ಪತಿ ನಿರುದ್ಯೋಗಿಯಾಗಿದ್ದು, ಪತ್ನಿ ಉದ್ಯೋಗದಲ್ಲಿರುವಾಗ ಜೀವನಾಂಶ ಹೆಚ್ಚಿಸಲಾಗದು: ಹೈಕೋರ್ಟ್‌

ಪತ್ನಿ ಮಾಸಿಕ ₹1.5 ಲಕ್ಷ ವೇತನ ಪಡೆಯುತ್ತಿದ್ದಾರೆ. ಇದರಿಂದ ಪತ್ನಿಗೆ ಮಾಸಿಕ ₹9,000 ಜೀವನಾಂಶ ನೀಡಬೇಕು ಎಂದು ತನಗೆ ನಿರ್ದೇಶಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂಬ ಪತಿ ಮನವಿ ಪುರಸ್ಕರಿಸಲು ಪೀಠ ನಿರಾಕರಿಸಿದೆ.
Divorce
Divorce
Published on

ಪತಿ ನಿರುದ್ಯೋಗಿಯಾಗಿರುವ ಸಂದರ್ಭದಲ್ಲಿ ದುಡಿಯುತ್ತಿರುವ ಪತ್ನಿಗೆ ಜೀವನಾಂಶ ಮೊತ್ತವನ್ನು ಹೆಚ್ಚಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ವರದಕ್ಷಿಣೆ ಕಿರುಕುಳ ಹಿನ್ನೆಲೆಯಲ್ಲಿ ಪತ್ನಿಗೆ ಮಾಸಿಕ ₹9,000 ಜೀವನಾಂಶ ನೀಡಲು ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಹಾಗೂ ಜೀವನಾಂಶ ಮೊತ್ತ ಹೆಚ್ಚಿಸುವಂತೆ ಕೋರಿ ಪತ್ನಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿಗಳನ್ನು ನ್ಯಾಯಮೂರ್ತಿ ವಿ ಶ್ರೀಷಾನಂದ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.

ಪತ್ನಿ ಮಾಸಿಕ ₹1.5 ಲಕ್ಷ ವೇತನ ಪಡೆಯುತ್ತಿದ್ದಾರೆ. ಇದರಿಂದ ಪತ್ನಿಗೆ ಮಾಸಿಕ ₹9,000 ಜೀವನಾಂಶ ನೀಡಬೇಕು ಎಂದು ತನಗೆ ನಿರ್ದೇಶಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂಬ ಪತಿಯ ಮನವಿ ಪುರಸ್ಕರಿಸಲು ಸಹ ಇದೇ ವೇಳೆ ಪೀಠ ನಿರಾಕರಿಸಿದೆ.

