[ರಹಸ್ಯ ಮಾಹಿತಿ ಸೋರಿಕೆ ] ಬಾಂಬೆ ಹೈಕೋರ್ಟ್‌ನಲ್ಲಿ ರಶ್ಮಿ ಶುಕ್ಲಾ ಸಲ್ಲಿಸಿದ ಮನವಿಗೆ ಮಹಾರಾಷ್ಟ್ರ ಸರ್ಕಾರ ವಿರೋಧ

“ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು ಎಫ್ಐಆರ್ ನಲ್ಲಿ ತಮ್ಮ ಹೆಸರಿರುವ ಬಗ್ಗೆ ನೀಡಿದ ತಪ್ಪೊಪ್ಪಿಗೆಯಂತೆ ರಶ್ಮಿ ಅವರ ವಾದ ತೋರುತ್ತಿದೆ” ಎಂದು ಮುಂಬಯಿ ಪೋಲಿಸ್ ಪರ ಹಾಜರಾದ ವಕೀಲ ಡೇರಿಯಸ್ ಖಂಬಾಟಾ ತಿಳಿಸಿದ್ದಾರೆ.
Rashmi Shukla, Bombay High Court
Rashmi Shukla, Bombay High Court

ಪೊಲೀಸ್‌ ಅಧಿಕಾರಿಗಳ ನಿಯೋಜನೆ ಕುರಿತ ರಹಸ್ಯ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕೆಂದು ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿಗೆ ಮಹಾರಾಷ್ಟ್ರ ಸರ್ಕಾರ ಶನಿವಾರ ವಿರೋಧ ವ್ಯಕ್ತಪಡಿಸಿದೆ.

ಮುಂಬೈ ಪೋಲಿಸ್ ಪರ ಹಾಜರಾದ ಹಿರಿಯ ವಕೀಲ ಡೇರಿಯಸ್ ಖಂಬಾಟಾ, ಎಫ್ಐಆರ್ ಮಾಹಿತಿ ಕಳ್ಳತನ ಮತ್ತು ಸೋರಿಕೆಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ. ಆಕ್ಷೇಪಾರ್ಹ ದಾಖಲೆಗಳು ಗೌಪ್ಯವಾದವು ಎಂದು ವಾದಿಸಿದ ಅವರು ಅಂತಹ ದಾಖಲೆಗಳು ಸೋರಿಕೆಯಾದ್ದರಿಂದ ಅಂತಿಮವಾಗಿ ಅವು ಸಾರ್ವಜನಿಕ ಡೊಮೇನ್‌ನಲ್ಲಿ ಲಭಿಸಿದ್ದು ಇದೊಂದು ತನಿಖೆ ನಡೆಸಬೇಕಾದ ಗಂಭೀರ ಅಪರಾಧವಾಗಿದೆ ಎಂದರು. “ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು ಎಫ್ಐಆರ್ ನಲ್ಲಿ ತಮ್ಮ ಹೆಸರಿರುವ ಬಗ್ಗೆ ನೀಡಿದ ತಪ್ಪೊಪ್ಪಿಗೆಯಂತೆ ರಶ್ಮಿ ಅವರ ವಾದ ತೋರುತ್ತಿದೆ” ಎಂದು ಕೂಡ ಅವರು ಈ ಸಂದರ್ಭದಲ್ಲಿ ನ್ಯಾಯಾಲಯದ ಗಮನ ಸೆಳೆದರು.

