
ಬೈಜೂಸ್ ವಿರುದ್ಧದ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು (ಸಿಐಆರ್ಪಿ) ಹಿಂಪಡೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಲ್ಲಿಸಿರುವ ಅರ್ಜಿಯನ್ನು ಒಂದು ವಾರದೊಳಗೆ ನಿರ್ಧರಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್ಸಿಎಲ್ಎಟಿ) ಶುಕ್ರವಾರ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಎಟಿ)ಗೆ ನಿರ್ದೇಶನ ನೀಡಿದೆ (ರಿಜು ರವೀಂದ್ರನ್ ಮತ್ತು ಪಂಕಜ್ ಶ್ರೀವಾಸ್ತವ ನಡುವಣ ಪ್ರಕರಣ).
ಬೈಜಸ್ನ ಸಿಒಸಿಗೆ ಗ್ಲಾಸ್ ಟ್ರಸ್ಟ್ ಮತ್ತು ಆದಿತ್ಯ ಬಿರ್ಲಾ ಫೈನಾನ್ಸ್ ಅನ್ನು ಮರಳಿ ನೀಡುವುದನ್ನು ಪ್ರಶ್ನಿಸಿ ರಿಜು ರವೀಂದ್ರನ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಲೇವಾರಿ ಮಾಡಿದ ಎನ್ಸಿಎಲ್ಎಟಿ ಈ ಆದೇಶ ನೀಡಿತು.
ಬಿಸಿಸಿಐನಿಂದ ದಿವಾಳಿತನ ಪರಿಹಾರ ಪ್ರಕ್ರಿಯೆ ಹಿಂಪಡೆಯುವ ಅರ್ಜಿಯನ್ನು ಒಂದು ವಾರದೊಳಗೆ ನಿರ್ಧರಿಸಲು ಎನ್ಸಿಎಲ್ಟಿ ಗೆ ನಿರ್ದೇಶಿಸಲಾಗುತ್ತಿದೆ. ಈ ಮೇಲ್ಮನವಿಯನ್ನು ನಿರ್ಧರಿಸುವಾಗ ನಾವು (ಪ್ರಕರಣದ) ವಾಸ್ತವಾಂಶಗಳ ಬಗ್ಗೆ ಯಾವುದೇ ಅವಲೋಕನ ಮಾಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂಬುದಾಗಿ ಮೇಲ್ಮನವಿ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ (ನಿವೃತ್ತ) ನ್ಯಾ. ರಾಕೇಶ್ ಕುಮಾರ್ ಜೈನ್ ಮತ್ತು ತಾಂತ್ರಿಕ ಸದಸ್ಯ ಜತೀಂದ್ರನಾಥ್ ಸ್ವೈನ್ ಹೇಳಿದರು.
ಸಾಲದ ಸುಳಿಯಲ್ಲಿ ಸಿಲುಕಿರುವ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ ಬೈಜೂಸ್ನ ಪರಿಹಾರ ಅಧಿಕಾರಿ (ರೆಸಲ್ಯೂಷ್ ಪ್ರೊಫೆಷನಲ್) ಪಂಕಜ್ ಶ್ರೀವಾಸ್ತವ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜನವರಿ 29 ರಂದು, ಎನ್ಸಿಎಲ್ಟಿ ಸೂಚಿಸಿತ್ತು. ಬೈಜೂಸ್ಗೆ ಸಂಬಂಧಿಸಿದಂತೆ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ರಚಿಸಲಾದ CoC ಯಿಂದ ಗ್ಲಾಸ್ (Glas) ಟ್ರಸ್ಟ್ ಮತ್ತು ಆದಿತ್ಯ ಬಿರ್ಲಾ ಫೈನಾನ್ಸ್ ಅನ್ನು ಹೊರಗಿಡುವ ಪರಿಹಾರ ಅಧಿಕಾರಿಯ ನಿರ್ಧಾರವನ್ನು ನ್ಯಾಯಮಂಡಳಿ ರದ್ದುಗೊಳಿಸಿತ್ತು.
ಅಲ್ಲದೆ ಪರಿಹಾರ ಅಧಿಕಾರಿಯನ್ನು ತೆಗೆದುಹಾಕಿ ಗ್ಲಾಸ್ ಟ್ರಸ್ಟ್ ಮತ್ತು ಆದಿತ್ಯ ಬಿರ್ಲಾ ಫೈನಾನ್ಸ್ ಅನ್ನು ಒಳಗೊಂಡ ಹೊಸದಾಗಿ ರಚಿಸಲಾದ ಸಿಒಸಿ ಹೊಸ ಪರಿಹಾರ ಅಧಿಕಾರಿಯನ್ನು ನೇಮಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಅದು ನಿರ್ದೇಶಿಸಿತ್ತು. ಹಿಂದಿನ ಸಿಒಸಿಯೊಂದಿಗೆ ಆರ್ಪಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು ಎನ್ಸಿಎಲ್ಟಿ ರದ್ದುಗೊಳಿಸಿತ್ತು.
ಆದರೆ, ಬೈಜೂಸ್ ಜೊತೆಗಿನ ವಿವಾದ ಇತ್ಯರ್ಥಪಡಿಸಿಕೊಳ್ಳಲು ಬಿಸಿಸಿಐ ಸಲ್ಲಿಸಿದ ಅರ್ಜಿಯ ಬಗ್ಗೆ ಅದು ಇನ್ನೂ ತೀರ್ಪು ನೀಡಿರಲಿಲ್ಲ. ಗ್ಲಾಸ್ ಮತ್ತು ಆದಿತ್ಯ ಬಿರ್ಲಾ ಅವರನ್ನು ಸಿಒಸಿಗೆ ಸೇರಿಸಿಕೊಳ್ಳುವುದನ್ನು ಪ್ರಶ್ನಿಸಿ ರಿಜು ರವೀಂದ್ರನ್ ಮೇಲ್ಮನವಿ ಸಲ್ಲಿಸಿದರು.
ಕಳೆದ ವರ್ಷ ಜುಲೈ 16 ರಂದು, ಬೈಜೂಸ್ನ ಮೂಲ ಕಂಪನಿಯಾದ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಬಿಸಿಸಿಐ ಸಲ್ಲಿಸಿದ ದಿವಾಳಿತನ ಅರ್ಜಿಯನ್ನು ಎನ್ಸಿಎಲ್ಟಿ ಬೆಂಗಳೂರು ಪುರಸ್ಕರಿಸಿತ್ತು. ₹158 ಕೋಟಿ ಮೌಲ್ಯದ ಪ್ರಾಯೋಜಕತ್ವ ಹಕ್ಕುಗಳಿಗೆ ಸಂಬಂಧಿಸಿದ ಬಾಕಿ ಪಾವತಿಸದಿರುವ ಕುರಿತು ಬಿಸಿಸಿಐ ಸಲ್ಲಿಸಿದ್ದ ದಿವಾಳಿತನ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿತ್ತು.