ಪತಿ ಶಾಲೆಯೊಂದನ್ನು ನಡೆಸುತ್ತಿದ್ದು, ಸದ್ಯ ಶಾಲೆ ಮುಚ್ಚಲಾಗಿದೆ. ಇದರಿಂದ ಸದ್ಯ ಕೆಲಸ ಕಳೆದುಕೊಂಡಿರುವ ಪತಿ ನಿರುದ್ಯೋಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯ ನಿಗದಿಪಡಿಸಿರುವ 9 ಸಾವಿರ ರೂಪಾಯಿ ಜೀವನಾಂಶ ಮೊತ್ತ ಹೆಚ್ಚಳ ಮಾಡಬೇಕು ಎಂಬ ಪತ್ನಿಯ ಮನವಿ ಪುರಸ್ಕರಿಸಲಾಗದು. ಪತಿಗೆ ಹಂಚಿಕೆಯಾಗಬೇಕಿರುವ ಪೂರ್ವಜರ ಆಸ್ತಿ ಇನ್ನೂ ಅಂತಿಮವಾಗಿಲ್ಲ. ಪತ್ನಿ ಉತ್ತಮ ಪ್ರಮಾಣದಲ್ಲಿ ವೇತನ ಪಡೆಯುತ್ತಿರುವಾಗ ಪತಿಗೆ ಪೂರ್ವಿಕರ ಆಸ್ತಿ ಇದೆ ಎಂಬುದು ಜೀವನಾಂಶ ಮೊತ್ತ ಹೆಚ್ಚಳ ಮಾಡಬೇಕು ಎಂಬುದಕ್ಕೆ ಆಧಾರವಾಗುವುದಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪತಿಯ ಪಾಲಿಗೆ ಒಂದು ಎಕರೆ ಜಮೀನುನಿದೆ. ಅದನ್ನು ಎರಡು ಬಾರಿ ಅಡವಿಟ್ಟು ₹4.5 ಲಕ್ಷ ಸಾಲ ಪಡೆದಿದ್ದಾರೆ. ಸಾಲ ಪಡೆದು ಜೀವನಾಂಶ ಪಾವತಿಸುತ್ತಿಲ್ಲ ಎಂದಾದರೆ, ಪತ್ನಿಗೆ ಜೀವನಾಂಶ ಪಾವತಿಸಲು ಪತಿ ಸಿದ್ಧರಿಲ್ಲ ಎಂಬುದನ್ನು ಊಹಿಸಬಹುದಾಗಿದೆ. ಹೀಗಾಗಿ, ಪತ್ನಿಗೆ ಜೀವನಾಂಶ ಪಾವತಿಸಲು ಅಧೀನ ನ್ಯಾಯಾಲಯ ಹೊರಡಿಸಿದ ಆದೇಶ ರದ್ದುಪಡಿಸಲಾಗದು. ದಾಖಲೆಗಳ ಪ್ರಕಾರ ಪತ್ನಿ ದುಡಿಯುತ್ತಿದ್ದು, ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ವ್ಯಾಜ್ಯ ವೆಚ್ಚಕ್ಕಾಗಿ ಹಣ ಪಾವತಿಸಲು ಸಹ ಪತ್ನಿ ಸಶಕ್ತರಾಗಿದ್ದಾರೆ. ದಂಪತಿಯ ಮದುವೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲದ ಸಂದರ್ಭದಲ್ಲಿ ಜೀವನಾಂಶ ಹೆಚ್ಚಳ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ ಪೀಠ, ದಂಪತಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: ಮಂಜುನಾಥ ಮತ್ತು ಮಧುಮತಿ (ಹೆಸರು ಬದಲಿಸಲಾಗಿದೆ) 2009ರಲ್ಲಿ ವಿವಾಹವಾಗಿದ್ದರು. ಆದರೆ, ಮದುವೆ ನೆರವೇರಿದ ನಂತರದ ನಾಲ್ಕನೇ ದಿನವೇ ನನ್ನ ಬ್ಯಾಂಕ್‌ ಖಾತೆಯಲ್ಲಿ ಹಣ ಎಷ್ಟಿದೆ ಎಂದು ನೋಡಲು ಪತಿ ಪ್ರಯತ್ನಿಸಿದ್ದಾರೆ. ಓಮ್ನಿ ಕಾರ್‌ ಕೊಡಿಸುವುದು ಸೇರಿದಂತೆ ಹೆಚ್ಚುವರಿ ವರದಕ್ಷಿಣೆಗೆ ಪತಿ ಪದೇ ಪದೆ ಬೇಡಿಕೆ ಇಡುತ್ತಾ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪತ್ನಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಪತ್ನಿಗೆ ಯಾವುದೇ ರೀತಿಯ ಕೌಟುಂಬಿಕ ಹಿಂಸೆ ನೀಡದಂತೆ ಪತಿಗೆ ಆದೇಶಿಸಿತ್ತು. ಮತ್ತೊಂದೆಡೆ ಪತ್ನಿ ಜೀವನ ನಿರ್ವಹಣೆಗೆ ಎಂದು ಪ್ರತಿ ತಿಂಗಳು ₹4,000  ಜೀವನಾಂಶ ಮತ್ತು ಮನೆ ಬಾಡಿಗೆಗಾಗಿ ₹5 ಸಾವಿರ ನೀಡಬೇಕು. ವರದಕ್ಷಿಣೆ ಕಿರುಕುಳದಿಂದ ಮಾನಸಿಕವಾಗಿ ನೊಂದ ಪತ್ನಿಗೆ ₹40,000 ಪರಿಹಾರ ಪಾವತಿಸಬೇಕು. ಅರ್ಜಿಯಲ್ಲಿ ಕೋರಿದ ಮತ್ಯಾವುದೇ ಪರಿಹಾರಕ್ಕೆ ಪತ್ನಿ ಅರ್ಹರಿರುವುದಿಲ್ಲ ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು 2015ರ ಜೂನ್‌ 10ರಂದು  ಆದೇಶಿಸಿತ್ತು.

ಈ ಆದೇಶ ರದ್ದು ಕೋರಿ ಪತಿ ಮತ್ತು ಜೀವನಾಂಶ ಮೊತ್ತ ಹೆಚ್ಚಳ ಮಾಡುವಂತೆ ಪತ್ನಿ ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್‌ ಮೇಲ್ಮನವಿಗಳನ್ನು ವಜಾಗೊಳಿಸಿ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ 2016ರ ಆಗಸ್ಟ್‌ 11ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಮತ್ತು ಪತ್ನಿ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

Attachment
PDF
L Ravi & Hema P
Preview
Kannada Bar & Bench
kannada.barandbench.com