ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಿಜೆಪಿ ಪರಿಷತ್‌ ಸದಸ್ಯ ಶಶಿಲ್‌ ನಮೋಶಿ ವಿರುದ್ದದ ಖಾಸಗಿ ದೂರು ವಜಾ ಮಾಡಿದ ಹೈಕೋರ್ಟ್‌

ಬಿಜೆಪಿ ಮುಖಂಡ ಎಂಎಲ್‌ಸಿ ಶಶಿಲ್ ನಮೋಶಿ ಮತ್ತಿತರರು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ 2016ರಲ್ಲಿ ಕಲಬುರಗಿಯ ಒ ಹೆಚ್ ಅಮರೇಶ್ ಮತ್ತು ಬೆಂಗಳೂರಿನ ಲಿಂಗನಗೌಡ ಖಾಸಗಿ ದೂರು ಸಲ್ಲಿಸಿದ್ದರು.
MLC Shashil Namoshi
MLC Shashil Namoshi
Published on

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) 2002ರ ಅಡಿ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಶಶಿಲ್ ಜಿ ನಮೋಶಿ ವಿರುದ್ಧದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ರದ್ದುಗೊಳಿಸಿದೆ.

ಕಲಬುರ್ಗಿಯ ಹೈದರಾಬಾದ್ ಕರ್ನಾಟಕ ಎಜುಕೇಷನ್ ಸೊಸೈಟಿಯ ಮಾಜಿ ಪದಾಧಿಕಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ ನಮೋಶಿ ಮತ್ತಿತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಪಿಎಂಎಲ್‌ಎ ಅಡಿ ವಿಚಾರಣಾಧೀನ ನ್ಯಾಯಾಲಯಗಳು ಎಲ್ಲ ಖಾಸಗಿ ದೂರುಗಳನ್ನು ಪುರಸ್ಕರಿಸುವಂತಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಕ್ಷಮ ಅಧಿಕಾರಿ ಅಥವಾ ನಿರ್ದೇಶಕರು ಲಿಖಿತವಾಗಿ ದೂರು ನೀಡದೆ ಪಿಎಂಎಲ್‌ ಕಾಯಿದೆಯ ಸೆಕ್ಷನ್‌ ನಾಲ್ಕರ ಅಡಿ ಅಕ್ರಮ ಹಣ ವರ್ಗಾವಣೆಯ ಪ್ರಕರಣವನ್ನು ದಾಖಲಿಸಲಾಗದು ಎಂದು ಕಾಯಿದೆಯ ನಿಯಮಾವಳಿಗಳು ಹೇಳುತ್ತವೆ.

ಪಿಎಂಎಲ್‌ ಕಾಯಿದೆಯು ವಿಶೇಷವಾದ ಶಾಸನವಾಗಿರುವುದರಿಂದ ಅದರಲ್ಲಿ ಸೂಚಿಸಲಾಗಿರುವ ಪ್ರಕ್ರಿಯೆಗಳು ಸಾಮಾನ್ಯ ಕ್ರಿಮಿನಲ್‌ ಅಪರಾಧ ಸಂಹಿತೆಯ ಪ್ರಕ್ರಿಯೆಗಳನ್ನು ಮೀರುತ್ತವೆ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು.

ಬಿಜೆಪಿ ಮುಖಂಡ ಎಂಎಲ್‌ಸಿ ಶಶಿಲ್ ನಮೋಶಿ ಮತ್ತಿತರರು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ 2016ರಲ್ಲಿ ಕಲಬುರಗಿಯ ಒ ಎಚ್ ಅಮರೇಶ್ ಮತ್ತು ಬೆಂಗಳೂರಿನ ಲಿಂಗನಗೌಡ ಖಾಸಗಿ ದೂರು ಸಲ್ಲಿಸಿದ್ದರು. ಈಗ ಅದನ್ನು ಹೈಕೋರ್ಟ್‌ ವಜಾ ಮಾಡಿದೆ.

Kannada Bar & Bench
kannada.barandbench.com