ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಹಗರಣ: ಬಿಜೆಪಿ ಮುಖಂಡ ವೀರಯ್ಯಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಲಯ

ಅರ್ಜಿದಾರರು 2 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು, ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
Ex-BJP MLC Veeraiah
Ex-BJP MLC Veeraiah
Published on

ಕರ್ನಾಟಕ ಸರ್ಕಾರದ ಉದ್ದಿಮೆಯಾದ ಡಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್‌) ನಡೆದಿದೆ ಎನ್ನಲಾದ ₹47.50 ಕೋಟಿ ಅಕ್ರಮ ಆರೋಪದ ಪ್ರಕರಣದಲ್ಲಿ ನಿಗಮದ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಡಿ ಎಸ್‌ ವೀರಯ್ಯಗೆ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ವೀರಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಮ್ಯಾಜಿಸ್ಟ್ರೇಟ್‌ ಕೆ ಎನ್ ಶಿವಕುಮಾರ್ ಪುರಸ್ಕರಿಸಿದರು.

ಅರ್ಜಿದಾರರು 2 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು, ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು ಎಂಬುದೂ ಸೇರಿದಂತೆ ಇತರೆ ಷರತ್ತುಗಳನ್ನು ವಿಧಿಸಲಾಗಿದೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವೀರಯ್ಯ ಅವರನ್ನು ಜುಲೈ 12ರಂದು ಬಂಧಿಸಿ ಜುಲೈ 13ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಎರಡು ದಿನಗಳ ಪೊಲೀಸ್ ಕಸ್ಟಡಿ ನಂತರ ಜುಲೈ 16ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅರ್ಜಿದಾರರ ಪರ ಹಿರಿಯ ವಕೀಲ ಎಂ ಎಸ್‌ ಶ್ಯಾಮಸುಂದರ್‌ ವಾದಿಸಿದ್ದರು. ವಕೀಲೆ ಡಾ.ಪಿ ಎಲ್‌ ವಂದನಾ ವಕಲಾತ್ತು ಹಾಕಿದ್ದರು.

ಪ್ರಕರಣದ  ಹಿನ್ನೆಲೆ: 2021-23ರ ಅವಧಿಯಲ್ಲಿ ಡಿಡಿಯುಟಿಟಿಎಲ್‌ ಹಣಕಾಸು ದುರ್ಬಳಕೆ ಹಗರಣ ನಡೆದಿದ್ದು, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಉಪನಿರ್ದೇಶಕ ಎಸ್‌ ಶಂಕರಪ್ಪ ಅವರನ್ನು ಮೊದಲಿಗೆ ಬಂಧಿಸಲಾಗಿತ್ತು. ಶಂಕರಪ್ಪ ಅವರು ಆಗ ಡಿಡಿಯುಟಿಟಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಇದರ ಬೆನ್ನಿಗೇ ಜುಲೈ 12ರಂದು ಡಿಡಿಯುಟಿಟಿಎಲ್‌ನ ಮಾಜಿ ಅಧ್ಯಕ್ಷ ವೀರಯ್ಯ ಅವರನ್ನು ಸಿಐಡಿ ಬಂಧಿಸಿತ್ತು. ನಿಯಮಿತದ ನಿಯಮಾವಳಿಗಳಲ್ಲಿ ತುಂಡು ಗುತ್ತಿಗೆಗೆ ಅನುಮತಿ ಇಲ್ಲದೆ ಹೋದರೂ ₹2 ಕೋಟಿ ಮೌಲ್ಯದ ಕೆಲಸಗಳನ್ನು ಟೆಂಡರ್‌ ಕರೆಯದೇ ಗುತ್ತಿಗೆ ನೀಡಬಹುದು ಎನ್ನುವ ರೀತಿಯಲ್ಲಿ ನಿಯಮಿತದ ದಾಖಲೆಗಳನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೂ ಪೂರ್ಣ ಹಣ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿತ್ತು.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆ ಅಡಿ ಸರ್ಕಾರದ ಯಾವುದೇ ನಿಗಮವು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಗುತ್ತಿಗೆ ಕೆಲಸವನ್ನು ಟೆಂಡರ್‌ ಮೂಲಕ ನಡೆಸಬೇಕು ಎಂದಿದೆ. ಇದಕ್ಕೆ ವಿರುದ್ಧವಾಗಿ ಗುತ್ತಿಗೆ ನೀಡಲಾಗಿದೆ ಎಂಬುದು ಆರೋಪವಾಗಿದೆ.

Also Read
ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಹಗರಣ: ಮಾಜಿ ಎಂಎಲ್‌ಸಿ ವೀರಯ್ಯ ನ್ಯಾಯಾಂಗ ಬಂಧನಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯು 765 ಕಡತಗಳನ್ನು ಜಪ್ತಿ ಮಾಡಿದ್ದು, 380 ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದ 450 ಪುಟಗಳ ದತ್ತಾಂಶವನ್ನು ವಿಶ್ಲೇಷಿಸಿದೆ ಎನ್ನಲಾಗಿದೆ. ವೀರಯ್ಯ ಅವರು 2008ರಿಂದ 2018ರವರೆಗೆ ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದರು.

ಡಿಡಿಯುಟಿಟಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಸಿ ಎನ್‌ ಶಿವಪ್ರಕಾಶ್‌ ಅವರು ಕಡತಗಳನ್ನು ಪರಿಶೀಲಿಸಿದಾಗ ಹಗರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಠಾಣೆಗೆ ದೂರು ನೀಡಿದ್ದರು. ಇದರ ಭಾಗವಾಗಿ ಐಪಿಸಿ ಸೆಕ್ಷನ್‌ಗಳಾದ 120ಬಿ (ಕ್ರಿಮಿನಲ್‌ ಪಿತೂರಿ), 409 (ಸಾರ್ವಜನಿಕ ಅಧಿಕಾರಿಯಿಂದ ನಂಬಿಕೆ ದ್ರೋಹ), 420 (ವಂಚನೆ), 465 (forgery) ಮತ್ತು 468 (ವಂಚಿಸುವ ದೃಷ್ಟಿಯಿಂದ ನಕಲಿ ಕೃತ್ಯ) ಅಡಿ ಪ್ರಕರಣ ದಾಖಲಾಗಿತ್ತು. ಆನಂತರ ಪ್ರಕರಣವನ್ನು ಸರ್ಕಾರವು ಸಿಐಡಿಗೆ ವರ್ಗಾಯಿಸಿತ್ತು. 

Kannada Bar & Bench
kannada.barandbench.com