ರಂಜಿತ್ ಸಿಂಗ್ ಕೊಲೆ ಪ್ರಕರಣ: ಗುರ್ಮೀತ್ ರಾಮ್ ರಹೀಮ್ ಸಿಂಗ್ ಖುಲಾಸೆಗೊಳಿಸಿದ ಪಂಜಾಬ್ ಹೈಕೋರ್ಟ್

ಅತ್ಯಾಚಾರ ಮತ್ತು ಕೊಲೆಗೆ ಸಂಚು ರೂಪಿಸಿದ ಬೇರೆ ಪ್ರಕರಣಗಳಲ್ಲಿ ಆರೋಪಿಯಾಗಿರುವುದರಿಂದ ರಾಮ್ ರಹೀಮ್ ಸೆರೆವಾಸ ಮುಂದುವರೆಯಲಿದೆ.
Gurmeet Ram Rahim
Gurmeet Ram Rahim Twitter

ಡೇರಾ ಸಚ್ಚಾ ಸೌದಾದ ಮಾಜಿ ವ್ಯವಸ್ಥಾಪಕ ರಂಜಿತ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಧಾರ್ಮಿಕ ಸಂಘಟನೆ ಡೇರಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹಾಗೂ ನಾಲ್ವರನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದೆ.

ರಾಮ್ ರಹೀಮ್ ಹಾಗೂ ಇತರರು ದೋಷಿಗಳು ಎಂದು 2021ರಲ್ಲಿ ಹರಿಯಾಣದ ಪಂಚಕುಲದಲ್ಲಿರುವ ಸಿಬಿಐ ನ್ಯಾಯಾಲಯ  ಘೋಷಿಸಿತ್ತು. ಸಿಂಗ್‌ ಅಲ್ಲದೆ ನಾಲ್ವರು ಅಪರಾಧಿಗಳಾದ ಅವತಾರ್ ಸಿಂಗ್, ಜಸ್ಬೀರ್ ಸಿಂಗ್, ಸಬ್ದಿಲ್ ಸಿಂಗ್ ಮತ್ತು ಕ್ರಿಶನ್ ಲಾಲ್ ಅವರಿಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸುರೇಶ್ ಠಾಕೂರ್ ಮತ್ತು ಲಲಿತ್ ಬಾತ್ರಾ ಅವರಿದ್ದ ಪೀಠ ಇಂದು ತೀರ್ಪು ಪ್ರಕಟಿಸಿತು.

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ರಾಮ್‌ ರಹೀಮ್‌ ಸೆರೆವಾಸ ಮುಂದುವರೆಯಲಿದೆ. ಕೊಲೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿಯೂ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

Kannada Bar & Bench
kannada.barandbench.com