ಮಾಲೀಕರಿಗೆ ಅರಿವಿಲ್ಲದೆ ನೌಕರ ಜಿಲೆಟಿನ್ ಕಡ್ಡಿ ಮಾರಾಟ ಮಾಡಿದರೆ ಪರವಾನಗಿದಾರರನ್ನು ಹೊಣೆ ಮಾಡುವಂತಿಲ್ಲ: ಹೈಕೋರ್ಟ್‌

ಕಾರ್‌ನಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡ ಪ್ರಕರಣವೊಂದರಲ್ಲಿ ಮೃತವ್ಯಕ್ತಿಗೆ ಅಕ್ರಮವಾಗಿ ಸ್ಫೋಟಕ ಮಾರಾಟ ಮಾಡಿದ ಆರೋಪದಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿದೆ.
Karnataka HC and Justice K Natarajan
Karnataka HC and Justice K Natarajan

“ಸ್ಫೋಟಕಗಳ ಮಾರಾಟ ಪರವಾನಗಿ ಪಡೆದವರ ಬಳಿ ಕೆಲಸ ಮಾಡುವ ನೌಕರ ಮಾಲೀಕರ ಅರಿವಿಗೆ ಬಾರದಂತೆ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದರೆ ಅದಕ್ಕೆ ಪರವಾನಗಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಎಸ್‌ಎಲ್‌ಎನ್ ಕಂಪೆನಿಯ ಪಿ ಸುನೀಲ್ ಕುಮಾರ್ ಮತ್ತವರ ತಂದೆ ಎಂ ಪ್ರಕಾಶ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಕಾರ್‌ನಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡ ಪ್ರಕರಣವೊಂದರಲ್ಲಿ ಮೃತವ್ಯಕ್ತಿಗೆ ಅಕ್ರಮವಾಗಿ ಸ್ಫೋಟಕ ಮಾರಾಟ ಮಾಡಿದ ಆರೋಪದಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿದೆ.

“ಪ್ರಕರಣದಲ್ಲಿ ಅರ್ಜಿದಾರರ ಬಳಿ ಕೆಲಸ ಮಾಡುತ್ತಿದ್ದ ಹರೀಶ್ ಕುಮಾರ್ (3ನೇ ಆರೋಪಿ) ಎಂಬ ನೌಕರ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅರ್ಜಿದಾರರಿಬ್ಬರೂ ಮಳಿಗೆಯಲ್ಲಿರಲಿಲ್ಲ. ಮಾಲೀಕರು ಇಲ್ಲದ ಸಂದರ್ಭದಲ್ಲಿ ಅವರಿಗೆ ತಿಳಿಯದಂತೆ ಸ್ಫೋಟಕಗಳನ್ನು ಮಾರಾಟ ಮಾಡುತ್ತಿದ್ದ ವಿಚಾರವನ್ನು ಸ್ವತಃ 3ನೇ ಆರೋಪಿ ಒಪ್ಪಿಕೊಂಡಿದ್ದಾನೆ. ಅರ್ಜಿದಾರರ ಗಮನಕ್ಕೆ ಬಾರದೆಯೇ ಸ್ಫೋಟಕ ಮಾರಾಟವಾಗಿರುವಾಗ, ಅರ್ಜಿದಾರರು ಪರವಾನಗಿಯನ್ನು ಉಲ್ಲಂಘಿಸಿದ್ದಾರೆ ಎನ್ನುವುದನ್ನು ಒಪ್ಪಲಾಗದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಘಟನೆಗೆ ಕಾರಣವಾದ ಜಿಲೆಟಿನ್ ಕಡ್ಡಿಗಳನ್ನು ಅರ್ಜಿದಾರರ ಅಂಗಡಿಯಿಂದಲೇ ಖರೀದಿಸಲಾಗಿದ್ದರೂ, ಅದು ಅವರ ಗಮನಕ್ಕೆ ಬಂದಿಲ್ಲ. ಮಾಲೀಕರ ಪರವಾಗಿ ಯಾವುದೇ ರಸೀದಿಯನ್ನೂ ನೀಡಲಾಗಿಲ್ಲ. ಹೀಗಿರುವಾಗ, ಅರ್ಜಿದಾರರನ್ನು ಪ್ರಕರಣದಲ್ಲಿ ಸಿಲುಕಿಸಿರುವುದು ಸರಿಯಲ್ಲ. ಉದ್ಯೋಗಿ ಎಸಗುವ ಯಾವುದೇ ಅಪರಾಧ ಕೃತ್ಯಕ್ಕೆ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಉದ್ಯೋಗದಾತ ಅಥವಾ ಮಾಲೀಕರನ್ನು ಹೊಣೆಗಾರರನ್ನಾಗಿಸಲಾಗದು” ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧ ಸ್ಫೋಟಕ ವಸ್ತುಗಳ ಕಾಯಿದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಕಬ್ಬನ್‌ಪೇಟೆಯ ನಿವಾಸಿಗಳಾಗಿರುವ ಅರ್ಜಿದಾರರು ಕನಕಪುರ ತಾಲ್ಲೂಕಿನ ಪಡುವನಗೆರೆ ಗ್ರಾಮದಲ್ಲಿ ಎಸ್‌ಎಲ್‌ಎನ್ ಕಂಪೆನಿ ನಡೆಸುತ್ತಿದ್ದು, ಕ್ವಾರಿ ಗುತ್ತಿಗೆದಾರರಿಗೆ ಸ್ಫೋಟಕ ಮಾರಾಟ ಮಾಡಲು ಪರವಾನಗಿ ಪಡೆದಿದ್ದಾರೆ. ಸಾತನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿಂತಿದ್ದ ಕಾರೊಂದು ಸ್ಫೋಟಗೊಂಡು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿತ್ತು. ಈ ಸಂಬಂಧ 2021ರ ಆಗಸ್ಟ್‌ 16ರಂದು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ವಿಚಾರಣೆ ವೇಳೆ, ಕಾರ್‌ನಲ್ಲಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು, ಅದರಲ್ಲಿದ್ದ ಮಹೇಶ್ ಎಂಬ ವ್ಯಕ್ತಿ ಸಾವಿಗೀಡಾಗಿರುವುದು ಕಂಡುಬಂದಿತ್ತು. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ, ಅರ್ಜಿದಾರರು ಸ್ಫೋಟಕ ಮಾರಾಟ ಪರವಾನಗಿ ಪಡೆದಿರುವ ವಿಚಾರ ಹಾಗೂ ಮೃತ ಮಹೇಶ್ ಅರ್ಜಿದಾರರ ಮಳಿಗೆಯಿಂದ ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿದ್ದ ವಿಚಾರ ತಿಳಿದುಬಂದಿತ್ತು. ಇದರಿಂದ, ಪೊಲೀಸರು ಅರ್ಜಿದಾರರನ್ನು 4 ಹಾಗೂ 5ನೇ ಆರೋಪಿಗಳನ್ನಾಗಿಸಿ, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Related Stories

No stories found.
Kannada Bar & Bench
kannada.barandbench.com