Nawab Malik, Bombay High Court

Nawab Malik, Bombay High Court

ನವಾಬ್ ಮಲಿಕ್‌ಗೆ ಮಧ್ಯಂತರ ಪರಿಹಾರ ನಿರಾಕರಿಸಿದ ಬಾಂಬೆ ಹೈಕೋರ್ಟ್: ನ್ಯಾಯಾಂಗ ಬಂಧನ ಮುಂದುವರಿಕೆ

ಇ ಡಿ ಆರಂಭಿಸಿರುವ ತನಿಖೆ ಪ್ರಶ್ನಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಮಲಿಕ್ ಕೋರಿದ್ದ ಮಧ್ಯಂತರ ಪರಿಹಾರದ ತೀರ್ಪನ್ನು ನ್ಯಾಯಮೂರ್ತಿಗಳಾದ ಪಿ ಬಿ ವರಾಲೆ ಮತ್ತು ಎಸ್ ಎಂ ಮೋದಕ್ ಅವರಿದ್ದ ಪೀಠ ಪ್ರಕಟಿಸಿತು.
Published on

ಜಾರಿ ನಿರ್ದೇಶನಾಲಯ (ಇ ಡಿ ) ತನಿಖೆ ನಡೆಸುತ್ತಿರುವ ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸಂಪುಟ ಸಚಿವ ನವಾಬ್ ಮಲಿಕ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಪ್ರಸನ್ನ ಬಿ ವರಾಲೆ ಮತ್ತು ಶ್ರೀರಾಮ್ ಎಂ ಮೋದಕ್ ಅವರ ಪೀಠವು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಲಿಕ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಮಧ್ಯಂತರ ಪ್ರಾರ್ಥನೆಯ ತೀರ್ಪು ನೀಡಿತು.

"ಕೆಲವು ಚರ್ಚಾಸ್ಪದ ವಿಷಯಗಳನ್ನು ಎತ್ತಿರುವುದರಿಂದ, ಈ ವಿಚಾರವನ್ನು ಸುದೀರ್ಘವಾಗಿ ಆಲಿಸಬೇಕಾಗಿದೆ. ನಿಗದಿಪಡಿಸಿದ ಆಧಾರಗಳನ್ನು ಪರಿಗಣಿಸಿ, ಮಧ್ಯಂತರ ಅರ್ಜಿಯಲ್ಲಿ ಪರಿಹಾರ ನೀಡಲು ನಾವು ಒಲವು ತೋರುತ್ತಿಲ್ಲ" ಎಂದು ನ್ಯಾಯಾಲಯ ಹೇಳಿತು.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ನವಾಬ್‌ ಮಲಿಕ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಮುಂಬೈ ನ್ಯಾಯಾಲಯ [ಚುಟುಕು]

"ತಮ್ಮ ವಿರುದ್ಧ ಸಲ್ಲಿಸಲಾಗಿರುವ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ಹಾಗೂ ತಮ್ಮ ಬಂಧನ ಅಕ್ರಮ. ಇಂತಹ ಕಾನೂನು ಬಾಹಿರ ಕ್ರಮದಿಂದಾಗಿ ತಮ್ಮ ಸತತ ಬಂಧನ ಅಕ್ರಮ ಮತ್ತ ಅಧಿಕಾರ ವ್ಯಾಪ್ತಿಯನ್ನು ಮೀರುತ್ತದೆ. ಆದ್ದರಿಂದ ತಾನು ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ರಿಟ್‌ ಅರ್ಜಿ ಪುರಸ್ಕಾರಾರ್ಹ ಮತ್ತು ತಾನು ಬಿಡುಗಡೆಗೆ ಅರ್ಹ" ಎಂದು ಕಾನೂನು ಸಂಸ್ಥೆ ರಶ್ಮಿಕಾಂತ್ ಅಂಡ್‌ ಪಾರ್ಟ್‌ನರ್ಸ್‌ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಮಲಿಕ್‌ ವಾದಿಸಿದ್ದರು.

ಆದರೆ ಇದಕ್ಕೆ ಇ ಡಿ ಬಲವಾದ ಆಕ್ಷೇಪ ಎತ್ತಿತ್ತು. ಮಾ. 11ರಂದು ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಇಂದು ಮಲಿಕ್‌ ಅವರಿಗೆ ಮಧ್ಯಂತರ ಪರಿಹಾರ ನಿರಾಕರಿಸಿ ಆದೇಶ ಹೊರಡಿಸಿದೆ.

Kannada Bar & Bench
kannada.barandbench.com