
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಫಲಕಗಳು ಮತ್ತು ಬ್ಯಾನರ್ಗಳನ್ನು ಹಾಕುವುದನ್ನು ಧಾರ್ಮಿಕ ಆಚರಣೆ ಎಂದು ಹೇಳಲಾಗದು ಎಂಬುದಾಗಿ ಕೇರಳ ಹೈಕೋರ್ಟ್ ಬುಧವಾರ ತಿಳಿಸಿದೆ [ಕಟ್ಟನಂ ಗ್ರಾಮದ ಸೇಂಟ್ ಸ್ಟೀಫನ್ಸ್ ಮಲಂಕಾರ ಕ್ಯಾಥೋಲಿಕ್ ಚರ್ಚ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಭಯದಿಂದಲೋ ಅಥವಾ ಧಾರ್ಮಿಕ ಆಚರಣೆ ಎಂಬ ಪೂರ್ವಾಗ್ರಹದಿಂದಲೋ ಇಂತಹ ಅಕ್ರಮ ಅಳವಡಿಕೆಗಳ ಬಗ್ಗೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಕಿಡಿಕಾರಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಫಲಕಗಳು ಬ್ಯಾನರ್ಗಳನ್ನು ಹಾಕಿದಾಗ ಎಲ್ಲರೂ ಭಯದಿಂದ ಕಣ್ಣಿಲ್ಲದವರಾಗುತ್ತಾರೆ. ಹಾಗೆ ಜನನಿಬಿಡ ರಸ್ತೆಗಳಲ್ಲಿ ದೇವಾಲಯಗಳು, ಚರ್ಚ್ಗಳು ಅಥವಾ ಮಸೀದಿಗಳ ಬೋರ್ಡ್ಗಳನ್ನು ಹಾಕುವುದು ಫಲಕ ಹಾಕುವುದು ಖಂಡಿತವಾಗಿಯೂ ಧಾರ್ಮಿಕ ಆಚರಣೆಯಲ್ಲ. ನಮಗೆ ಅಷ್ಟಾದರೂ ಗೊತ್ತಿದ್ದು ಇದನ್ನು ಯಾವುದೇ ಭಯ ಇಲ್ಲದೆ ಹೇಳಬಹುದು ಎಂದು ನ್ಯಾ. ರಾಮಚಂದ್ರನ್ ಮೌಖಿಕವಾಗಿ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಅಕ್ರಮವಾಗಿ ಫಲಕ ಹಾಕುವವರಿಗೆ ₹ 5,000 ದಂಡ ವಿಧಿಸುವಂತೆ ತಾನು ಈ ಹಿಂದಿನ ಆದೇಶದಲ್ಲಿ ಸೂಚಿಸಿದ್ದರೂ ಅಕ್ರಮ ಫಲಕಗಳ ಅದರಲ್ಲಿಯೂ ರಾಜಕೀಯ ಪಕ್ಷಗಳ ಬೋರ್ಡ್ ಬ್ಯಾನರ್ಗಳ ಹಾವಳಿ ಎಗ್ಗಿಲ್ಲದೆ ಮುಂದುವರೆದ ಬಗ್ಗೆ ತನ್ನ ಹಿಂದಿನ ಆದೇಶದಲ್ಲಿ ಹೈಕೋರ್ಟ್ ಅಧಿಕಾರಿಗಳಿಗೆ ಛೀಮಾರಿ ಹಾಕಿತು.
ಇದಕ್ಕೆ ಕಡಿವಾಣ ಹಾಕದಿದ್ದರೆ ಸರ್ಕಾರದ ಕಾರ್ಯದರ್ಶಿಗಳನ್ನೇ ಖುದ್ದು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನ್ಯಾಯಾಲಯ ಪುನರುಚ್ಚರಿಸಿತು.
ಅಲ್ಲದೆ ಫಲಕ ತೆರವು ಕಾರ್ಯಾಚರಣೆ ವೇಳೆ ಕಾರ್ಯದರ್ಶಿಗಳು ವರದಿ ಮಾಡಿದರೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ ಅದು ಮುಂದಿನ ವಿಚಾರಣೆ ವೇಳೆಗೆ ಸ್ಥಳೀಯ ಸಂಸ್ಥೆಗಳ ಸರ್ಕಾರಿ ಇಲಾಖಾ ಕಾರ್ಯದರ್ಶಿ ಹಾಜರಾಗುವಂತೆ ತಾಕೀತು ಮಾಡಿತು.