ನ್ಯಾ. ಗವಾಯಿ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ ರಾಷ್ಟ್ರಪತಿ ಆದೇಶ

ನ್ಯಾ. ಬಿ ಆರ್ ಗವಾಯಿ ಅವರು ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದು, ದಲಿತ ಸಮುದಾಯದಿಂದ ಸಿಜೆಐ ಹುದ್ದೆಗೇರಿದ ಎರಡನೆಯವರಾಗಲಿದ್ದಾರೆ.
Justice BR Gavai
Justice BR Gavai
Published on

ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರನ್ನು ಮೇ14ರಿಂದ ಜಾರಿಗೆ ಬರುವಂತೆ ಭಾರತದ ಮುಂದಿನ ಮುಖ್ಯನ್ಯಾಯಮೂರ್ತಿಯಾಗಿ ನಿಯುಕ್ತಿಗೊಳಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ, "ಭಾರತದ ಸಂವಿಧಾನದ 124 ನೇ ವಿಧಿಯ ನಿಬಂಧನೆ (2) ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಶ್ರೀ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಮೇ 14, 2025 ರಿಂದ ಜಾರಿಗೆ ಬರುವಂತೆ ಭಾರತದ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ರಾಷ್ಟ್ರಪತಿಗಳು ಸಂತೋಷಪಡುತ್ತಾರೆ" ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರನ್ನು ಮುಂದಿನ ಸಿಜೆಐ ಆಗಿ ಶಿಫಾರಸು ಮಾಡಿ ಕೇಂದ್ರ ಕಾನೂನು ಸಚಿವಾಲಯಕ್ಕೆ ಈ ಹಿಂದೆ ಪತ್ರ ಬರೆದಿದ್ದರು. ಸಿಜೆಐ ಖನ್ನಾ ಅವರು ಮೇ 13 ರಂದು ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.

ನ್ಯಾ. ಬಿ ಆರ್ ಗವಾಯಿ ಅವರು ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದು, ದಲಿತ ಸಮುದಾಯದಿಂದ ಈ ಹುದ್ದೆಗೇರಿದ ಎರಡನೆಯವರಾಗಲಿದ್ದಾರೆ. ದಲಿತ ಸಮುದಾಯದಿಂದ ಈ ಹುದ್ದೆಗೇರಿದ ಮೊದಲ ಸಿಜೆಐ ಕೆ ಜಿ ಬಾಲಕೃಷ್ಣನ್‌ 2010ರಲ್ಲಿ ನಿವೃತ್ತರಾಗಿದ್ದರು.

ಹಾಲಿ ಸಿಜೆಐ ಸಂಜೀವ್‌ ಖನ್ನಾ ಅವರು ಮೇ 13ರಂದು ನಿವೃತ್ತರಾಗಲಿದ್ದಾರೆ. ಸಿಜೆಐ ಡಿ ವೈ ಚಂದ್ರಚೂಡ್‌ ಅವರ ಬಳಿಕ ಅಧಿಕಾರ ವಹಿಸಿಕೊಂಡ ಅವರ ಅಧಿಕಾರಾವಧಿ ಕೇವಲ ಆರು ತಿಂಗಳು ಇತ್ತು. ಅವರ ಉತ್ತರಾಧಿಕಾರಿ ನ್ಯಾಯಮೂರ್ತಿ ಗವಾಯಿ ಕೂಡ ಇದೇ ರೀತಿಯ ಅಲ್ಪ ಅಧಿಕಾರಾವಧಿ ಹೊಂದಿದ್ದು ಅವರು ನವೆಂಬರ್ 23, 2025ರಂದು ನಿವೃತ್ತರಾಗಲಿದ್ದಾರೆ.

ನ್ಯಾಯಮೂರ್ತಿ ಗವಾಯಿ ಅವರನ್ನು ನವೆಂಬರ್ 14, 2003ರಂದು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿತ್ತು. 2005ರಲ್ಲಿ ಅವರ ಹುದ್ದೆ ಖಾಯಂ ಆಗಿತ್ತು.

ಅವರು ಮುಂಬೈನ ಹೈಕೋರ್ಟ್‌ನ ಪ್ರಧಾನ ಪೀಠ ಮಾತ್ರವಲ್ಲದೆ ಅದೇ ಹೈಕೋರ್ಟ್‌ನ ನಾಗಪುರ, ಔರಂಗಾಬಾದ್ ಹಾಗೂ ಪಣಜಿಯಲ್ಲಿ ಪೀಠಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಮೇ 24, 2019ರಲ್ಲಿ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲಾಗಿತ್ತು.

Kannada Bar & Bench
kannada.barandbench.com