ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಪ್ರಥ್ವಿರಾಜ್' ಚಿತ್ರದ ಶೀರ್ಷಿಕೆ ಬದಲಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಪರಿಗಣಿಸಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ಪಿಐಎಲ್ ಆಧರಿಸಿ ನೋಟಿಸ್ ನೀಡಲು ನಿರಾಕರಿಸಿದ ನ್ಯಾಯಾಲಯ ಅರ್ಜಿದಾರರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿತು. ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು ಪ್ರಕರಣದ ವಿಚಾರಣೆ ಕೈಗೊಂಡಿತ್ತು.
ಚಿತ್ರಕ್ಕೆ ಪೃಥ್ವಿರಾಜ್ ಎಂದು ಹೆಸರಿಡಲಾಗಿದೆ, ಇದು ರಾಜನಿಗೆ ಮಾಡಿದ ಅಪಮಾನ ಎಂದು ರಾಷ್ಟ್ರೀಯ ಪ್ರವಾಸಿ ಪರಿಷತ್ ಎಂಬ ಎನ್ಜಿಒ ವಾದಿಸಿತ್ತು. ಇದು ದೆಹಲಿಯನ್ನು ತನ್ನ ರಾಜಧಾನಿಯಾಗಿಸಿಕೊಂಡು ಭಾರತದ ದೊಡ್ಡ ಭಾಗವನ್ನು ಆಳಿದ ರಾಜನಿಗೆ ಮಾಡುವ ಅವಮಾನ ಎಂದು ರಾಷ್ಟ್ರೀಯ ಪ್ರವಾಸಿ ಪರಿಷತ್ ಎಂಬ ಎನ್ಜಿಒ ವಾದಿಸಿತ್ತು.
ಚಿತ್ರಕ್ಕೆ ಸೂಕ್ತ ಶೀರ್ಷಿಕೆ ನೀಡಬೇಕು. ಈಗಿನ ರೂಪದಲ್ಲಿ ಸಿನಿಮಾ ಪ್ರದರ್ಶನವಾದರೆ ರಾಜ ಚೌಹಾಣ್ ಅವರ ಘನತೆಗೆ ಧಕ್ಕೆಯಾಗುತ್ತದೆ. ಇದು ಕಾನೂನಿಗೆ ವಿರುದ್ಧವಾಗಿದ್ದು ಜನರ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಎನ್ಜಿಒ ಪರ ವಕೀಲರು ವಾದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಚಿತ್ರ ನಿರ್ಮಾಪಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಏಪ್ರಿಲ್ 1ರಂದು ಸಿನಿಮಾ ಬಿಡುಗಡೆಯಾಗಲಿದ್ದು ಮಾನುಷಿ ಚಿಲ್ಲರ್, ಸಂಜಯ್ ದತ್, ಅಶುತೋಷ್ ರಾಣಾ, ಅಲಿ ಫಜಲ್ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದಾರೆ.