ಶಿಕ್ಷೆ ಹಿಂಪಡೆಯಲು ಕೋರಿದ್ದ ರಾಜೀವ್ ಗಾಂಧಿ ಹತ್ಯೆ ಅಪರಾಧಿ ಪೇರರಿವಾಳನ್: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಪೇರರಿವಾಳನ್ 19 ವರ್ಷ ವಯೋಮಾನದವನಿದ್ದಾಗ ರಾಜೀವ್ ಹತ್ಯೆಗೆ ಬಾಂಬ್ ತಯಾರಿಸಲು ಸಹಾಯ ಮಾಡಿದ್ದಕ್ಕಾಗಿ ಆತನನ್ನು ದೋಷಿ ಎಂದು ಪರಿಗಣಿಸಿ ಮರಣದಂಡನೆ ವಿಧಿಸಲಾಗಿತ್ತು.
Rajiv Gandhi assassination
Rajiv Gandhi assassination

ತನಗೆ ವಿಧಿಸಿರುವ ಜೀವಾವಧಿ ಶಿಕ್ಷೆ ಹಿಂಪಡೆಯಲು ಕೋರಿ ಮಾಜಿ ಪ್ರಧಾನ ಮಂತ್ರಿ ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ಎ ಜಿ ಪೇರರಿವಾಳನ್‌ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ಕಾಯ್ದಿರಿಸಿದೆ.

ಶಿಕ್ಷೆ ಕಡಿತ ಅಥವಾ ಕ್ಷಮಾದಾನಕ್ಕಾಗಿ ರಾಜ್ಯ ಸಚಿವ ಸಂಪುಟ ಶಿಫಾರಸು ಮಾಡಿರುವಾಗ ಇಂತಹ ಅರ್ಜಿಗಳನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸುವ ರಾಜ್ಯಪಾಲರ ಅಧಿಕಾರದ ನಿರ್ದಿಷ್ಟ ವಿಷಯದ ಕುರಿತು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಬಿ ಆರ್ ಗವಾಯಿ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ವ್ಯವಹರಿಸುತ್ತಿತ್ತು.

ಕೇಂದ್ರ ಸರ್ಕಾರ ಅಪರಾಧ ಕುರಿತು ನಿರ್ಣಯ ಕೈಗೊಳ್ಳಬೇಕೇ ವಿನಾ ರಾಜ್ಯ ಸರ್ಕಾರಗಳಲ್ಲ ಎಂದು ತಮಿಳುನಾಡು ರಾಜ್ಯಪಾಲರನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ವಾದ ಮಂಡಿಸಿದರು. ಆದರೆ ಇದಕ್ಕೆ ನ್ಯಾ. ಗವಾಯಿ ಅವರು ಮೌಖಿಕವಾಗಿ “ನಿಮ್ಮ ವಾದ ಒಪ್ಪುವುದಾದರೆ ಪ್ರತಿ ಕೊಲೆ ಪ್ರಕರಣಗಳಲ್ಲಿ (ಶಿಕ್ಷೆ ಕಡಿತದ ಬಗ್ಗೆ ನಿರ್ಧರಿಸಲು) ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರ ಇರುತ್ತದೆ” ಎಂದರು.

Also Read
ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ಕೇಂದ್ರೀಯ ಸಂಸ್ಥೆ ಹತ್ಯೆಯ ತನಿಖೆ ಮಾಡಿದ್ದು ಐಪಿಸಿ ಅಡಿಯಲ್ಲಿ ಕೊಲೆ ಕುರಿತ ಅಪರಾಧವನ್ನು ಸಂಸತ್ತು ಜಾರಿಗೊಳಿಸಿದ್ದರಿಂದ ಕೇಂದ್ರ ಸರ್ಕಾರವೇ ನಿರ್ಣಯ ಕೈಗೊಳ್ಳಬೇಕು ಎಂದು ಎಎಸ್‌ಜಿ ವಾದಿಸಿದರು. "ನಮ್ಮ (ಕೇಂದ್ರದ)ಅಧಿಕಾರ ಮತ್ತುನಿರ್ಧಾರಗಳನ್ನುಯಾರಾದರೂಅತಿಕ್ರಮಿಸಿದರೆ, ನಮಗೆಉಲ್ಲೇಖಿಸಲುಎಲ್ಲಾಹಕ್ಕು ಇದೆ" ಎಂದು ಎಎಸ್‌ಜಿ ಹೇಳಿದರು.

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾ. ಗವಾಯಿ “ಈ ತರ್ಕದಂತೆ ರಾಜ್ಯ ಸರ್ಕಾರಗಳು ಅಪರಾಧಿಗಳನ್ನು ಕ್ಷಮಿಸಲು ಸಾಧ್ಯವಿಲ್ಲ, ಪ್ರತಿ ಬಾರಿ ರಾಷ್ಟ್ರಪತಿಗಳಿಗೆ ಉಲ್ಲೇಖಿಸಬೇಕೆ?” ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ, ಅರ್ಜಿದಾರರ ಪರ ವಕೀಲರು “ಐಪಿಸಿ ಅಸ್ತಿತ್ವದಲ್ಲಿರುವ ಕಾನೂನಾಗಿದ್ದು, ಕಾಲಕಾಲಕ್ಕೆ ಅದಕ್ಕೆ ತಿದ್ದುಪಡಿಯಾಗಿದೆ, ಆದ್ದರಿಂದ ಕೇಂದ್ರ ಸರ್ಕಾರ ಅದರ ಮೇಲೆ ಪಾರಮ್ಯ ಹೊಂದಲು ಸಾಧ್ಯವಿಲ್ಲ” ಎಂದರು.

ಇದೇ ವೇಳೆ ನ್ಯಾಯಮೂರ್ತಿ ರಾವ್‌ “ಹಾಗಾದರೆ ಐಪಿಸಿ ಅಪರಾಧಗಳ ಕುರಿತಂತೆ ನಿರ್ಣಯಿಸಲು ರಾಷ್ಟ್ರಪತಿಗಳಿಗೆ ವಿಶೇಷಾಧಿಕಾರ ಇದೆಯೇ? ಕಳೆದ 70-75 ವರ್ಷಗಳಿಂದ ಇಂತಹ ಅಪರಾಧಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ ಎಲ್ಲಾ ಕ್ಷಮೆಗಳು ಅಸಾಂವಿಧಾನಿಕವೇ ಎಂದು ಪ್ರಶ್ನಿಸಿದರು.

Related Stories

No stories found.
Kannada Bar & Bench
kannada.barandbench.com