
“ವಯಸ್ಸಾದ ಪೋಷಕರು ಮಗನಿಂದ ಪ್ರತ್ಯೇಕಾಗಿವಾಗಿದ್ದು ಜೀವಿಸುಸುತ್ತಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಅಪಘಾತದಿಂದ ಮೃತರಾದ ಮಗನ ಅವಲಂಬಿತರಲ್ಲ” ಎಂದು ಹೇಳಲಾಗದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಮಹತ್ವದ ಆದೇಶ ಮಾಡಿದೆ.
ಅಪಘಾತದಲ್ಲಿ ಮೃತಪಟ್ಟ ಮಗನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪೋಷಕರಿಗೆ ಪರಿಹಾರ ಘೋಷಣೆ ಮಾಡಿದ್ದ ಕೋಲಾರದ ವಾಹನಗಳ ಅಪಘಾತ ನ್ಯಾಯಾಧಿಕರಣ ಆದೇಶವನ್ನು ಪ್ರಶ್ನಿಸಿ ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ವಿಮಾ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿ ವಜಾ ಮತ್ತು ಪರಿಹಾರ ಹೆಚ್ಚಳ ಕೋರಿ ಮೃತರ ವಾರಸುದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ಭಾಗಶಃ ಪುರಸ್ಕರಿಸಿದೆ.
“ಹಲವು ಸಂದರ್ಭಗಳಲ್ಲಿ ಮಕ್ಕಳು ಉದ್ಯೋಗದಲ್ಲಿದ್ದ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಪೋಷಕರು ಮಕ್ಕಳ ಅವಲಂಬಿತರಾಗಿ ಗ್ರಾಮಗಳಲ್ಲಿ ವಾಸಿಸುತ್ತಿರುತ್ತಾರೆ. ಹೀಗಾಗಿ, ಮೃತರ ಪೋಷಕರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಅವಲಂಬಿತರಲ್ಲ ಎಂದು ಹೇಳಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ. ಅಲ್ಲದೇ, ಪರಿಹಾರದ ಮೊತ್ತವನ್ನು 23,04,892 ರೂಪಾಯಿಗೆ ಹೆಚ್ಚಿಸಿದ್ದು, ಅದರಲ್ಲಿ ಶೇ.50ರಷ್ಟು ಪತ್ನಿಗೆ, ಶೇ.30 ರಷ್ಟು ಮಕ್ಕಳಿಗೆ ಮತ್ತು ಶೇ.20 ರಷ್ಟು ಪೋಷಕರಿಗೆ ನೀಡಬೇಕು” ಎಂದು ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿರುವ ಪೀಠವು "ಮೃತರ ಪುತ್ರನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ದೊರೆತಿದೆ ಎಂದ ಮಾತ್ರಕ್ಕೆ ಅವರು ತಂದೆಯ ವಿಮೆ, ಪಿಂಚಣಿ ಮತ್ತು ಗ್ರಾಚ್ಯುಟಿ ಪಡೆಯಬಾರದು ಎಂದೇನಿಲ್ಲ. ಹೀಗಾಗಿ, ಅಪಘಾತದಿಂದ ಆದ ನಷ್ಟಕ್ಕೆ ಪರಿಹಾರ ಮೊತ್ತ ಕಡಿತ ಮಾಡುವುದಕ್ಕೆ ಸಾಧ್ಯವಿಲ್ಲ” ಎಂದು ಪೀಠ ಹೇಳಿದೆ.
ವಿಮಾ ಕಂಪೆನಿಯ ಪರ ವಕೀಲ ಒ ಮಹೇಶ್ ಅವರು “ಮೃತ ನಾರಾಯಣಸ್ವಾಮಿ ಅವರು ಪ್ರಯಾಣಿಸುತ್ತಿದ್ದ ವಾಹನ ಅಪಘಾತ ತಡೆಯಲು ರಸ್ತೆ ಬದಿಯ ಮರಕ್ಕೆ ಸ್ವಲ್ಪ ತಾಗಿದೆ. ಇದರಿಂದ ಅಪಘಾತ ನಡೆದಿದ್ದು ಘಟನೆ ಸಂಭವಿಸಿದೆ. ಮೃತರ ಪೋಷಕರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರನ್ನು ಅವಲಂಬಿತರು ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಮೃತರ ಮಗನಿಗೆ ಅನುಕಂಪದ ಆಧಾರದಲ್ಲಿ ಸರ್ಕಾರದ ಉದ್ಯೋಗ ದೊರೆತಿದೆ. ಆದ್ದರಿಂದ, ಪ್ರಕರಣದಲ್ಲಿ ಅವರ ಅವಲಂಬಿತರಿಗೆ ನಷ್ಟವಾಗಿದೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಹೀಗಾಗಿ, ಯಾವುದೇ ಪರಿಹಾರ ನೀಡಬೇಕಾದ ಅಗತ್ಯವಿಲ್ಲ” ಎಂದು ವಾದಿಸಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಮೃತರ ಪರ ವಕೀಲೆ ಸ್ವಾತಿ ಜಿ.ಹೆಗಡೆ ಅವರು “ಮೃತರ ಪೋಷಕರು ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ, ಅವರು ಮಗನನ್ನೇ ಅವಲಂಬಿಸಿದ್ದರು. ಹೀಗಾಗಿ ಪರಿಹಾರ ನೀಡಬೇಕು” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಮೃತ ನಾರಾಯಣಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದು, ಮಾಸಿಕ 18 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದರು. ಈ ನಡುವೆ 2009ರ ಡಿಸೆಂಬರ್ 24ರಂದು ತಮಿಳುನಾಡಿನ ಗೂಡಲೂರು ಮುಖ್ಯರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಮೃತರಾಗಿದ್ದರು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ 2014ರ ನವೆಂಬರ್ನಲ್ಲಿ ಕುಟುಂಬ ಸದಸ್ಯರಿಗೆ 18,93,308 ರೂಪಾಯಿಯನ್ನು ಶೇ.6ರ ಬಡ್ಡಿಯಂತೆ ಪಾವತಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪೆನಿ ಮತ್ತು ಮೃತ ನಾರಾಯಣಸ್ವಾಮಿ ಕುಟುಂಬಸ್ಥರು ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಅಪಘಾತಕ್ಕೆ ಕಾರಣವಾದ ವಾಹನದ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 279 (ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆ), 337 (ಮತ್ತೊಬ್ಬರ ಜೀವಕ್ಕೆ ಹಾನಿ), ಹಾಗೂ 304ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮತ್ತು ಮೋಟಾರು ವಾಹನ ಕಾಯಿದೆ ಸೆಕ್ಷನ್ 181 (ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು.