ಅನುಚಿತ ಘಟನೆ: ವಿಡಿಯೊ ಕಾನ್ಫರೆನ್ಸ್‌, ಲೈವ್‌ ಸ್ಟ್ರೀಮಿಂಗ್‌ ತಾತ್ಕಾಲಿಕವಾಗಿ ಅಮಾನತು ಮಾಡಿದ ಕರ್ನಾಟಕ ಹೈಕೋರ್ಟ್‌

“ಸೈಬರ್‌ ಭದ್ರತಾ ಕಾರಣಗಳಿಗಾಗಿ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿನ ಎಲ್ಲಾ ಕಡೆ ವಿಡಿಯೊ ಕಾನ್ಫರೆನ್ಸ್‌ ಸೇವೆಯನ್ನು ಸದ್ಯಕ್ಕೆ ಅಮಾನತು ಮಾಡಲಾಗಿದೆ” ಎಂದು ತಿಳಿಸಿರುವ ರಿಜಿಸ್ಟ್ರಾರ್‌ ಜನರಲ್.‌
Karnataka HC and Video conference
Karnataka HC and Video conference

ನಿನ್ನೆ ಕರ್ನಾಟಕ ಹೈಕೋರ್ಟ್‌ನ ಕೆಲವು ಕೋರ್ಟ್‌ಗಳಲ್ಲಿನ ವಿಡಿಯೊ ಕಾನ್ಫರೆನ್ಸ್‌ ವೇಳೆ ಅನುಚಿತ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಲೈವ್‌ ಸ್ಟ್ರೀಮಿಂಗ್‌ ಮತ್ತು ವಿಡಿಯೊ ಕಾನ್ಫರೆನ್ಸ್‌ ಅನ್ನು ಹೈಕೋರ್ಟ್‌ ಇಂದು ನಿರ್ಬಂಧಿಸಿದೆ.

ಈ ಸಂಬಂಧ ಮುಕ್ತ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು “ನಾವು ಎಲ್ಲಾ ಲೈವ್‌ ಸ್ಟ್ರೀಮಿಂಗ್‌ಗಳನ್ನು ನಿರ್ಬಂಧಿಸುತ್ತಿದ್ದೇವೆ. ವಿಡಿಯೊ ಕಾನ್ಫರೆನ್ಸ್‌ಗೂ ಅವಕಾಶ ಇರುವುದಿಲ್ಲ. ದುರದೃಷ್ಟವಶಾತ್‌ ತಂತ್ರಜ್ಞಾನ ದುರ್ಬಳಕೆ ಅಥವಾ ಕೆಲವರಿಂದ ಅನುಚಿತ ವರ್ತನೆ ನಡೆದಿದೆ. ಇದು ಅನಿರ್ಬಂಧಿತ ಪರಿಸ್ಥಿತಿಯಾಗಿದೆ. ಇದೆಲ್ಲದರ ನಡುವೆ ಕರ್ನಾಟಕ ಹೈಕೋರ್ಟ್‌ ಸಾರ್ವಜನಿಕರ ಹಿತದೃಷ್ಟಿಯಿಂದ ವಿಸ್ತೃತ ನೆಲೆಯಲ್ಲಿ ತಂತ್ರಜ್ಞಾನ ಬಳಕೆ ಮಾಡುವುದರ ಪರವಾಗಿ ಕರ್ನಾಟಕ ಹೈಕೋರ್ಟ್‌ ಇರಲಿದೆ. ಇದೊಂದು ಅನಿರ್ಬಂಧಿತ ಪರಿಸ್ಥಿತಿಯಾಗಿದ್ದು, ನಮಗೆ ಸಹಕರಿಸಬೇಕು. ಈ ಸಂಬಂಧ ಕಂಪ್ಯೂಟರ್‌ ತಂಡ ಅಥವಾ ರಿಜಿಸ್ಟ್ರಿಗೆ ದೂರು ಕೊಂಡೊಯ್ಯಬೇಡಿ.. ವ್ಯವಸ್ಥೆಯ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಮಾಧ್ಯಮದವರಿಗೆ ವಿಚಾರ ತಿಳಿಸಿ, ನಮಗೆ ಸಹಕರಿಸಿ” ಎಂದು ಕೋರಿದರು.

Also Read
[ಲೈವ್‌ ಸ್ಟ್ರೀಮಿಂಗ್‌] ಅಧೀನ ನ್ಯಾಯಾಲಯಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಆನಂತರ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಕೆ ಎಸ್‌ ಭರತ್‌ ಕುಮಾರ್‌ ಅವರು “ಸೈಬರ್‌ ಭದ್ರತಾ ಕಾರಣಗಳಿಗಾಗಿ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿನ ಎಲ್ಲಾ ಕಡೆ ವಿಡಿಯೊ ಕಾನ್ಫರೆನ್ಸ್‌ ಸೇವೆಯನ್ನು ಸದ್ಯಕ್ಕೆ ಅಮಾನತು ಮಾಡಲಾಗಿದೆ” ಎಂದು ತಿಳಿಸಿದರು.

Kannada Bar & Bench
kannada.barandbench.com