ಲುಕ್‌ ಔಟ್ ಸುತ್ತೋಲೆ ನೀಡದಿರುವುದು 21ನೇ ವಿಧಿಯ ಉಲ್ಲಂಘನೆ ಎಂದ ಪಂಜಾಬ್ ಹೈಕೋರ್ಟ್: ₹1 ಲಕ್ಷ ಪರಿಹಾರ ಒದಗಿಸಲು ಸೂಚನೆ

ವೈಯಕ್ತಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಎಲ್ಒಸಿಯಂತಹ ಅತಿರೇಕದ ಪ್ರಕ್ರಿಯೆಯನ್ನು ತಡೆಯಲು ಹೆಚ್ಚಿನದೇನೋ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.
Justices MS Ramachandra Rao and Harminder Singh Madaan
Justices MS Ramachandra Rao and Harminder Singh Madaan

ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಲಾದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ಎಲ್‌ಒಸಿ ಪ್ರತಿ ನೀಡದಿರುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ನೂರ್ ಪಾಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಅರ್ಜಿದಾರೆ ನೂರ್‌ ಪಾಲ್‌ ಅವರು ತಮ್ಮ ತಂದೆಯ ಒಡೆತನದ ಸಾಲ ಪಾವತಿಸಲು ವಿಫಲವಾಗಿದ್ದ ಕಂಪೆನಿಯೊಂದರ ಮಾಜಿ ನಿರ್ದೇಶಕಿಯಾಗಿದ್ದರು. ಸಾಲಕ್ಕೆ ಭದ್ರತಾ ಸಹಿಯನ್ನು ಹಾಕಿದ್ದರು. ವಾಣಿಜ್ಯ ಸಮ್ಮೇಳನವೊಂದಕ್ಕೆ ಅವರು ದುಬೈಗೆ ತೆರಳುವ ವೇಳೆ ಬ್ಯಾಂಕ್ ಆಫ್ ಇಂಡಿಯಾದ ದೂರಿನ ಆಧಾರದಲ್ಲಿ ದಾಖಲಾಗಿದ್ದ ಪ್ರಕರಣದ ಅನ್ವಯ ಕೇಂದ್ರ ಗೃಹ ಸಚಿವಾಲಯದ ವಲಸೆ ಬ್ಯೂರೊ ಎಲ್‌ಒಸಿ ಹೊರಡಿಸಿತ್ತು. ಈ ಆದೇಶವನ್ನು ರದ್ದುಗೊಳಿಸುವಂತೆ ನ್ಯಾಯಮೂರ್ತಿಗಳಾದ ಎಂ ಎಸ್ ರಾಮಚಂದ್ರ ರಾವ್ ಮತ್ತು ಹರ್ಮಿಂದರ್ ಸಿಂಗ್ ಮದನ್ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿತು.

ಎಲ್‌ಒಸಿ ಪ್ರತಿಯ ಜೊತೆಗೆ ಅದನ್ನು ನೀಡಲು ಕಾರಣವಾದ ಅಂಶಗಳನ್ನು ಸಾಧ್ಯವಾದಷ್ಟು ಬೇಗ ಅರ್ಜಿದಾರರಿಗೆ ತಿಳಿಸುವಂತೆ ಮತ್ತು ನಿರ್ಧಾರದ ನಂತರ ಅರ್ಜಿದಾರೆಯ ವಾದವನ್ನು ಆಲಿಸಲು ಒಮ್ಮೆ ಅವಕಾಶ ಒದಗಿಸುವಂತೆ ಪ್ರತಿವಾದಿ ಪ್ರಾಧಿಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ಅರ್ಜಿದಾರೆಯ ಘನತೆಗೆ ಕುಂದು ಬಂದಿರುವುದಷ್ಟೇ ಅಲ್ಲದೆ ಆಕೆ ವಿಮಾನ ಪ್ರಯಾಣಕ್ಕೆ ಖರಿದೀಸಿದ್ದ ಟಿಕೆಟ್‌ ಕೂಡ ನಷ್ಟವಾಗಿರುವುದರಿಂದ ಬ್ಯಾಂಕ್‌ ನಾಲ್ಕು ವಾರದೊಳಗೆ ಅರ್ಜಿದಾರೆಗೆ ₹1ಲಕ್ಷ ಪರಿಹಾರ ಒದಗಿಸಬೇಕು ಎಂದು ನ್ಯಾಯಾಲಯ ಸೂಚಿಸಿತು.

