ಸುಧಾ ಭಾರದ್ವಾಜ್ ಅವರಿಗೆ ಜಾಮೀನು ನಿರಾಕರಿಸಲು ಎನ್ಐಎ, ಬಾಂಬೆ ಹೈಕೋರ್ಟ್‌ ಮುಂದೆ ನೀಡಿದ ಐದು ಕಾರಣಗಳು

ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್ ಅವರಿದ್ದ ಪೀಠದ ಎದುರು ಎನ್ಐಎ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದ ಮಂಡಿಸಿದರು.
ಸುಧಾ ಭಾರದ್ವಾಜ್ ಅವರಿಗೆ ಜಾಮೀನು ನಿರಾಕರಿಸಲು ಎನ್ಐಎ, ಬಾಂಬೆ ಹೈಕೋರ್ಟ್‌ ಮುಂದೆ ನೀಡಿದ ಐದು ಕಾರಣಗಳು

ಭೀಮಾ ಕೋರೆಗಾಂವ್‌ ಆರೋಪಿ ಸುಧಾ ಭಾರದ್ವಾಜ್‌ ಅವರು ಸಲ್ಲಿಸಿದ ಡಿಫಾಲ್ಟ್‌ ಜಾಮೀನು ಅರ್ಜಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿರೋಧ ವ್ಯಕ್ತಪಡಿಸಿದೆ.

ಪುಣೆ ಸೆಷನ್ಸ್ ನ್ಯಾಯಾಧೀಶರಾದ ಕೆ ಡಿ ವದನೆ ಮತ್ತು ಆರ್‌ ಎಂ ಪಾಂಡೆ ಅವರು ನೀಡಿದ್ದ ಎರಡು ಆದೇಶಗಳನ್ನು ಪ್ರಶ್ನಿಸಿ ಸುಧಾ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ಆದೇಶ ನೀಡಲು ನ್ಯಾಯಾಧೀಶರಿಗೆ ಅಧಿಕಾರವಿಲ್ಲ ಎಂದು ಅವರು ವಾದಿಸಿದ್ದರು,

ಸುಧಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಲು ಐದು ಕಾರಣಗಳಿವೆ ಎಂದು ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಅವರು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಆ ಕಾರಣಗಳು ಹೀಗಿವೆ:

ಕಾರಣ ಒಂದು

ಭಾರದ್ವಾಜ್ ಅವರು ಡಿಫಾಲ್ಟ್ ಜಾಮೀನು ಪಡೆದ ನಂತರ ಸಮಂಜಸ ಡಿಫಾಲ್ಟ್‌ ಜಾಮೀನು‌ ಅರ್ಜಿ ಸಲ್ಲಿಸಿಲ್ಲ. ಸಿಆರ್‌ಪಿಸಿ ಪ್ರಕಾರ ಆರೋಪ ಪಟ್ಟಿ ಸಲ್ಲಿಸಲು 90 ದಿನಗಳ ಕಾಲಾವಧಿ ಮುಗಿದ ನಂತರ ಡಿಫಾಲ್ಟ್‌ ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಬೇಕು. ತನಿಖಾ ಸಂಸ್ಥೆ ಆರೋಪಪಟ್ಟಿ ಸಲ್ಲಿಸುವ ವೇಳೆಗೆ ಡಿಫಾಲ್ಟ್‌ ಜಾಮೀನು ಪಡೆಯುವ ಹಕ್ಕು ಕೂಡ ಮುಗಿದಿದೆ.

ಸುಧಾ ಪ್ರಕರಣದಲ್ಲಿ ಮೂರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಮೊದಲನೆಯದು 90 ದಿನಗಳ ಅವಧಿ ಮುಗಿಯುವುದರೊಳಗೆ ಸಲ್ಲಿಸಲಾಗಿದ್ದರೆ, ಉಳಿದ ಎರಡನ್ನು ಆರೋಪಪಟ್ಟಿ ಸಲ್ಲಿಸಿದ ನಂತರ ಸಲ್ಲಿಕೆ ಮಾಡಲಾಗಿತ್ತು. ಹಾಗಾಗಿ, ಈ ಅರ್ಜಿಗಳು ಸಿಆರ್‌ಪಿಸಿಯ 167 (2) ಅಡಿಯಲ್ಲಿ ಸಮಂಜಸ ಜಾಮೀನು ಅರ್ಜಿಗಳಾಗಿಲ್ಲ.

ಕಾರಣ ಎರಡು

ಎನ್ಐಎ ಪ್ರಕರಣವೊಂದರ ತನಿಖೆಯನ್ನು ವಹಿಸಿಕೊಂಡ ನಂತರವೇ ಎನ್‌ಐಎ ಕಾಯಿದೆಯ ಅಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ಆ ಪ್ರಕರಣದ ವಿಚಾರಣೆ ನಡೆಸಬೇಕು. ಎನ್ಐಎ ಅಧಿಕಾರ ವಹಿಸಿಕೊಳ್ಳುವ ಮುನ್ನ, ರಾಜ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು.