ಇದೇ ವೇಳೆ ವಾದ ಮಂಡಿಸಿದ ರಶ್ಮಿ ಪರ ವಕೀಲ, ಹಿರಿಯ ನ್ಯಾಯವಾದಿ ಮಹೇಶ್‌ ಜೇಠ್ಮಲಾನಿ ರಾಜ್ಯದ ಮುಖ್ಯ ಕಾರ್ಯದರ್ಶಿ ಸೀತಾರಾಂ ಕುಂಟೆ ಅವರನ್ನು ರಕ್ಷಿಸಲು ಮಹಾರಾಷ್ಟ್ರ ಸರ್ಕಾರ ಅಕ್ರಮ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ರಶ್ಮಿ ಅವರನ್ನು ಬಲಿಪಶುವನ್ನಾಗಿ ಮಾಡಲು ಎಫ್ಐಆರ್ ದಾಖಲಿಸಿದೆ ಎಂದು ವಾದಿಸಿದರು. ತನಿಖೆಗಾಗಿ ರಶ್ಮಿ ಅವರನ್ನು ಕರೆಸುವ ಈ ಪ್ರಕ್ರಿಯೆ ನ್ಯಾಯ ಮತ್ತು ಸತ್ಯಾನ್ಚೇಷಿಗಳ ವಿರುದ್ಧ ಸರ್ಕಾರ ಹೊಂದಿರುವ ದುರುದ್ದೇಶವನ್ನು ಸೂಚಿಸುತ್ತದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗೆ ಅವಕಾಶ ಕೊಡದೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ಪೊಲೀಸರ ವರ್ಗಾವಣೆ ಮತ್ತು ನಿಯೋಜನೆಯಲ್ಲಿ ನೈಜ ಅಪರಾಧಿಗಳನ್ನು ರಕ್ಷಿಸಲು ಮಾತ್ರ ಇದೆ ಎಂದರು.

Also Read
ಸರ್ಕಾರವೇಕೆ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುತ್ತಿಲ್ಲ? ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ಪ್ರಶ್ನೆ

ಈ ಆರೋಪಗಳು ಕ್ಷುಲ್ಲಕ ಎಂದ ಖಂಬಾಟಾ ಎಫ್‌ಐಆರ್‌ ರಾಜ್ಯದ ಪೋಲಿಸ್ ವರ್ಗಾವಣೆ ಮತ್ತು ನಿಯೋಜನೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿಲ್ಲ ಅಥವಾ ರಶ್ಮಿ ಅವರ ವರದಿಗೆ ಪ್ರತಿಕ್ರಿಯೆಯಾಗಿ ಕುಂಟೆ ಅವರು ನೀಡಿದ ಹೇಳಿಕೆಗೂ ಸಂಬಂಧಿಸಿಲ್ಲ ಎಂದು ವಾದಿಸಿದರು.

ಎಫ್‌ಐಆರ್‌ ಅತ್ಯಂತ ಗೌಪ್ಯವಾದ ದಾಖಲೆಗಳ ಸೋರಿಕೆಯ ವಿರುದ್ಧವಾಗಿತ್ತು, "ಇದು ಪೋಲೀಸ್ ನಿಯೋಜನೆಗಳಲ್ಲಿ ನಡೆಯುವ ಭ್ರಷ್ಟಾಚಾರ ಆರೋಪದಷ್ಟೇ ಮಹತ್ವದ ಅಪರಾಧವಾಗಿದೆ" ಎಂದು ಖಂಬಾಟಾ ಒತ್ತಿ ಹೇಳಿದರು. ಅಲ್ಲದೆ ಎಫ್‌ಐಆರ್‌ನಲ್ಲಿ ರಶ್ಮಿ ಅವರ ಹೆಸರು ಕೂಡ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡುವ ಮುನ್ನವೇ ಅಕ್ರಮಗಳ ಬಗ್ಗೆ ಸುದೀರ್ಘ ವಾದ ಮಂಡಿಸಲಾಗಿದೆ ಎಂದರು.

ನ್ಯಾಯಮೂರ್ತಿ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್ ಅವರಿದ್ದ ಪೀಠ ಪ್ರತಿಕ್ರಿಯೆ ನೀಡುವ ಸಲುವಾಗಿ ಪ್ರತಿವಾದಿಗಳಿಗೆ ಔಪಚಾರಿಕವಾಗಿ ನೋಟಿಸ್‌ ನೀಡಿ ಪ್ರಕರಣವನ್ನು ಸೆಪ್ಟೆಂಬರ್ 13ಕ್ಕೆ ಮುಂದೂಡಿತು. ರಶ್ಮಿ ಅವರನ್ನು ಬಂಧಿಸುವುದು ಸೇರಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ. ಭರವಸೆ ನೀಡಿತು.

Related Stories

No stories found.
Kannada Bar & Bench
kannada.barandbench.com