು ವಯಸ್ಕರ ನಡುವಿನ ವೈಯಕ್ತಿಕ ಸಂಬಂಧ ಮುರಿಯದಿರುವ ಸಮಾನಾಂತರ ಕರ್ತವ್ಯ ಕೂಡ ಇದೆ ಎಂದು ಹೈಕೋರ್ಟ್‌ ಹೇಳಿದೆ.

ಹಿಂದುಳಿದ ವರ್ಗಗಳ ಜನಗಣತಿ ʼತಪ್ಪುʼ ಗಳಿಂದ ತುಂಬಿರುತ್ತದೆ: 2021 ಜಾತಿ ಗಣತಿಯಲ್ಲಿ ಒಬಿಸಿಗಳನ್ನು ಸೇರಿಸದಂತೆ ಸುಪ್ರೀಂಗೆ ಕೇಂದ್ರದ ಮನವಿ

ಮಹಾರಾಷ್ಟ್ರದಲ್ಲಿ ಹಿಂದುಳಿದ ವರ್ಗಗಳ ದತ್ತಾಂಶ ಕೋರಿ ಅಲ್ಲಿನ ಸರ್ಕಾರ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿಬಾರದು. ಏಕೆಂದರೆ ಹಿಂದುಳಿದ ವರ್ಗಗಳ ಜನಗಣತಿಯು ಆಡಳಿತಾತ್ಮಕವಾಗಿ ಕಷ್ಟವಾಗಿದ್ದು, ಇದು ಪರಿಪೂರ್ಣತೆ ಮತ್ತು ನಿಖರತೆ ವಿಚಾರದಲ್ಲಿ ಹಿನ್ನಡೆ ಅನುಭವಿಸುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

2021ರ ಜನಗಣತಿಯ ವೇಳೆ ಸಂಗ್ರಹಿಸಬೇಕಾದ ಮಾಹಿತಿಗೆ ಸಂಬಂಧಿಸಿದಂತೆ 2020ರ ಜನವರಿ 7ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಅಫಿಡವಿಟ್‌ನಲ್ಲಿ ತಿಳಿಸಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಸೇರಿಸಲಾಗಿದೆ. ಆದರೆ, ಬೇರಾವುದೇ ಜಾತಿಯ ಪಂಗಡವನ್ನು ಉಲ್ಲೇಖಿಸಿಲ್ಲ. ಮುಂಬರುವ ಜನಗಣತಿಯಿಂದ ಬೇರೆ ಯಾವುದೇ ಜಾತಿಗೆ ಸಂಬಂಧಿಸಿದ ಮಾಹಿತಿಯನ್ನು ಹೊರಗಿಡುವುದು ಸರ್ಕಾರವು ತೆಗೆದುಕೊಂಡ "ಪ್ರಜ್ಞಾಪೂರ್ವಕ ನೀತಿನಿರೂಪಣೆಯ ನಿರ್ಧಾರ" ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com