ಎನ್ಐಎ ಕಾಯಿದೆಯ ನಿಯಮಗಳ ಪ್ರಕಾರ, ವಿಶೇಷ ನ್ಯಾಯಾಲಯಗಳು ಕೇವಲ ವಿಚಾರಣೆಗಳನ್ನು ನಡೆಸಬೇಕು ಮತ್ತು ಎಲ್ಲಾ ಸೆಷನ್ಸ್‌ ನ್ಯಾಯಾಧೀಶರ ಮುಂದೆ ಎಲ್ಲಾ ವಿಚಾರಣಾ ಪೂರ್ವ ವಾದಗಳನ್ನು ಆಲಿಸಬಹುದಾಗಿದೆ.

ಪ್ರಸ್ತುತ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಒಳಪಡಿಸಬೇಕೆಂದು ಊಹಿಸಿ, ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿರುವುದರಿಂದ, ಅದನ್ನು ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುವ ಅಗತ್ಯವಿಲ್ಲ.

Also Read
ನನ್ನ ವಿರುದ್ಧದ ಕೀಳು ಆರೋಪಗಳನ್ನು ಎನ್ಐಎ ಮತ್ತದರ ವಕೀಲರು ಹಿಂಪಡೆಯಲಿ: ಸುಧಾ ಭಾರದ್ವಾಜ್ ಅರ್ಜಿ

ಕಾರಣ ಮೂರು

ನ್ಯಾಯವ್ಯಾಪ್ತಿಯನ್ನು ಹೊಂದಿರದ ನ್ಯಾಯಾಲಯವು ಆದೇಶಗಳನ್ನು ಜಾರಿಗೊಳಿಸಿದರೂ ಸಹ ಸುಧಾ ಅವರಿಗೆ ಯಾವುದೇ ತಾರತಮ್ಯ ಉಂಟಾಗಲಿಲ್ಲ.

ಆದೇಶವನ್ನು ಜಾರಿಗೊಳಿಸಲು ಸೆಷನ್ಸ್ ನ್ಯಾಯಾಲಯಕ್ಕೆ ಯಾವುದೇ ಅಧಿಕಾರವ್ಯಾಪ್ತಿ ಇಲ್ಲ ಎಂದು ಊಹಿಸಿದರೂ ಸಹ ನ್ಯಾಯಾಲಯವು ಆದೇಶವನ್ನು ಜಾರಿಗೊಳಿಸುವ ಮೊದಲು ಕಾನೂನಿನ ಎಲ್ಲಾ ನಿಯಮಗಳನ್ನು ಅನುಸರಿಸಿತು.

ಕಾರಣ ನಾಲ್ಕು

ಸುಧಾ ಅವರಿಗೆ ನೀಡಲಾದ ಆರಂಭಿಕ ಜೈಲು ಶಿಕ್ಷೆ ಸೂಕ್ತ ನ್ಯಾಯಾಲಯದಿಂದ ಬಂದಿಲ್ಲ ಎನ್ನುವುದಾದರೆ, ಆಕೆಯ ಅರ್ಜಿಯಲ್ಲಿಯೇ ಹೇಳಿರುವಂತೆ, ಸೂಕ್ತ ನ್ಯಾಯಾಲಯದ ಯಾವುದೇ ನಂತರದ ಶಿಕ್ಷೆ ಹಿಂದಿನ ಅನುಚಿತ ಶಿಕ್ಷೆಯನ್ನು ಕ್ರಮಬದ್ಧಗೊಳಿಸುತ್ತದೆ.

ಸುರೇಶ್ ಕುಮಾರ್ ಭಿಕಮ್‌ಚಂದ್ ಜೈನ್ ಮತ್ತು ಮಹಾರಾಷ್ಟ್ರ ಸರ್ಕಾರ ಮತ್ತಿತರರ ನಡುವಣ ಪ್ರಕರಣ, ಧೀರಜ್ ವಾಧ್ವಾನ್‌ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣದ ತೀರ್ಪನ್ನು ವಾದದ ವೇಳೆ ಸಿಂಗ್‌ ಉಲ್ಲೇಖಿಸಿದರು.

Also Read
ಸುಧಾ ಭಾರದ್ವಾಜ್ ಪ್ರಕರಣ ಊರ್ಜಿತ ಯೋಗ್ಯ, ಸಾಮಾನ್ಯ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಬಾರದು ಎಂದು ಕೇಳಿದ 'ಸುಪ್ರೀಂ'

ಕಾರಣ ಐದು

ಅರೋಪಪಟ್ಟಿಯ ಪರಿಗಣನೆ ಮತ್ತು ಜಾಮೀನು ಅರ್ಜಿಯ ಪರಿಗಣನೆ ಪರಸ್ಪರ ಅವಲಂಬಿತವಾಗಿಲ್ಲ.

ಆರೋಪಪಟ್ಟಿಯ ಪರಿಗಣನೆ ಮತ್ತು ಡಿಫಾಲ್ಟ್‌ ಜಾಮೀನು ಅರ್ಜಿಯನ್ನು ಪರಿಗಣಿಸುವ ಎರಡೂ ಪ್ರಕರಣಗಳ ಪರಿಗಣನೆಗಳು ಸ್ವತಂತ್ರವಾಗಿವೆ. ಅವು ಒಂದನ್ನೊಂದು ಅವಲಂಬಿಸಿಲ್ಲ ಎಂದು ಅನಿಲ್‌ ಸಿಂಗ್‌ ವಾದಿಸಿದರು.

Related Stories

No stories found.
Kannada Bar & Bench
kannada.barandbench.com