ವರದಕ್ಷಿಣೆ ಕಿರುಕುಳದಿಂದ ಸತ್ತವರ ಸಂಬಂಧಿಗಳು ಹಿತಾಸಕ್ತಿ ಹೊಂದಿರುವವರು ಎಂದು ಅವರ ಸಾಕ್ಷಿ ತಿರಸ್ಕರಿಸಲಾಗದು: ಸುಪ್ರೀಂ

ವರದಕ್ಷಿಣೆಗಾಗಿ ಕಿರುಕುಳ ಎದುರಿಸುವ ಮಹಿಳೆಯು ಅದನ್ನು ತಮ್ಮ ಹತ್ತಿರದ ಸಂಬಂಧಿಗಳ ಬಳಿ ಹೇಳಿಕೊಳ್ಳುವ ಸಾಧ್ಯತೆ ಇದ್ದು, ಅವರ ಸಾಕ್ಷ್ಯ ತಿರಸ್ಕರಿಸುವುದೆಂದರೆ ಬೇರಾವುದೇ ವಿಶ್ವಾಸಾರ್ಹ ಸಾಕ್ಷಿಗಳಿಲ್ಲದಂತಾಗಲಿದೆ.
Gavel
Gavel

ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬ ಸದಸ್ಯರ ಸಾಕ್ಷಿಯನ್ನು ಹಿತಾಸಕ್ತಿಯ ಸಾಕ್ಷಿಯ ಎಂದು ತಿರಸ್ಕರಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಹೇಳಿದೆ.

ಕೊಲೆ, ವರದಕ್ಷಿಣೆ ಕಿರುಕುಳದಿಂದ ಸಾವು ಮತ್ತು ಸಾಕ್ಷ್ಯ ನಾಶ ಪ್ರಕರಣದಲ್ಲಿ ಪತಿ ಮತ್ತು ಆತನ ಕುಟುಂಬ ಸದಸ್ಯರನ್ನು 2004ರಲ್ಲಿ ವಿಚಾರಣಾಧೀನ ನ್ಯಾಯಾಲಯ ಖುಲಾಸೆಗೊಳಿಸಿತ್ತು. 2010ರಲ್ಲಿ ಕರ್ನಾಟಕ ಹೈಕೋರ್ಟ್‌ ಈ ಆದೇಶ ಎತ್ತಿ ಹಿಡಿದಿದ್ದರೂ, ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಪತಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ ನ್ಯಾಯಮೂರ್ತಿಗಳಾದ ದೀಪಂಕರ್‌ ದತ್ತಾ ಮತ್ತು ಎಸ್‌ವಿಎನ್‌ ಭಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶ ಮಾಡಿದೆ.

Justice Dipankar Datta and Justice SV Bhatti
Justice Dipankar Datta and Justice SV Bhatti

“ವರದಕ್ಷಿಣೆ ಕಿರುಕುಳದ ವಿಚಾರವನ್ನು ಮಹಿಳೆಯು ತನ್ನ ಸಮೀಪದ ಕುಟುಂಬ ಸದಸ್ಯರಿಂದ ಮುಚ್ಚಿಡುವ ಸಾಧ್ಯತೆ ಕಡಿಮೆ. ಹಿತಾಸಕ್ತಿ ಹೊಂದಿರುವವರು ಎಂದು ಕುಟುಂಬ ಸದಸ್ಯರ ಸಾಕ್ಷಿಯನ್ನು ತಿರಸ್ಕರಿಸುವುದಾದರೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಯಾರನ್ನು ವಿಶ್ವಾಸಾರ್ಹ ಸಾಕ್ಷಿ ಎಂದು ಪರಿಗಣಿಸಬೇಕು ಎಂದು ಆಶ್ಚರ್ಯವಾಗುತ್ತಿದೆ” ಎಂದು ಪೀಠ ಹೇಳಿತ್ತು.

ಅಲ್ಲದೇ, ಪತ್ನಿಯ ವರದಕ್ಷಿಣೆ ಕಿರುಕುಳ ಸಾವಿನಲ್ಲಿ ಪತ್ನಿಯನ್ನು ದೋಷಿ ಎಂದು ಪರಿಗಣಿಸಬಹುದೇ ಎಂಬುದನ್ನು ಹೊಸದಾಗಿ ನಿರ್ಧರಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ವರದಕ್ಷಿಣೆ ಕಿರುಕುಳಕ್ಕೆ ಆರೋಪ ನಿಗದಿಪಡಿಸಲು ಎಲ್ಲಾ ಅಂಶಗಳು ಲಭ್ಯ ಇವೆ ಎಂದೂ ಪೀಠ ಹೇಳಿದೆ. ಈ ನೆಲೆಯಲ್ಲಿ ಮೇಲ್ಮನವಿಯನ್ನು ಪುರಸ್ಕರಿಸಿರುವ ಪೀಠವು ಕಾನೂನಿನ ಅನ್ವಯ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ಸೂಚಿಸಿದೆ.

ಜೂನ್‌ 3ರವರೆಗೆ ಪತಿಗೆ ಮಧ್ಯಂತರ ರಕ್ಷಣೆ ಒದಗಿಸಿರುವ ನ್ಯಾಯಾಲಯವು ಜಾಮೀನು ಷರತ್ತುಗಳನ್ನು ಸತ್ರ ನ್ಯಾಯಾಲಯ ನಿರ್ಧರಿಸಲಿದೆ ಎಂದಿದೆ. ಹೈಕೋರ್ಟ್‌ ವಿಧಿಸಿದ್ದ ಸೆರೆವಾಸದ ಶಿಕ್ಷೆಯನ್ನು ಈವರೆಗೆ ಅನುಭವಿಸಿರುವುದನ್ನು ಹೊರತಡುಪಡಿಸಿ ಉಳಿದ ಶಿಕ್ಷೆಯನ್ನು ವಿಚಾರಣಾಧೀನ ನ್ಯಾಯಾಲಯವು ಹೊಸದಾಗಿ ಪ್ರಕರಣ ನಿರ್ಧರಿಸುವವರೆಗೆ ಅಮಾನತಿನಲ್ಲಿರಿಸಿದೆ.  

Related Stories

No stories found.
Kannada Bar & Bench
kannada.barandbench.com