
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಜಾರಿ ನಿರ್ದೇಶನಾಲಯ (ಇ ಡಿ) ಪರ ವಕೀಲ ಶ್ರೀರಾಮ್ ಶಿರ್ಸಾಟ್ ಅವರು ದೇಶಮುಖ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಇಂದು ಕೋರಿದರು. ಜಾರಿ ನಿರ್ದೇಶನಾಲಯಕ್ಕೆ ನೀಡಬಹುದಾಗಿದ್ದ ಕಸ್ಟಡಿ ಅವಕಾಶದ ಅವಧಿ 14 ದಿನಗಳು ಪೂರ್ಣಗೊಂಡಿದ್ದು ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಚ್ ಎಸ್ ಸತ್ಭಾಯ್ ಅವರು ದೇಶಮುಖ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ನ್ಯಾಯಾಂಗ ಬಂಧನದಲ್ಲಿರುವಾಗ ದೇಶಮುಖ್ ಅವರಿಗೆ ಅಗತ್ಯವಾದ ಔಷಧ ಮತ್ತು ಮನೆಯೂಟ ಒದಗಿಸಲು ಅನುಮತಿ ನೀಡುವಂತೆ ಅವರ ಪರ ಹಾಜರಾದ ವಕೀಲರಾದ ಅನಿಕೇತ್ ನಿಕಮ್ ಮತ್ತು ಇಂದರ್ಪಾಲ್ ಸಿಂಗ್ ಕೋರಿದರು. ಅವರ ವಯಸ್ಸು ಮತ್ತು ಕೋವಿಡ್ನಿಂದ ಈಗಷ್ಟೇ ಗುಣಮುಖರಾಗಿರುವ ಅಂಶವನ್ನೂ ಅವರು ಮುಂದಿಟ್ಟರು.
ಜೈಲು ವೈದ್ಯಕೀಯ ಅಧಿಕಾರಿಯು ಸೂಚಿಸಿದಂತೆ ಔಷಧ ಸ್ವೀಕರಿಸಲು ನ್ಯಾಯಾಧೀಶರು ದೇಶಮುಖ್ ಅವರಿಗೆ ಅನುಮತಿ ನೀಡಿದರು. ವಕೀಲರ ಕೋರಿಕೆಯ ಮೇರೆಗೆ ಅವರಿಗೆ ಹಾಸಿಗೆಯನ್ನು ನೀಡುವಂತೆಯೂ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ಸೂಚಿಸಿತು. ಮನೆಯೂಟ ಕುರಿತಾದ ಮನವಿಯನ್ನು ಬಾಕಿ ಇರಿಸಿದ ನ್ಯಾಯಾಲಯ ಜೈಲು ಆಹಾರದಲ್ಲಿ ಸಮಸ್ಯೆಗಳಿದ್ದಲ್ಲಿ ದೇಶಮುಖ್ ಅವರು ನ್ಯಾಯಾಲಯದ ಮೊರೆ ಹೋಗಲು ಸ್ವತಂತ್ರರು ಎಂದಿತು.
ಭ್ರಷ್ಟಾಚಾರ ಮತ್ತು ತಮ್ಮ ಸ್ಥಾನದ ದುರ್ಬಳಕೆಗೆ ಸಂಬಂಧಿಸಿದಂತೆ ದೇಶಮುಖ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನ್ಯಾಯಾಲಯ ನಿರ್ದೇಶಿಸಿದ ಬೆನ್ನಿಗೇ ಜಾರಿ ನಿರ್ದೇಶನಾಲಯವು ಮಾಜಿ ಗೃಹ ಸಚಿವರು ಮತ್ತು ಅವರ ಸಂಬಂಧಿಕರ ವಿರುದ್ಧ ತನಿಖೆ ಮುಂದಾಗಿತ್ತು.