
ಮಹಿಳಾ ಸಮ್ಮಾನ್ ಯೋಜನೆಯಡಿ ಮಹಿಳಾ ಮತದಾರರಿಗೆ ₹ 2,100 ನೀಡುವುದಾಗಿ ಘೋಷಿಸಿರುವ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ [ವಿಜಯ್ ಕುಮಾರ್ ಮತ್ತು ಭಾರತೀಯ ಚುನಾವಣಾ ಆಯೋಗ ಇನ್ನಿತರರ ನಡುವಣ ಪ್ರಕರಣ].
ಅರ್ಜಿದಾರರು ಮತ್ತು ಅವರ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಜನವರಿ 30 ಕ್ಕೆ ಪ್ರಕರಣ ಮುಂದೂಡಿದರು. ಗುರುವಾರ, ಪೀಠ ಮನವಿಯ ನಿರ್ವಹಣೆ ಸಾಧ್ಯವೇ ಎಂದು ಪ್ರಶ್ನಿಸಿತ್ತು.
ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆ ಅಂಗವಾಗಿ ಕೈಗೊಂಡಿದ್ದ ಪ್ರಚಾರದ ವೇಳೆ ಎಎಪಿ ಮಾಡಿದ್ದ ಘೋಷಣೆ ಪ್ರಶ್ನಿಸಿ ಅರ್ಜಿದಾರರಾದ ಶಿವಶಂಕರ್ ಪರಾಶರ್ ಅವರು ಜನವರಿ 3ರಂದು ಇಸಿಐಗೆ ದೂರು ಸಲ್ಲಿಸಿದ್ದರು. ಆದರೆ ಆಯೋಗ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ದೂರನ್ನು ತ್ವರಿತವಾಗಿ ಇಸಿಐ ವಿಲೇವಾರಿ ಮಾಡಬೇಕು. ಎಎಪಿ ಕಾರ್ಯಕರ್ತರು ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಅರ್ಜಿ ಭರ್ತಿ ಮಾಡಿಕೊಳ್ಳದಂತೆ ತಡೆಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಯೋಜನೆ ಕುರಿತಂತೆ ಗೊಂದಲಕ್ಕೆ ತೆರೆ ಎಳೆದಿದ್ದ ದೆಹಲಿ ಸರ್ಕಾರಿ ಅಧಿಕಾರಿಗಳು ಅಂತಹ ಯಾವುದೇ ಯೋಜನೆ ಅಸ್ತಿತ್ವದಲ್ಲಿ ಇಲ್ಲ ಎಂದು ಸಾರ್ವಜನಿಕ ಪ್ರಕಟಣೆ ಬಿಡುಗಡೆ ಮಾಡಿದ್ದರು. ಅಸ್ತಿತ್ವದಲ್ಲಿಲ್ಲದ ಯೋಜನೆಯನ್ನು ಪುರಸ್ಕರಿಸಿದಂತೆ ದೆಹಲಿಯ ಜನರಿಗೆ ಸಲಹೆ ನೀಡಲಾಗಿತ್ತು. ಯೋಜನೆಯ ಕುರಿತಂತೆ ತಪ್ಪುದಾರಿಗೆಳೆಯಲಾಗುತ್ತಿದ್ದು ಯಾವುದೇ ಅಧಿಕಾರ ಇಲ್ಲದ ಅನಧಿಕೃತ ವ್ಯಕ್ತಿಗಳಿಗೆ ವೈಯಕ್ತಿಕ ವಿವರಗಳನ್ನು ನೀಡದಂತೆ ಜಾಗ್ರತೆ ವಹಿಸಲು ಸೂಚಿಸಲಾಗಿತ್ತು.