ಮಧ್ಯಸ್ಥಿಕೆದಾರರ ಸಂಭಾವನೆಗೆ ಸಂಬಂಧಿಸಿದಂತೆ ಬದಲಾವಣೆ ಅಗತ್ಯ: ಸಿಜೆಐ

ಮಧ್ಯಸ್ಥಿಕೆದಾರರ ಸಂಭಾವನೆಗೆ ಸಂಬಂಧಿಸಿದಂತೆ ಬದಲಾವಣೆ ಅಗತ್ಯ: ಸಿಜೆಐ
A1
Published on

ದೇಶದ ರಾಜಿ ಮಧ್ಯಸ್ಥಿಕೆ ವ್ಯವಸ್ಥೆಯಲ್ಲಿ ಮಧ್ಯಸ್ಥಿಕೆದಾರರ ಶುಲ್ಕಕ್ಕೆ ಸಂಬಂಧಿಸಿದಂತೆ ಬದಲಾವಣೆಯ ಅಗತ್ಯ ಇದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅಭಿಪ್ರಾಯಪಟ್ಟರು.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಮತ್ತು ಆಫ್ಕಾನ್ಸ್‌ ನಡುವಿನ ಮಧ್ಯಸ್ಥಿಕೆಗೆ ಸಂಬಂಧಿಸಿದ ಶುಲ್ಕ ವಿವಾದದ ಕುರಿತಾದ ವಿಚಾರಣೆ ನಡೆಸಿದ ನ್ಯಾ. ರಮಣ ಅವರು, “ಭಾರತದಲ್ಲಿ ಮಧ್ಯಸ್ಥಿಕೆ ವ್ಯವಸ್ಥೆಯನ್ನು ಮುಚ್ಚಬೇಕಾಗಬಹುದು… ಸಂಭಾವನೆ ಇಲ್ಲದೆ ಕೆಲಸ ಮಾಡಿ ಎಂದು ಮಧ್ಯಸ್ಥಿಕೆದಾರರಿಗೆ ಹೇಳಬೇಕೆ? ಸರಿ ಅವರಿಗೆ ಹಾಗೆ ಹೇಳುತ್ತೇವೆ ಬಿಡಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣದ ಸಂಬಂಧ ನೋಟಿಸ್ ಜಾರಿ ಮಾಡಿದ ಅವರು, ಸಮಸ್ಯೆ ಆಲಿಸಿ ಪರಿಹರಿಸಲು ಪೀಠ ರಚಿಸುವುದಾಗಿ ತಿಳಿಸಿದರು.

ಒಎನ್‌ಜಿಸಿ ಮಧ್ಯಸ್ಥಿಕೆ ಪ್ರಕರಣದಲ್ಲಿ ಮೂವರು ನಿವೃತ್ತ ನ್ಯಾಯಮೂರ್ತಿಗಳ ಮಧ್ಯಸ್ಥಿಕೆ ನ್ಯಾಯಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ಸಂಭಾವನೆ ವಿಚಾರದಲ್ಲಿ ವಿವಾದ ಉಂಟಾಗಿದೆ. ಇದಕ್ಕೂ ಮೊದಲು ಸಂಭಾವನೆಯ ವಿಚಾರದಲ್ಲಿ ಉಂಟಾದ ಗೊಂದಲದಿಂದಾಗಿ ಮೂವರು ನಿವೃತ್ತ ನ್ಯಾಯಮೂರ್ತಿಗಳು ಪ್ರಕರಣದಿಂದ ಹಿಂದೆ ಸರಿದಿದ್ದರು. ಪ್ರಸ್ತುತ ನ್ಯಾಯಮೂರ್ತಿಗಳು ಪ್ರತಿಯೊಬ್ಬ ಮಧ್ಯಸ್ಥಿಕೆದಾರರಿಗೆ ರೂ. 80 ಲಕ್ಷ ಸಂಭಾವನೆ ಕೇಳುತ್ತಿದ್ದು, ಒಎನ್‌ಜಿಸಿಯು ನಿಯಮಗಳ ಅನುಸಾರ ಮಧ್ಯಸ್ಥಿಕೆಗೆ ಮೀಸಲಿಟ್ಟಿರುವ ಒಟ್ಟು ಸಂಭಾವನೆಯ ಮಿತಿ ರೂ. 30 ಲಕ್ಷಕ್ಕೆ ಸೀಮಿತವಾಗಿದೆ ಎಂದಿದೆ.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.

Kannada Bar & Bench
kannada.barandbench.com