'ಮುತ್ತಿಗೆಗೀಡಾದ ಕೆಂಪುಕೋಟೆ' ರೈತರನ್ನು ತೆರವುಗೊಳಿಸಲು, ಅರೆಸೇನಾಪಡೆ ನಿಯೋಜಿಸಲು ದೆಹಲಿ ಹೈಕೋರ್ಟ್‌ಗೆ ಅರ್ಜಿ

ದೆಹಲಿಯ ಈಗಿನ ಪೊಲೀಸ್ ಆಯುಕ್ತರನ್ನು ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಎಂದು ಅರ್ಜಿದಾರರು ಪ್ರಾರ್ಥಿಸಿದ್ದಾರೆ.
'ಮುತ್ತಿಗೆಗೀಡಾದ ಕೆಂಪುಕೋಟೆ' ರೈತರನ್ನು ತೆರವುಗೊಳಿಸಲು, ಅರೆಸೇನಾಪಡೆ ನಿಯೋಜಿಸಲು ದೆಹಲಿ ಹೈಕೋರ್ಟ್‌ಗೆ ಅರ್ಜಿ

ರೈತ ಹೋರಾಟದ ಮುಸುಕು ಹೊದ್ದು ರಸ್ತೆಗಳಲ್ಲಿ ಕುಳಿತ ಜನರನ್ನು ತೆರವುಗೊಳಿಸಬೇಕೆಂದು ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. “ಗಣರಾಜ್ಯೋತ್ಸವದಂದು ಕೆಂಪು ಕೋಟೆ ಸೇರಿದಂತೆ ದೆಹಲಿಯ ವಿವಿಧ ಭಾಗಗಳಲ್ಲಿ ನಡೆದ ಕಂಡು ಕೇಳರಿಯಿದ ಬೆಳವಣಿಗೆಗಳಿಂದಾಗಿ ತಾವು ದಿಗ್ಭ್ರಮೆಗೊಂಡಿರುವುದಾಗಿ ಅರ್ಜಿದಾರ ಧನಂಜಯ್‌ ಜೈನ್‌ ಹೇಳಿದ್ದಾರೆ. ವಕೀಲ ಭೂಪ್‌ಸಿಂಗ್‌ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿಯ ಸಾರಂಶ

  • ಸುಮಾರು ಎರಡು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ.

  • ಶಸ್ತ್ರಾಸ್ತ್ರಗಳು, ಹಾಕಿ ದಂಡ, ಖಡ್ಗ ಹಿಡಿದು ದೆಹಲಿಯ ಒಳಭಾಗವನ್ನು ರೈತರು ಪ್ರವೇಶಿಸಿದಾಗ ಪ್ರತಿಭಟನೆ ತೀವ್ರ ಮತ್ತು ಹಿಂಸಾತ್ಮಕ ತಿರುವು ಪಡೆದು ಕಾನೂನು ಸುವ್ಯವಸ್ಥೆ ಮತ್ತು ಶಾಂತಿಗೆ ಭಂಗ ಉಂಟಾಯಿತು.

  • ಇದು ಗಣರಾಜ್ಯೋತ್ಸವವನ್ನು ಕುಂದಾಗಿಸಿದ್ದಲ್ಲದೆ ರಾಜಧಾನಿಯ ನೆಮ್ಮದಿಗೆ ಭಂಗ ತಂದಿತು.

  • ರೈತರು ರಾಜಧಾನಿಯನ್ನು ಒತ್ತೆಯಿರಿಸಿಕೊಂಡರು ಮತ್ತು ಇದರಿಂದ ನಗರದ ಜನಜೀವನ ಸಂಪೂರ್ಣ ಸ್ತಬ್ಧವಾಯಿತು.

  • ಹೋರಾಟವು ಪ್ರಜಾಸತ್ತಾತ್ಮಕವಾಗಿ, ನಾಗರಿಕ ವಿಧಾನದಲ್ಲಿ ಹಾಗೂ ಹಿಂಸೆಗೆ ಅವಕಾಶವಿಲ್ಲದಂತೆ ನಡೆಯಬೇಕು.

  • ಘಟನೆ ನಾಚಿಕೆಗೇಡಿನ ವಿಷಯವಾಗಿದ್ದು ಪೊಲೀಸರು ಅಸಹಾಯಕರಾಗಿದ್ದರು. ಅವರನ್ನು ಪ್ರತಿಭಟನಾಕಾರರು ಅಟ್ಟಾಡಿಸಿ, ಬೆದರಿಸಿ, ಹೊಡೆದರು.

  • ಹಿರಿಯ ಅಧಿಕಾರಿಗಳು ಗುಂಪನ್ನು ಚದುರಿಸಲು ಸೂಕ್ತ ಏರ್ಪಾಡು ಮಾಡಿರಲಿಲ್ಲ. ಪರಿಣಾಮ ಸಾರ್ವಭೌಮತೆಯ ಸಂಕೇತವಾದ ಕೆಂಪುಕೋಟೆಯಂತಹ ಕಟ್ಟಡ ಪ್ರತಿಭಟನಾಕಾರರ ಮುತ್ತಿಗೆಗೆ ಒಳಗಾಯಿತು.

  • ದೆಹಲಿ ಪೊಲೀಸ್‌ ಆಯುಕ್ತರು ಸಂಪೂರ್ಣ ಅಸಮರ್ಥರಾಗಿದ್ದರು. ಹೀಗಾಗಿ ರಾಜಧಾನಿಯ ಜನರು ಮತ್ತು ಸ್ಮಾರಕಗಳನ್ನು ರಕ್ಷಿಸಲು ಅರೆ-ಸೇನಾಪಡೆ ನಿಯೋಜಿಸಬೇಕು.

  • ದೆಹಲಿಯ ಈಗಿನ ಪೊಲೀಸ್‌ ಆಯುಕ್ತರನ್ನು ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದ ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು.

Related Stories

No stories found.
Kannada Bar & Bench
kannada.barandbench.com