ಸಂಪುಟ ಸಭೆಗಳ ಭಾಗವಾಗಿರುವ ಟಿಪ್ಪಣಿಗಳನ್ನು ನ್ಯಾಯಾಲಯಗಳು ಪರಿಶೀಲಿಸಬಹುದೇ ಮತ್ತು ಅಂತಹ ಸಂಪುಟ ಟಿಪ್ಪಣಿಗಳಿಗೆ ಸಂಸತ್ತಿನ ಕಲಾಪಗಳಿಗೆ ಇರುವ ವಿನಾಯಿತಿಯ ರಕ್ಷಣೆ ಇದೆಯೇ ಎಂದು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯವನ್ನು (ಇ ಡಿ) ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎಸ್ವಿ ರಾಜು ಅವರಿಗೆ ನ್ಯಾಯಾಲಯ ಈ ಪ್ರಶ್ನೆ ಕೇಳಿದೆ.
“…ಸಂಪುಟ ಟಿಪ್ಪಣಿಗಳು ಎಷ್ಟರಮಟ್ಟಿಗೆ ವಿಚಾರಣೆಗೆ ಅರ್ಹವಾಗಿವೆ. ನನಗೆ ತಿಳಿದಿರುವಂತೆ, ಸಂಪುಟ ಟಿಪ್ಪಣಿಗಳನ್ನು ಪರಿಶೀಲಿಸದಂತೆ ನಿರ್ದಿಷ್ಟವಾದ ಸಾಂವಿಧಾನಿಕ ಪೀಠದ ತೀರ್ಪುಗಳಿವೆ. ಇದು ದೆಹಲಿಗೆ ಅನ್ವಯವಾಗುತ್ತದೆಯೇ ಎಂಬುದು ತಿಳಿದಿಲ್ಲ. ಏಕೆಂದರೆ ಇದು ಕೇಂದ್ರಾಡಳಿತ ಪ್ರದೇಶ. ಅವರು ಅದನ್ನು ಪ್ರಸ್ತಾಪಿಸದೆ (ಸಂಸತ್ತಿನ ವಿಷಯ) ಇದ್ದರೂ ಸಂಸತ್ತಿನಲ್ಲಿ ಹೇಳಿದ್ದರ ಬಗ್ಗೆ ನ್ಯಾಯಾಂಗ ಮಧ್ಯಪ್ರವೇಶಿಸುವುದಿಲ್ಲ. ಸದ್ಯ ಆ ವಿಚಾರವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ” ಎಂದು ನ್ಯಾಯಾಲಯ ನುಡಿದಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ಅಕ್ರಮ ಹಣ ವರ್ಗಾವಣೆಯ ಫಲಾನುಭವಿ ಎಂದು ಆರೋಪಿಸಲಾಗಿರುವುದರಿಂದ ರಾಜಕೀಯ ಪಕ್ಷ ಅಥವಾ ಅದರ ಪದಾಧಿಕಾರಿಗಳನ್ನು ಏಕೆ ಪ್ರಕರಣಕ್ಕೆ ಆರೋಪಿಯನ್ನಾಗಿ ಮಾಡಲಾಗಿಲ್ಲ ಎಂದು ಕೂಡ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ಪ್ರಶ್ನಿಸಿತು. ಗುರುವಾರವೂ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.
ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಸಿಸೋಡಿಯಾ ಅವರು ಸಿಬಿಐ ಮತ್ತು ಇ ಡಿ ದಾಖಲಿಸಿರುವ ಪ್ರಕರಣಗಳಲ್ಲಿ ತನಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.