ಕಾನೂನು ವೃತ್ತಿಪರರು ಜ್ಞಾನವನ್ನು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧದ ಹೋರಾಟಕ್ಕೆ ಬಳಸಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಲಾಏಷಿಯಾ ಸಮ್ಮೇಳನದ 36ನೇ ಆವೃತ್ತಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಾನೂನು ವೃತ್ತಿಪರರು ಜ್ಞಾನವನ್ನು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧದ ಹೋರಾಟಕ್ಕೆ ಬಳಸಬೇಕು: ಸಿಎಂ ಸಿದ್ದರಾಮಯ್ಯ

“ಕಾನೂನು ವೃತ್ತಿಪರರು, ವಕೀಲರ ಸಂಘಗಳ ಪ್ರತಿನಿಧಿಗಳು, ಅಂತರರಾಷ್ಟ್ರೀಯ ಕಾನೂನು ವ್ಯವಸ್ಥೆಯ ಬಗ್ಗೆ ಇರುವ ಅನನ್ಯ ಜ್ಞಾನವನ್ನು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಲಾಏಷಿಯಾ ಸಮ್ಮೇಳನದ 36ನೇ ಆವೃತ್ತಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

“ತಮ್ಮ ವ್ಯಾಪ್ತಿಯ ನಾಗರಿಕರ ಮೇಲೆ ನಿರ್ದಯವಾಗಿ ಎಸಲಾಗುವ ಅಪರಾಧ ಮತ್ತು ಹಿಂಸೆಗಳನ್ನು ನೋಡುತ್ತಾ ಸುಮ್ಮನಿರಲು ಕಾನೂನು ವೃತ್ತಿಪರರಿಗೆ ಸಾಧ್ಯವಿಲ್ಲ. ಕಳೆದ 50 ವರ್ಷಗಳಲ್ಲಿ ಲಾ ಏಷಿಯಾ ಸಂಸ್ಥೆಯು ಅಂತಾರಾಷ್ಟ್ರೀಯ ಕಾನೂನು ಜ್ಞಾನವನ್ನು ಪ್ರಚುರಪಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುವುದಲ್ಲದೇ, ಕಾನೂನು ವೃತ್ತಿಯ ಧ್ವನಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ” ಎಂದರು.

“ಭಾರತದಲ್ಲಿ ಸಂವಿಧಾನವು ಕಾನೂನಿನ ಅತ್ಯುನ್ನತ ಸಂಪನ್ಮೂಲ. ಚೈತನ್ಯ ಹಾಗೂ ವಿಷಯಗಳೆರಡರಲ್ಲೂ ಭಾರತ ಸಂವಿಧಾನ ಅನನ್ಯವಾಗಿದೆ. ಭಾರತದ ಸಂವಿಧಾನವು ಸಂಕುಚಿತವಾಗಿಲ್ಲ. ಕೆಲವು ನಿಯಮಗಳನ್ನು ಪಾಲಿಸುವ ಮೂಲಕ ಸಂಸತ್ತು ಸಂವಿಧಾನದಲ್ಲಿ ತಿದ್ದುಪಡಿಗಳನ್ನು ತರಬಹುದು. ನಮ್ಮ ಸರ್ಕಾರ ಸಂವಿಧಾನವನ್ನು ಅಕ್ಷರಶಃ ಪಾಲಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ” ಎಂದರು.

“ಸಮುದಾಯದ ಎಲ್ಲರೂ ಪಾಲಿಸಬೇಕಾದ ನಿಯಮಗಳನ್ನು ಕಾನೂನು ರೂಪಿಸುತ್ತದೆ. ನಮ್ಮ ಸುರಕ್ಷತೆಯನ್ನು ಕಾನೂನು ಕಾಪಾಡುತ್ತದೆ. ನಾಗರಿಕರಾಗಿ ಸರ್ಕಾರ, ಜನರು ಹಾಗೂ ಸಂಸ್ಥೆಗಳಿಂದ ನಮ್ಮ ಮೇಲಾಗುವ ದೌರ್ಜನ್ಯಗಳ ವಿರುದ್ಧ ನಮಗೆ ಹಕ್ಕನ್ನು ಖಾತ್ರಿಪಡಿಸುತ್ತದೆ” ಎಂದರು.

Kannada Bar & Bench
kannada.barandbench.com