ಹಿನ್ನೆಲೆ

ಅರ್ಜಿದಾರೆ ತಮ್ಮ ತಂದೆ ಮತ್ತಿತರರು ನಡೆಸುತ್ತಿದ್ದ ಕಂಪೆನಿಯೊಂದರ ನಿರ್ದೇಶಕಿಯಾಗಿದ್ದರು. ಆ ಕಂಪೆನಿ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸಾಲ ಪಡೆದಿತ್ತು. ಆಕೆ ಸಾಲಕ್ಕೆ ಜಾಮೀನು ಒದಗಿಸಿದ್ದರು. ಈ ನಡುವೆ 2021 ರಲ್ಲಿ ಕಂಪನಿಯ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದರೂ ಸಾಲಕ್ಕೆ ಖಾತರಿದಾರರಾಗಿ ಮುಂದುವರೆದಿದ್ದರು. ಸಾಲ ಪಾವತಿಸಲು ವಿಫಲವಾಗಿದ್ದ ಕಂಪೆನಿಗೆ ಡಿಮ್ಯಾಂಡ್‌ ನೋಟಿಸ್‌ ನೀಡಿ ಬ್ಯಾಂಕ್‌ ಸಾಲ ಹಿಂಪಡೆಯಲು ಕೇಳಿತ್ತು. ದೊಡ್ಡ ಮೊತ್ತದ ಸಾಲಪಾವತಿಸಲು ವಿಫಲರಾಗಿ ದೇಶ ತೊರೆಯುವವರನ್ನು ತಡೆಯಲು ಸಾರ್ವಜನಿಕ ವಲಯದ ಬ್ಯಾಂಕುಗಳು ಲುಕ್‌ ಔಟ್‌ ನೋಟಿಸ್‌ ಹೊರಡಿಸುವಂತೆ ಕೋರಬಹುದು ಎನ್ನುವ 2018ರ ಭಾರತ ಸರ್ಕಾರದ ಅಧಿಸೂಚನೆಯನ್ನು ಆಧರಿಸಿ ಬ್ಯಾಂಕ್‌ ಅರ್ಜಿದಾರರ ವಿರುದ್ಧ ಎಲ್‌ಒಸಿ ಹೊರಡಿಸಲು ಸಫಲವಾಗಿತ್ತು.

ಈ ಪ್ರಕ್ರಿಯೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಯಲ್ಲಿ ಕಾರ್ಪೊರೇಟ್‌ ದಿವಾಳಿತನ ಇತ್ಯರ್ಥ ಪ್ರಕ್ರಿಯೆ ಆರಂಭಿಸುವಂತೆ ಕಂಪೆನಿ ಕೋರಿತು. ಈ ವ್ಯಾಜ್ಯ ನ್ಯಾಯಮಂಡಳಿಯಲ್ಲಿರುವಾಗ ಅರ್ಜಿದಾರೆ ದುಬೈ ಎಕ್ಸ್‌ಪೊ 2022ಗೆ ಪಯಣಿಸಲು ಉದ್ದೇಶಿಸಿದ್ದರು. ನವದೆಹಲಿಯಿಂದ ಅವರು ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಆಕೆ, ಆಕೆಯ ಕುಟುಂಬ ಹಾಗೂ ಕಂಪೆನಿಯ ಸಹಾಯಕ ನಿರ್ದೇಶಕರಿಗೆ ಎಲ್‌ಒಸಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಆಕೆಯ ಪ್ರಯಾಣಕ್ಕೆ ಅವಕಾಶ ದೊರೆತಿರಲಿಲ್ಲ.

Related Stories

No stories found.
Kannada Bar & Bench
kannada.barandbench.com