ದೂರವಾಣಿ ಕರೆ ಕದ್ದಾಲಿಸಿದ್ದಕ್ಕೆ ವಿವರವಾದ ಕಾರಣ ನೀಡುವುದು ಗೂಢಚರ್ಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು ಅಂತಹ ಸಂದರ್ಭದಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತಲೂ ಸಾರ್ವಜನಿಕ ಹಿತಾಸಕ್ತಿ ಪರವಾಗಿ ದೇಶದ ಕಾನೂನು ನಿಲ್ಲುತ್ತದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸಂತೋಷ್ ಕುಮಾರ್ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣ].
ತಮ್ಮ ದೂರವಾಣಿ ಕರೆ ಕದ್ದಾಲಿಸಲು ಅವಕಾಶ ನೀಡುವ ಗೃಹ ಸಚಿವಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾ. ಚಂದ್ರ ಧಾರಿ ಸಿಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಲ್ಲದೆ, ಗೌಪ್ಯತೆಯ ಮೇಲೆ ಪರಿಣಾಮ ಬೀರುವುದರಿಂದ ಪ್ರತಿಬಂಧದ ವಿಷಯದಲ್ಲಿ ಅತ್ಯಂತ ಗೌಪ್ಯತೆ, ಕಾಳಜಿ ಹಾಗೂ ಮುನ್ನೆಚ್ಚರಿಕೆಯನ್ನು ಟೆಲಿಗ್ರಾಫ್ ನಿಯಮಾವಳಿಗಳ 419 ಎ ನಿಯಮ ಒದಗಿಸುತ್ತದೆ ಎಂದು ಕೂಡ ನ್ಯಾಯಾಲಯ ಹೇಳಿದೆ.
ಭಾರತೀಯ ಟೆಲಿಗ್ರಾಫ್ ಕಾಯಿದೆಯಡಿ ಒದಗಿಸಲಾದ ಅಧಿಕಾರ ಬಳಸಿ ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಸಲು 2018 ರ ಜನವರಿ 30 ರಂದು ಗೃಹ ಸಚಿವಾಲಯ ಹೊರಡಿಸಿದ್ದ ಆದೇಶದ ವಿರುದ್ಧ ಸಂತೋಷ್ ಕುಮಾರ್ ಎಂಬುವರು ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: