
ವಿಚಾರಣಾ ನ್ಯಾಯಾಲಯದ ತೀರ್ಪು ಜಾರಿಯಾಗುವುದನ್ನು ತಪ್ಪಿಸುವುದಕ್ಕಾಗಿ ನಕಲಿ ತಡೆಯಜ್ಞೆ ಮಂಡಿಸುವ ಮೂಲಕ ನ್ಯಾಯಾಂಗ ನಿಂದನೆ ಅಪರಾಧ ಎಸಗಿದ ಮೂವರು ವ್ಯಕ್ತಿಗಳಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಈಚೆಗೆ ಎತ್ತಿಹಿಡಿದಿದೆ [ಷಣ್ಮುಗಂ ಮತ್ತಿತರರು ಹಾಗೂ ಮದ್ರಾಸ್ ಹೈಕೋರ್ಟ್ ನಡುವಣ ಪ್ರಕರಣ].
ನ್ಯಾಯಾಂಗ ನಿಂದನೆ ವಿರುದ್ಧ ಕೈಗೊಂಡ ಕ್ರಮ ನ್ಯಾಯಾಲಯದ ನಕಲಿ ಆದೇಶಗಳನ್ನು ತಯಾರಿಸುವವರ ವಿರುದ್ಧ ಮಾತ್ರವಲ್ಲದೆ ಅಗತ್ಯ ಲಾಭ ಪಡೆಯಲು ನಕಲಿ ಆದೇಶ ಬಳಸುವವರ ವಿರುದ್ಧವೂ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಿ.ಕೆ. ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
ನ್ಯಾಯಾಲಯಗಳು ತಮ್ಮ ವಿಚಾರಣೆಗಳನ್ನು ಇತರರು ತಪ್ಪಾಗಿ ನಿರೂಪಿಸದಂತೆ ನೋಡಿಕೊಳ್ಳಬೇಕು. ಅನಗತ್ಯ ಲಾಭ ಪಡೆಯಲು ನ್ಯಾಯಾಲಯದ ಆದೇಶವನ್ನು ನಕಲಿ ಮಾಡಿ ಮಂಡಿಸುವುದಕ್ಕಿಂತ ಹಾನಿಕಾರಕವಾದದ್ದು ಇನ್ನೊಂದಿಲ್ಲ ಎಂದು ಕೂಡ ಅದು ಕಿವಿಮಾತು ಹೇಳಿದೆ.
ಇಂತಹ ನಕಲಿ ಆದೇಶ ತಯಾರಿಸುವುದು ನ್ಯಾಯಾಂಗ ನಿಂದನೆಯ ಅತ್ಯಂತ ಭಯಾನಕ ಕೃತ್ಯಗಳಲ್ಲಿ ಒಂದಾಗಿದೆ. ಇದುಕಾನೂನಾತ್ಮಕ ಆಡಳಿತಕ್ಕೆ ಅಡ್ಡಿ ಉಂಟುಮಾಡುವುದಷ್ಟೇ ಅಲ್ಲದೆ ದಾಖಲೆಯನ್ನು ನಕಲು ಮಾಡುವ ಅಂತರ್ಗತ ಉದ್ದೇಶ ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತಮಿಳುನಾಡಿನ ಸಿವಿಲ್ ನ್ಯಾಯಾಲಯವೊಂದು 2004ರಲ್ಲಿ ಟ್ರಸ್ಟ್ ಒಂದರ ಪರವಾಗಿ ತೀರ್ಪು ನೀಡಿ ಬಾಡಿಗೆದಾರರಿಂದ ಬಾಡಿಗೆ ಬಾಕಿ ಮೊತ್ತ ವಸೂಲಿ ಮಾಡಿಕೊಳ್ಳುವಂತೆ ಆದೇಶಿಸಿತ್ತು. ಆದರೆ ಮದ್ರಾಸ್ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿರುವುದರಿಂದ ಆದೇಶ ಜಾರಿಗೊಳಿಸುವಂತಿಲ್ಲ ಎಂದು ಬಾಡಿಗೆದಾರರು ಬಳಿಕ ವಾದಿಸಿದ್ದರು. ಕಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ನಕಲಿ ಎಂದು ತಿಳಿದುಬಂದಿತ್ತು.
ವಿಚಾರಣೆ ಅವಧಿಯಲ್ಲಿ ಐವರು ಆರೋಪಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಮೂವರ ವಿರುದ್ಧ ಹೈಕೋರ್ಟ್ ನ್ಯಾಯಾಂಗ ನಿಂದನೆ ಅಪರಾಧದ ದೋಷಿಗಳು ಎಂದು ಘೋಷಿಸಿ ಆರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿತ್ತು. ಈ ಮೂವರೂ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮೇ 2ರಂದು, ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಪ್ರಕರಣದಲ್ಲಿ ಅವರಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ.